ಇತರೆ ಇಲಾಖೆಯ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

ಎಸ್‌ಸಿ/ಎಸ್‌ಟಿ, ಜಲಸಂಪನ್ಮೂಲ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಯ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿಯ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರು ಸೋಮವಾರ ಆರೋಪಿಸಿದ್ದಾರೆ.
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ

ಬೆಂಗಳೂರು: ಎಸ್‌ಸಿ/ಎಸ್‌ಟಿ, ಜಲಸಂಪನ್ಮೂಲ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಯ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿಯ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರು ಸೋಮವಾರ ಆರೋಪಿಸಿದ್ದಾರೆ.

ವಿಧಾನಸಭೆಯಲ್ಲಿ 2023-24ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆ ಮುಂದುವರೆಸಿದ ಅವರು, ಬಜೆಟ್‍ನಲ್ಲಿ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದು ಸಂಪ್ರದಾಯ. ಆದರೆ, ಹಿಂದಿನ ಸರ್ಕಾರವನ್ನು ಬಜೆಟ್ ಭಾಷಣದಲ್ಲಿ ತೆಗಳಿದ್ದಾರೆ. ಕೇಂದ್ರ ಸರ್ಕಾರ ದೇಶವನ್ನು ಹಾಳು ಮಾಡಿದೆ ಎಂಬಂತೆ ಬಿಂಬಿಸಿದ್ದಾರೆ. ಈ ಹಿಂದೆ ಯಾರು ಈ ರೀತಿಯ ಬಜೆಟ್ ಮಂಡಿಸಿರಲಿಲ್ಲ. ಇದನ್ನು ಖಂಡಿಸುವುದಾಗಿ ಹೇಳಿದರು.

ಎರಡನೇ ಜಾಗತಿಕ ಯುದ್ಧದ ನಂತರ ಕೋವಿಡ್ ಸಂದರ್ಭದಲ್ಲಿ ವಿಶ್ವವೇ ಕಠಿಣ ಪರಿಸ್ಥಿತಿ ಎದುರಿಸಿತು. ಇದರಿಂದ ಅಭಿವೃದ್ಧಿ ಕನಿಷ್ಠಕ್ಕೆ ಬಂದಿತು. ಆದರೂ ಕೇಂದ್ರ ಸರ್ಕಾರ ರಾಷ್ಟ್ರವನ್ನು ಅದೋಗತಿಗೆ ತೆಗೆದುಕೊಂಡು ಹೋಗಿದೆ ಎಂದು ಜರಿದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಳಸಿದ ಶಬ್ದವನ್ನು ಕಡತದಿಂದ ತೆಗೆಯಬೇಕು ಎಂದು ಆಡಳಿತ ಪಕ್ಷದ ಶಾಸಕರಾದ ಎನ್.ಎಚ್.ಕೋನರೆಡ್ಡಿ, ಷಡಕ್ಷರಿ ಆಕ್ಷೇಪಿಸಿದರು.

ಇದಕ್ಕೆ ಉತ್ತರಿಸಿದ ಆರಗ ಜ್ಞಾನೇಂದ್ರ ಅವರು, ಮುಖ್ಯಮಂತ್ರಿ ಈ ರೀತಿಯ ಬಜೆಟ್ ಮಂಡಿಸುವಾಗ ನೋವಾಗಿತ್ತು. ಅಡ್ಡಿಪಡಿಸಬೇಕಿತ್ತು. ಆದರೂ ಸಹನೆಯಿಂದ ಆಲಿಸಿದೆವು ಎಂದರು.

