ನೀರಿನ ಸೋರಿಕೆ ತಡೆಗಟ್ಟಲು ಶೀಘ್ರದಲ್ಲೇ ಜಾಗೃತದಳ ರಚನೆ: ಸಿಎಂ ಬೊಮ್ಮಾಯಿ

ನಗರದಲ್ಲಿ ನೀರಿನ ಕಳ್ಳತನ, ಅಕ್ರಮ ಸಂಪರ್ಕ ಮತ್ತು ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಶೀಘ್ರದಲ್ಲೇ ಜಾಗೃತ ದಳ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ನೀರಿನ ಕಳ್ಳತನ, ಅಕ್ರಮ ಸಂಪರ್ಕ ಮತ್ತು ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಶೀಘ್ರದಲ್ಲೇ ಜಾಗೃತ ದಳ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ.

ವಿಧಾನಪರಿಷತ್‌ನಲ್ಲಿ ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು, ನೀರು ನಿರ್ವಹಣೆಯಲ್ಲಿ ಸುಧಾರಣೆ ತರುವ ಅಗತ್ಯವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಅನಧಿಕೃತ ನೀರಿನ ಸಂಪರ್ಕ ಮತ್ತು ಕಳ್ಳತನವನ್ನು ಪರಿಶೀಲಿಸಲು ಜಾಗೃತ ದಳವನ್ನು ರಚಿಸಲಾಗುವುದು ಮತ್ತು ಸೋರಿಕೆಯನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರು ಜಲಮಂಡಳಿ ಕಾವೇರಿ ಒಂದರಿಂದ ನಾಲ್ಕನೇ ಹಂತದವರೆಗೆ 1450 ದಶಲಕ್ಷ ಲೀಟರ್ ಪೂರೈಕೆ ಮಾಡುತ್ತಿದೆ. ಕಾವೇರಿ ನೀರಿನ ಸಂಗ್ರಹಣೆ,ಸರಬರಾಜಿಗೆ ಮುನ್ನ ಜಲ ಶುದ್ಧೀಕರಣ ಘಟಕದಲ್ಲಿ ರಾಸಾಯನಿಕ ಬಳಕೆ, ವಿದ್ಯುತ್ ಶುಲ್ಕ, ಬಂಡವಾಳ ವೆಚ್ಚ ಹಾಗೂ ನೌಕರರ ವೇತನ ಸೇರಿ ಒಂದು ಕಿಲೋ ಮೀಟರ್ಗೆ 3.83 ಕೋಟಿ ರೂಪಾಯಿಗಳಷ್ಟು ವೆಚ್ಚವಾಗುತ್ತಿದೆ.

