ಬೆಂಗಳೂರು: ಮುಂಗಾರು ಅವಧಿಯಲ್ಲಿ ನಗರದಲ್ಲಿ ಅತಿಸಾರದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಬಿಬಿಎಂಪಿ ನೀರಿನ ಮಾದರಿ ಪರೀಕ್ಷೆಯ ವರದಿಯ ಪ್ರಕಾರ ಬೆಂಗಳೂರು ದಕ್ಷಿಣ ಪ್ರದೇಶದಲ್ಲಿ ಕುಡಿಯಲು ಯೋಗ್ಯವಲ್ಲದ ನೀರಿನ ಮಾದರಿಗಳು ಅತಿ ಹೆಚ್ಚಾಗಿ ಕಂಡುಬಂದಿದೆ.
692 ಸ್ಯಾಂಪಲ್ ಗಳ ಪೈಕಿ 59 (ಶೇ.9 ರಷ್ಟು) ನ್ನು ಎನ್ಎಸ್ ಪಿಪಿ ಎಂದು ಗುರುತಿಸಲಾಗಿದ್ದು, ಈ ಪೈಕಿ 31 ಬೆಂಗಳೂರು ದಕ್ಷಿಣದಿಂದ ತಂದಿದ್ದಾಗಿವೆ. ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಎ.ಎಸ್ ಬಾಲಸುಂದರ್ ಈ ಬಗ್ಗೆ ಮಾಹಿತು ನೀಡಿದ್ದು, ಮುಂಗಾರು ಅವಧಿಯಲ್ಲಿ ನೀರು ಕಲುಶಿತಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದಾಗಿ ರೋಗ ಉಲ್ಬಣವಾಗುವ ಅಪಾಯವೂ ಹೆಚ್ಚಿದೆ ಆದ್ದರಿಂದ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಹೇಳಿದ್ದಾರೆ.
ನೀರಿನಲ್ಲಿನ ಕಲ್ಮಶಗಳಿರುವುದರ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳು ಆರ್ ಒ ಘಟಕಗಳು, ಹೋಟೆಲ್ ಗಳು, ಸಾರ್ವಜನಿಕ ಟ್ಯಾಪ್ ಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದಾರೆ. ಕುಡಿಯಲು ಯೋಗ್ಯವಲ್ಲದ ನೀರನ್ನು ಕ್ಲೋರಿನೇಟ್ ಮಾಡಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದೆ
ಪ್ರತಿ ತಿಂಗಳು ನೀರು ಕುಡಿಯಲು ಯೋಗ್ಯವಾಗಿದೆಯೇ? ಎಂಬುದನ್ನು ಅರಿಯಲು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಜೂನ್ ನಲ್ಲಿ ಸಂಗ್ರಹಿಸಲಾದ ನೀರಿನ ಮಾದರಿಗಳ ಪೈಕಿ ಶೇ.2-3 ರಷ್ಟು ಎನ್ ಎಸ್ ಪಿಪಿಗಳಾಗಿದ್ದವು. ಪರಿಣಾಮ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗಿದೆ. ಆದರೆ ಖಾಸಗಿ ಆಸ್ಪತ್ರೆಯ ಮೂಲಕ ಚಿಕಿತ್ಸೆ ಪಡೆದುಕೊಂಡವರ ಬಗ್ಗೆ ನಿಖರ ಅಂಕಿ-ಅಂಶಗಳು ಲಭ್ಯವಾಗಿಲ್ಲ.
ಇತ್ತೀಚಿನ ದಿನಗಳಲ್ಲಿ, ವಾರಕ್ಕೆ 18-20 ಅತಿಸಾರದಿಂದ ಬಳಲುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಈ ಪೈಕಿ ಹಲವರಿಗೆ ಹೊರಗೆ ತಿನ್ನುವುದು ಹಾಗೂ ಕಲುಶಿತ ನೀರಿನ ಸೇವನೆಯಿಂದಾಗಿ ಆರೋಗ್ಯ ಹದಗೆಟ್ಟಿದೆ ಎಂದು ಸಿಎಂಐ ಆಸ್ಪತ್ರೆಯ ಡಾ. ಪರಿಮಳ ವಿ ತಿರುಮಲೇಶ್ ಹೇಳಿದ್ದಾರೆ.
ಮುಂಗಾರು ಅವಧಿಯಲ್ಲಿ ಈ ರೀತಿಯ ಪ್ರಕರಣಗಳು ಸಾಮಾನ್ಯವಾಗಿದ್ದು, ಮಳೆಯಿಂದಾಗಿ ಉಕ್ಕಿ ಹರಿಯುವ ಚರಂಡಿಗಳು ಭೂಮಿಗೆ ಸೇರಿ, ಅಂತರ್ಜಲ ಕಲುಶಿತಗೊಳ್ಳುತ್ತವೆ. ಇದರಿಂದಾಗಿ ಅತಿಸಾರದಂತಹ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ.
Advertisement