ಈ ವೇಳೆಇಂಧನ ಸಚಿವ ಕೆ.ಜೆ.ಜಾರ್ಜ್ ಅವರು 3.27 ಲಕ್ಷ ಕೋಟಿ ಬಜೆಟ್‍ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಿಲ್ಲವೆ ಎಂದು ಪ್ರಶ್ನಿಸಿ, ಬಸವರಾಜ ಬೊಮ್ಮಾಯಿ ಅವರು ಇದಕ್ಕೂ ಮುನ್ನ ಬಜೆಟ್ ಮಂಡಿಸಿದ್ದರು. ಹೀಗಾಗಿ ಹೆಚ್ಚಿನ ಹೊಸ ಯೋಜನೆಗಳು ಇಲ್ಲ ಎಂದು ಸಮರ್ಥಿಸಿಕೊಂಡರು.

ಬಳಿಕ ಆರಗ ಜ್ಞಾನೇಂದ್ರ ಮಾತನಾಡಿ, ಗ್ಯಾರಂಟಿಗಳು ಪುಷ್ಪಕ ವಿಮಾನವೇರಿದಂತೆ ಬಂದವು. ಗ್ಯಾರಂಟಿ ಕಾರ್ಡ್ ಬಹಳ ಕೆಲಸ ಮಾಡಿದೆ. ರಾಜಕೀಯದಲ್ಲಿ ನೀವು ಮಾಡಿದ ತಂತ್ರ ಯಾರು ಮಾಡಿಲ್ಲ. ಸಾಧನೆ ಆಧಾರದ ಮೇಲೆ ಮತ ಯಾಚಿಸುವ ಬದಲು ಆಮಿಷವೊಡ್ಡಿ ಮತ ಕೇಳಿದ್ದೀರಾ? ಬಜೆಟ್‍ನಲ್ಲಿನ ಅಂಕಿ-ಅಂಶಗಳು ಜನರಿಗೆ ಮೋಸ ಮಾಡುವಂತಿವೆ. ರಾಜ್ಯದ ಹಿತ ಮತ್ತು ಜನರ ಹಿತ ಬಲಿಕೊಟ್ಟು ಅಧಿಕಾರಕ್ಕೆ ಬಂದಿದ್ಧೀರಿ ಎಂದಾಗ ಆಡಳಿತ ಪಕ್ಷದ ಶಾಸಕ ಅಭಯಪ್ರಸಾದ್ ಮತ್ತು ಸಚಿವ ಪ್ರಿಯಾಂಕ ಖರ್ಗೆ ಆಕ್ಷೇಪಿಸಿದರು.

ಎಸ್ಸಿಎಸ್ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಟಿಎಸ್‍ಪಿ ಮತ್ತು ಎಸ್‍ಇಪಿ ಯೋಜನೆಗಳಿಗೆ ಬಜೆಟ್‍ನಲ್ಲಿ 34 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿ ತಿಳಿಸಿ, ಗ್ಯಾರಂಟಿ ಯೋಜನೆಗಳಿಗಾಗಿ ಇದೇ ಮೊತ್ತದಿಂದ 11 ಸಾವಿರ ಕೋಟಿ ರೂ. ಕಡಿತಗೊಳಿಸಲಾಗಿದೆ. ಈ ಮೂಲಕ ಆ ಸಮುದಾಯಗಳ ಅನ್ನವನ್ನು ಕಿತ್ತುಕೊಂಡಂತಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ ಅವರು, ನಿಮ್ಮ ಆಡಳಿತಾವಧಿಯಲ್ಲಿ 17 ಸಾವಿರ ಕೋಟಿ ರೂ. ಮೀಸಲಿಟ್ಟು, 10 ಸಾವಿರ ಕೋಟಿ ರೂ.ಗಳನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಿಲ್ಲವೇ ಎಂದು ಪ್ರಶ್ನಿಸಿದರು.

ನಂತರ ಮಾತು ಮುಂದುವರೆಸಿದ ಆರಗ ಜ್ಞಾನೇಂದ್ರ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಉತ್ತಮವಾಗಿಲ್ಲ. ಕೇವಲ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಹಿಂದಿನ ಸರ್ಕಾರವನ್ನು ದೂಷಣೆ ಮಾಡಲು ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ ಎಂದು ಆಕ್ಷೇಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com