ಗದಗ: ವಿದ್ಯುತ್ ಕಂಬ ಸ್ಪರ್ಶಿಸಿದ ಬಾಲಕನಿಗೆ 'ಕರೆಂಟ್ ಶಾಕ್', ಸಾವು

ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಕಂಬ ಸ್ಪರ್ಶಿಸಿದ ಬಾಲಕನಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗದಲ್ಲಿ ನಡೆದಿದೆ.
ವಿದ್ಯುತ್ ಶಾಕ್-ಬಾಲಕ ಸಾವು
ವಿದ್ಯುತ್ ಶಾಕ್-ಬಾಲಕ ಸಾವು

ಗದಗ: ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಕಂಬ ಸ್ಪರ್ಶಿಸಿದ ಬಾಲಕನಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗದಲ್ಲಿ ನಡೆದಿದೆ.

ಗದಗ ಜಿಲ್ಲೆಯ ಗಜೇಂದ್ರಗಡದ ಜನತಾ ಪ್ಲಾಟ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ವಿದ್ಯುತ್ ಕಂಬ ಮುಟ್ಟಿದ 12 ವರ್ಷದ ಬಾಲಕನಿಗಿ ವಿದ್ಯುತ್ ಪ್ರವಹಿಸಿ ಆತ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು 12 ವರ್ಷದ ಪಂಕಜ್ ಎಂದು ಗುರುತಿಸಲಾಗಿದೆ. ಪಂಕಜ್ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಕಂಬದ ಸಮೀಪಕ್ಕೆ ಹೋಗಿ ಕಂಬ ಸ್ಪರ್ಶಿಸಿದ್ದಾನೆ. ಈ ವೇಳೆ ವಿದ್ಯುತ್ ಪ್ರವಹಿಸಿ ಆತ ಮೃತಪಟ್ಟಿದ್ದಾನೆ. ಕೂಡಲೇ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಇತರ ಮಕ್ಕಳಿಗೆ ಕಂಬದಿಂದ ದೂರ ಇರುವಂತೆ ಹೇಳಿದ್ದಾರೆ.

ಬಳಿಕ ಸ್ಥಳೀಯರು ವಿದ್ಯುತ್ ಇಲಾಖೆ ಸಿಬ್ಬಂದಿ ಹಾಗೂ ಗುತ್ತಿಗೆದಾರರಿಗೆ ಕರೆ ಮಾಡಿ ಮನವಿ ಮಾಡಿದರೂ ಸ್ಪಂದಿಸದ ಕಾರಣ ನಿವಾಸಿಗಳು ಪ್ರತಿಭಟನೆ ನಡೆಸಿದರು. ಹೆಸ್ಕಾಂ ವಿರುದ್ಧವೂ ಘೋಷಣೆ ಕೂಗಿದರು. ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಸಿಬ್ಬಂದಿ ಜವಾಬ್ದಾರಿ ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. 

ಗಜೇಂದ್ರಗಡ ಪಟ್ಟಣದ ಗಜೇಂದ್ರಗಡ–ಯಲಬುರ್ಗಾ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಕೆಲ ಸಿಬ್ಬಂದಿ ಕಾಮಗಾರಿಯನ್ನು ಅಪೂರ್ಣಗೊಳಿಸಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.  

ಇನ್ನು ಘಟನಾ ಸ್ಥಳಕ್ಕೆ ಗಜೇಂದ್ರಗಡ ಪಿಎಸ್‌ಐ ನಾಗರಾಜ್ ಗಡಾದ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂತ್ರಸ್ತ ಬಾಲಕನ ತಂದೆ ರಾಮು ಕಲಾಲ್ ಮಾತನಾಡಿ, ಪಂಕಜ್ ನಮಗೆ ತುಂಬಾ ಪ್ರೀತಿಯ ಮಗನಾಗಿದ್ದ. ಕೆಲಸಗಾರರು ಸರಿಯಾಗಿ ಕೆಲಸ ಮುಗಿಸಿದ್ದರೆ ಇಂದು ನಮ್ಮ ಮಗ ಬದುಕಿರುತ್ತಿದ್ದ. ಕಂಬದ ಮೂಲಕ ಹಾದು ಹೋಗುವ ವಿದ್ಯುತ್ ಬಗ್ಗೆ ನಮಗೆ ತಿಳಿದಿರಲಿಲ್ಲ. ಇಲ್ಲದಿದ್ದರೆ, ನಾವು ಯಾವುದೇ ಮಗುವನ್ನು ಅದರ ಸುತ್ತಲೂ ಆಡಲು ಬಿಡುತ್ತಿರಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com