ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪಗೆ 16 ಕೊಲೆ ಬೆದರಿಕೆ ಪತ್ರ: ಭದ್ರತೆ ಒದಗಿಸಿದ ಪೊಲೀಸರು

ಕನ್ನಡದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ 16 ಕೊಲೆ ಬೆದರಿಕೆ ಪತ್ರಗಳು ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಒದಗಿಸಲಾಗಿದೆ ಎಂದು ಕರ್ನಾಟಕ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸಾಹಿತಿ ಕುಂ ವೀರಭದ್ರಪ್ಪ
ಸಾಹಿತಿ ಕುಂ ವೀರಭದ್ರಪ್ಪ

ವಿಜಯನಗರ: ಕನ್ನಡದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ 16 ಕೊಲೆ ಬೆದರಿಕೆ ಪತ್ರಗಳು ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಒದಗಿಸಲಾಗಿದೆ ಎಂದು ಕರ್ನಾಟಕ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಕುಂವೀ ಎಂದೇ ಹೆಸರಾಗಿರುವ ವೀರಭದ್ರಪ್ಪ ಅವರ ಕಾವಲಿಗೆ ಜಿಲ್ಲಾ ಪೊಲೀಸ್ ಮೀಸಲು ಪಡೆ ಶಸ್ತ್ರಸಜ್ಜಿತ ಪೇದೆಯನ್ನು ನಿಯೋಜಿಸಿದೆ ಎಂದು ಹೇಳಿದರು.

'ಒಬ್ಬ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಆತನ ಕೈಬರಹದ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ರಕ್ಷಣೆ ಕುರಿತು ಮಾತನಾಡಿದ ವೀರಭದ್ರಪ್ಪ, ‘ಬೆದರಿಕೆಗಳ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ, ಪುಸ್ತಕ ಬರೆಯುವ ಕೆಲಸದಲ್ಲಿ ತೊಡಗಿದ್ದೇನೆ’ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಹೆಚ್ಚುತ್ತಿರುವ ಅಸಹಿಷ್ಣುತೆ, ಸಂವಿಧಾನ ಮತ್ತು ಜಾತ್ಯತೀತತೆಗೆ ಬೆದರಿಕೆಯನ್ನು ವಿರೋಧಿಸಿ ವೀರಭದ್ರಪ್ಪ ಅವರು 2008ರಲ್ಲಿ ತಮ್ಮ ‘ಅರಮನೆ’ ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿಯಿಂದ ನೀಡಲಾದ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು. ತಾನು ಲಿಂಗಾಯತನೇ ಹೊರತು ಹಿಂದೂ ಅಲ್ಲ ಎಂದು ಘೋಷಿಸಿದ್ದರು.

ಲೇಖಕಿ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಮತ್ತು ಪ್ರೊ. ಎಂಎಂ ಕಲಬುರ್ಗಿ ಅವರ ಭೀಕರ ಹತ್ಯೆಗಳ ಹಿನ್ನೆಲೆಯಲ್ಲಿ ಅವರಿಗೆ ಜೀವ ಬೆದರಿಕೆಯ ಬೆಳವಣಿಗೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಸಾಹಿತಿ ವೀರಭದ್ರಪ್ಪ ಅವರು ಹಿಜಾಬ್ ನಿಷೇಧ ಮತ್ತು ಹಲಾಲ್ ಮಾಂಸ ಮತ್ತು ಮುಸ್ಲಿಂ ಮಾವು ಮಾರಾಟಗಾರರ ಮೇಲಿನ ಬಹಿಷ್ಕಾರ ಕರೆಗಳಂತಹ ವಿಷಯಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಬೆಂಬಲ ನೀಡಿದ್ದಾರೆ.

ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಮೌನವಹಿಸಿದ ಸಾಹಿತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಬರಹಗಾರನಿಗೆ ಅವನ/ಆಕೆಯ ಜೀವಕ್ಕಿಂತ ಸಮಾಜದ ಸ್ವಾಸ್ಥ್ಯ ಮುಖ್ಯ ಎಂದು ಪ್ರತಿಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com