ಹಂಪಿ: ಕಳೆದ ತಿಂಗಳು ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿ ಬಳಿಯ ರಾಣಿಪೇಟೆಯಲ್ಲಿ ಶಾಲಾ ಮಕ್ಕಳ ಕೈಗೆ ಅಪರೂಪದ ಯುರೇಷಿಯನ್ ಗ್ರಿಫನ್ ರಣಹದ್ದುಗಳು ಸಿಕ್ಕಿದ್ದವು.
ಅಸ್ವಸ್ಥ ಸ್ಥಿತಿಯಲ್ಲಿ ಅವರು ಶಾಲಾ ಮಕ್ಕಳ ಕಣ್ಣಿಗೆ ಬಿದ್ದಿದ್ದವು. ನಂತರ ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ ಬಣಗಾರ್ ಅವರು ಮಕ್ಕಳ ಕೈಯಿಂದ ರಣಹದ್ದುಗಳನ್ನು ರಕ್ಷಿಸಿ ತಾಲ್ಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯಕ್ಕೆ ನೀಡಿದ್ದರು.
ಮೃಗಾಲಯದ ತಜ್ಞ ಪಶುವೈದ್ಯೆ ಡಾ ವಾಣಿ ಹಾಗೂ ಸಿಬ್ಬಂದಿಗಳ ತಂಡ ಅಸ್ವಸ್ಥ ಸ್ಥಿತಿಯಲ್ಲಿದ್ದ ಪಕ್ಷಿಗೆ ಸೂಕ್ತ ಚಿಕಿತ್ಸೆ ನೀಡಿ ಇದೀಗ ಗುಣಪಡಿಸಿ ಮತ್ತೆ ಪಂಜರದಿಂದ ಮುಕ್ತಗೊಳಿಸಿ ಕಾಡಿಗೆ ಬಿಟ್ಟಿದ್ದಾರೆ. ತಾಲ್ಲೂಕಿನ ಇಂಗಳಿಗಿ ಗ್ರಾಮದ ಬೆಟ್ಟದ ತುದಿಯಲ್ಲಿ ಹಾರಿ ಬಿಟ್ಟಿದ್ದಾರೆ.
ವನ್ಯಜೀವಿ ಸಂಶೋಧಕ ಡಾ ಸಮದ್ ಕೊಟ್ಟೂರು ಅವರು ಈ ಪಕ್ಷಿಯ ಗುರುತು ಪತ್ತೆಹಚ್ಚಿ ಇದು ಒಂದು ವರ್ಷ ವಯೋಮಾನದ ಯುರೋಪಿಯನ್ ಗ್ರಿಫನ್ ರಣಹದ್ದು ಎಂದು ಗುರುತಿಸಿದ್ದಾರೆ.
ರಣಹದ್ದಿನ ಕಾಲಿಗೆ ವಿಶೇಷ ಗುರುತಿಗೆ ನೀಲಿ ಬಣ್ಣದ ಉಂಗುರವನ್ನು ಹಾಕಲಾಗಿದೆ. ಉಂಗುರದ ಮೇಲೆ ಸಿಯು ಎಂದು ಮುದ್ರಿಸಲಾಗಿದೆ. ಹಂಪಿಯ ಹತ್ತಿರ ಸಿಕ್ಕಿರುವುದು ಎಂದು ಮುಂದೆ ಇದನ್ನು ವಿಶೇಷವಾಗಿ ಸುಲಭವಾಗಿ ಗುರುತು ಹಿಡಿಯಬಹುದಾಗಿದೆ.
ಯುರೇಷಿಯನ್ ಗ್ರಿಫನ್ ರಣಹದ್ದುಗಳು ಸಾಮಾನ್ಯವಾಗಿ ಭಾರತದ ಉತ್ತರ ಭಾಗ, ವಾಯುವ್ಯ ಪ್ರದೇಶದಲ್ಲಿ ಕಂಡುಬರುತ್ತವೆ.
Advertisement