ದಕ್ಷಿಣ ಕನ್ನಡ: ಪ್ರೇಮಿಯೊಂದಿಗೆ ಓಡಿಹೋಗಲು ವಿವಾಹಿತ ಮಹಿಳೆಗೆ ನೆರವಾದ ಉಚಿತ ಬಸ್ ಪ್ರಯಾಣ!
ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರು ಪೇಟೆಯಲ್ಲಿ 11 ತಿಂಗಳ ಮಗುವಿನ ತಾಯಿಯಾಗಿರುವ ಮಹಿಳೆಯೊಬ್ಬರು ತನ್ನ ಪ್ರೇಮಿಯೊಂದಿಗೆ ಸೇರಲು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಬಳಸಿಕೊಳ್ಳುವ ಮೂಲಕ ಓಡಿಹೋಗಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಪೊಲೀಸರ ಪ್ರಕಾರ, ಆಕೆಯ ಪ್ರೇಮ ಸಂಬಂಧದ ಬಗ್ಗೆ ತಿಳಿದ ಮನೆಯವರು ಆಕೆಯ ಚಲನವಲನವನ್ನು ನಿರ್ಬಂಧಿಸಿದರು. ಹಣ ಮತ್ತು ಮೊಬೈಲ್ ಫೋನ್ ಅನ್ನು ಕಿತ್ತಿಟ್ಟುಕೊಂಡಿದ್ದರು.
ಹುಬ್ಬಳ್ಳಿ ನಿವಾಸಿಯಾಗಿರುವ ಮಹಿಳೆ, ಪುತ್ತೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಸಂಬಂಧಕ್ಕೆ ಆಕೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು ಮತ್ತು ಬೇರೊಬ್ಬ ವ್ಯಕ್ತಿಯೊಂದಿಗೆ ಆಕೆಯ ವಿವಾಹ ಮಾಡಿದ್ದರು.
ಹೆರಿಗೆಗಾಗಿ ಆಕೆಯನ್ನು ಪೋಷಕರ ಮನೆಗೆ ಕಳುಹಿಸಲಾಗಿತ್ತು. ತನ್ನ ಮದುವೆಯ ಹೊರತಾಗಿಯೂ, ಆಕೆ ಪ್ರಿಯಕರನೊಂದಿಗೆ ತನ್ನ ಸಂಬಂಧವನ್ನು ಮುಂದುವರೆಸಿದ್ದಳು.
ಹೊಸ ಜೀವನವನ್ನು ಆರಂಭಿಸಲು ಪುತ್ತೂರಿಗೆ ಬರುವಂತೆ ಪ್ರಿಯಕರ ಆಕೆಗೆ ತಿಳಿಸಿದ್ದಾನೆ. ಈ ವೇಳೆ ತನ್ನ ಬಳಿ ಒಂದು ಪೈಸೆಯೂ ದುಡ್ಡಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಆದರೆ, ಉಚಿತ ಪ್ರಯಾಣ ಯೋಜನೆ ಘೋಷಣೆಯಾದ ತಕ್ಷಣ ಮಹಿಳೆ ತನ್ನ ಮನೆಯಿಂದ ಶಿಶುವನ್ನು ಬಿಟ್ಟು ಪರಾರಿಯಾಗಿ ಜೂನ್ 13ರಂದು ಸರ್ಕಾರಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸುವ ಮೂಲಕ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡಿದ್ದಾಳೆ.
ಮಹಿಳೆ ಪುತ್ತೂರಿಗೆ ಪ್ರಯಾಣ ಬೆಳೆಸುತ್ತಾಳೆಂದು ತಿಳಿದ ಪೋಷಕರು ಕೂಡ ಆಕೆಯನ್ನು ಹಿಂಬಾಲಿಸಿದ್ದಾರೆ. ಅಲ್ಲಿ ವಿಚಾರಿಸಿದಾಗ, ಕದಂಬಾಡಿ ಗ್ರಾಮದಿಂದ ತಮ್ಮ ಮಗಳ ಪ್ರೇಮಿಯೂ ನಾಪತ್ತೆಯಾಗಿರುವುದು ಕಂಡುಬಂದಿದೆ.
ಈ ಸಂಬಂಧ ಪುತ್ತೂರು ಪೊಲೀಸರಿಗೆ ದೂರು ನೀಡಲಾಗಿದೆ. ತನಿಖೆಯ ವೇಳೆ ಪರಾರಿಯಾಗಿರುವ ತಾಯಿ ಮತ್ತು ಆಕೆಯ ಪ್ರಿಯಕರ ಸಿದ್ದಕಟ್ಟೆ ಗ್ರಾಮದಲ್ಲಿದ್ದಾರೆ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