ಸಾರ್ವಜನಿಕ ಕೊಳಾಯಿಯಲ್ಲಿ ಶೇ.4ರಷ್ಟು, ಗೃಹ ಸಂಪರ್ಕಗಳ ಕೊಳವೆಗಳಲ್ಲಿ ಸೋರಿಕೆ ಶೇ.5, ಜಲಮಾಪಕಗಳ ಲೋಪದೋಷದಿಂದ ಶೇ.5, ಕೊಳಗೇರಿ ಪ್ರದೇಶದಲ್ಲಿ ಶೇ.4, ಹಳೆಯ, ಶಿಥಿಲಗೊಂಡ ನೆಲಮಟ್ಟದ ಜಲಾಶಯದಲ್ಲಿನ ಸೋರಿಕೆಯಿಂದ ಶೇ.5ರಷ್ಟು, ದಿನಂಪ್ರತಿ ರಸ್ತೆಗಳಲ್ಲಿ ಹೆಚ್ಚಿನ ವಾಹನಗಳ ಓಡಾಟದಿಂದ ನೀರಿನ ಕೊಳವೆಗಳ ಸೋರಿಕೆ ಹಾಗೂ ನೀರಿನ ಕೊಳವೆಗಳನ್ನು ಶುಚಿಗೊಳಿಸಲು ಉಪಯೋಗಿಸಲು ಶೇ.6ರಷ್ಟು ಸೇರಿ ಒಟ್ಟು ಶೇ.29ರಷ್ಟು ನೀರು ಪೋಲಾಗುತ್ತಿದೆ ಎಂದು ವಿವರಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದಾಗ ಈ ಸೋರಿಕೆ ಶೇ.32ರಷ್ಟಿತ್ತು. ಹಂತ ಹಂತವಾಗಿ ಕಡಿತ ಮಾಡಲಾಗಿದೆ. ನೀರು ಸಬರಾಜಿಗೆ 50 ವರ್ಷಗಳ ಹಿಂದೆ ಪೈಪ್ಗಳನ್ನು ಅಳವಡಿಸಲಾಗಿದ್ದು, ಅವು ಹಳೆಯದಾಗಿದ್ದು ಬದಲಾವಣೆ ಮಾಡಬೇಕಿದೆ. ಜೊತೆಗೆ ಹಳೆಯ ಶಿಥಲೀಕರಣಗಳ ಪುನಃಶ್ಚೇತನಗೊಳಿಸಬೇಕಿದೆ. ಈ ಎರಡು ಬಾಬ್ತುಗಳಿಗೆ ಸುಮಾರು ಎಂಟು ಸಾವಿರ ಕೋಟಿ ರೂಪಾಯಿ ಬೇಕಿದೆ. ಜಲಮಂಡಳಿಗೆ ಇದು ಆರ್ಥಿಕ ಹೊರೆಯಾಗುವುದರಿಂದ ಈ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಸಿಪಿಹೆಚ್ಇಇಓ ಮಾನದಂಡದ ಪ್ರಕಾರ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ.15ರಷ್ಟು ಇರಬೇಕಿದೆ. ಇದನ್ನು ಶೂನ್ಯಕ್ಕೆ ತರಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ 22 ಕಿಲೋ ಮೀಟರ್ ಪೈಪ್ ಲೈನ್ಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ 654 ಕೋಟಿ ರೂಪಾಯಿ ವೆಚ್ಚದಲ್ಲಿಕಾಮಗಾರಿ ನಡೆಯತ್ತಿದೆ ಎಂದು ವಿವರಿಸಿದರು. ಪ್ರತಿ ಕಿಲೋ ಮೀಟರ್ ನೀರು ಸರಬರಾಜಿಗೆ 41 ರೂಪಾಯಿ ವೆಚ್ಚವಾಗುತ್ತಿದೆ. ಅದರಂತೆ ದಿನವೊಂದಕ್ಕೆ ಮಂಡಳಿಗೆ 3.83 ಕೋಟಿ ರೂಪಾಯಿಗಳ ಶುಲ್ಕ ಸಂಗ್ರಹವಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಮಾತನಾಡಿದ ಭಾರತಿ ಶೆಟ್ಟಿ, ನೀರು ಸರಬರಾಜಿಗೆ ಪ್ರತಿದಿನ 5.94 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಸಂಗ್ರಹವಾಗುತ್ತಿರುವುದು 3.82 ಕೋಟಿ ರೂಪಾಯಿ ಮಾತ್ರ. ಬಾಕಿ 2.11 ಕೋಟಿ ರೂಪಾಯಿ ಪ್ರತಿ ದಿನ ನಷ್ಟವಾಗುತ್ತಿದೆ. ಇದನ್ನು ಹೇಗೆ ಭರಿಸಲಾಗುವುದು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು ನೀರಿನ ಸೋರಿಕೆ ತಡೆ ಗಟ್ಟಲು ಕ್ರಮ ಕೈಗೊಳ್ಳುವ ಜೊತೆಗೆ ಅಧಿಕಾರಿಗಳು ಅಕ್ರಮಗಳೊಂದಿಗೆ ಶಾಮೀಲಾಗಿರುವುದನ್ನು ಪತ್ರೆ ಹಚ್ಚಿ ಕ್ರಮ ಕೈಗೊಳ್ಳಲು ಜಾಗೃತ ದಳ ರಚಿಸಲಾಗುವುದು. ಅದೇ ರೀತಿ ನೀರಿನ ಒಳ ಹರಿವು ಮತ್ತು ಸರಬರಾಜು ಹಂತದಲ್ಲಿ ನೀರಿನ ಲೆಕ್ಕ ಹಾಕಲು ಆಡಿಟ್ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದರು.

ಬಳಿಕ ಮಾತನಾಡಿದ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರು, ಇತರ ಸಮುದಾಯದ ಮಂಡಳಿಗಳಿಗೆ ಹೆಚ್ಚುವರಿ ಅನುದಾನ ನೀಡಿದ್ದರೂ ಬ್ರಾಹ್ಮಣ ಮತ್ತು ಆರ್ಯವೈಶ್ಯ ಮಂಡಳಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಹಾಗೂ ಆರ್ಯ ವೈಶ್ಯ ಅಭಿವೃದ್ಧಿ ಮಂಡಳಿಗೆ ತಲಾ 10 ಕೋಟಿ ಅನುದಾನ ಮಂಜೂರು ಮಾಡಲಾಗುವುದು ಎಂದು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಮಂಜೂರಾದ 57 ಶಾದಿ ಮಹಲ್‌ಗಳ ನಿರ್ಮಾಣವನ್ನು ಸರ್ಕಾರ ಪೂರ್ಣಗೊಳಿಸಲಿದ್ದು, ಅವುಗಳಿಗೆ 54 ಕೋಟಿ ರೂ.ಗಳ ಅಗತ್ಯವಿದೆ. ಕಾಮಗಾರಿ ಪೂರ್ಣಗೊಂಡಂತೆ ಹಣ ಬಿಡುಗಡೆ ಮಾಡಲಾಗುವುದು. "ಪಿಎಚ್‌ಡಿ ಓದುತ್ತಿರುವ ಅಥವಾ ವಿದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com