ಆಗಸ್ಟ್​ 1 ರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಆಟೋ, ಬೈಕ್ ಸಂಚಾರಕ್ಕೆ ನಿರ್ಬಂಧ; 6 ತಿಂಗಳಲ್ಲಿ 132 ಮಂದಿ ಸಾವು!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜುಲೈ 12 ರಂದು ಈ ಆದೇಶ ಹೊರಡಿಸಿದ್ದು, ಆಗಸ್ಟ್ 1 ರಿಂದ ನಿಯಮ ಜಾರಿಯಾಗಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ

ಬೆಂಗಳೂರು: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಆಗಸ್ಟ್ 1 ರಿಂದ ಬೈಕ್ ಹಾಗೂ ಆಟೋಗಳಿಗೆ ನಿರ್ಬಂಧ ಮಾಡಲಾಗಿದೆ. ಈ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಈ ದಶಪಥ ಹೆದ್ದಾರಿಯಲ್ಲಿ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ದ್ವಿಚಕ್ರ ಹಾಗೂ ಮೂರು ಚಕ್ರದ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜುಲೈ 12 ರಂದು ಈ ಆದೇಶ ಹೊರಡಿಸಿದ್ದು, ಆಗಸ್ಟ್ 1 ರಿಂದ ನಿಯಮ ಜಾರಿಯಾಗಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ದಶಪಥ ಹೆದ್ದಾರಿಯಲ್ಲಿ 80 ಕಿಲೋ ಮೀಟರ್ ದಿಂದ 100 ಕಿಲೋಮೀಟರ್ ವರೆಗೆ ವೇಗಮಿತಿಯಲ್ಲಿ ಚಲಿಸಲು ಅವಕಾಶ ಇರುವುದರಿಂದ ಅಪಘಾತ ತಡೆಯುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಈ‌ ಕ್ರಮಕ್ಕೆ ಮುಂದಾಗಿದೆ. ಇದಲ್ಲದೆ ಈ ರಸ್ತೆಯಲ್ಲಿ ವೇಗಕ್ಕೆ ಹೊಂದಿಕೊಳ್ಳಲು ಹಾಗೂ ರಸ್ತೆ ಸುರಕ್ಷತೆಗೆ ಹೊಂದಿಕೊಳ್ಳದ ಕಾರಣ ದ್ವಿಚಕ್ರ ವಾಹನಗಳು ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್​ಗಳು ಸೇರಿದಂತೆ ಕೆಲವು ವಾಹನಗಳ ಮೇಲೆ ನಿಷೇಧ ಮಾಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ಮೋಟಾರ್ ಸೈಕಲ್​ಗಳು (ಸ್ಕೂಟರ್ ಹಾಗೂ ಇತರೆ ದ್ವಿಚಕ್ರ ವಾಹನಗಳು). ಮೂರು ಚಕ್ರದ ವಾಹನಗಳು (ಇ ಗಾಡಿಗಳು ಮತ್ತು ಇ ರಿಕ್ಷಾಗಳು). ಮೋಟಾರ್ ರಹಿತ ವಾಹನಗಳು. ಟ್ರೈಲರ್​ಗಳ ಸಹಿತ ಹಾಗೂ ರಹಿತವಾದ ವಿಶೇಷ ಟ್ರ್ಯಾಕ್ಟರ್​ಗಳು. ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು ಹೀಗೆ ವೇಗ ಮಿತಿ ಕಡಿಮೆ ಇರುವ ವಾಹನಗಳಿಗೆ ದಶಪಥ ಹೆದ್ದಾರಿಯಲ್ಲಿ ಸಂಚರಿಸಲು‌ ಸಂಪೂರ್ಣ ನಿಷೇಧ ಹೇರಲಾಗಿದೆ.

ಟೋಲ್ ಶುಲ್ಕದೊಂದಿಗೆ ಹೆಚ್ಚಿನ ಘನ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು ಅನುಮತಿಸಲು NHAI ಗೆ ಮನವಿ ಮಾಡಲಾಗಿತ್ತು, ಆದರೆ  ಎಲ್ಲಾ ವಿನಂತಿಗಳನ್ನು ನಿರಾಕರಿಸಲಾಗಿದೆ. ಎಲ್ಲಾ ರೀತಿಯ ದ್ವಿಚಕ್ರ ವಾಹನಗಳ ಮೇಲೆ  ನಿಷೇಧವನ್ನು ವಿಧಿಸಲಾಗಿದೆ.

ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ 6-ಲೇನ್ ಎಕ್ಸ್‌ಪ್ರೆಸ್‌ವೇಯನ್ನು ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಉದ್ಘಾಟಿಸಿದರು, ಆದರೆ ತಿಂಗಳ ಹಿಂದೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಮಾರಣಾಂತಿಕ ಅಪಘಾತಗಳು, ಟೋಲ್ ಶುಲ್ಕದ ವಿವಾದ, ನಿರಂತರ ಸರ್ವಿಸ್ ರಸ್ತೆಯ ಕೊರತೆ ಸೇರಿದಂತೆ ಒಂದಲ್ಲ ಒಂದು ಕಾರಣದಿಂದ ಇದು ಸುದ್ದಿಯಲ್ಲಿದೆ.

ಎಕ್ಸ್ ಪ್ರೆಸ್-ವೇಯಲ್ಲಿ ವೈಜ್ಞಾನಿಕ ಯೋಜನೆಯ ಕೊರತೆಯಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಹೇಳಿದ್ದರು.  ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಜೂನ್‌ನಲ್ಲಿ ಸಮಿತಿ ರಚಿಸಿ, ಪರಿಶೀಲಿಸಿ ಅತಿವೇಗದ ವಾಹನಗಳಿಗೆ ದಂಡ ವಿಧಿಸಲು ಪ್ರಾರಂಭಿಸಿತು. ಜನವರಿಯಿಂದ ಇ-ವೇಯಲ್ಲಿ ಸಂಭವಿಸಿದ 296 ಅಪಘಾತಗಳಲ್ಲಿ 132 ಮಂದಿ ಸಾವಿಗೀಡಾಗಿದ್ದಾರೆ. ಇ-ವೇಯಲ್ಲಿಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿ.ಮೀ. ನಿಗದಿ ಪಡಿಸಲಾಗಿದೆ.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇಗೆ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತ ಹೆಚ್ಚಳದ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ಭೇಟಿ ನೀಡಿದ್ದ ಎಡಿಜಿಪಿ, ಅಪಘಾತ ತಡೆಗೆ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾ ಪೊಲೀಸರು ಹಾಗೂ ಆರ್ ಟಿಒ ಅಧಿಕಾರಿಗಳೊಂದಿಗೆ ಇಂದು ಅಲೋಕ್ ಕುಮಾರ್ ಭೇಟಿ ನೀಡಿದರು. ಪೊಲೀಸ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಮತ್ತು ಹಾಗೂ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಐಜಿಪಿ ರವಿಕಾಂತೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್, ಎಕ್ಸ್‌ಪ್ರೆಸ್‌ ವೇ ಯೋಜನಾ ಅಧಿಕಾರಿ, ರಾಹುಲ್ ಗುಪ್ತಾ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com