ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ: ಬ್ರಾಹ್ಮಣರು ಯಹೂದಿಗಳಂತೆ ಎದ್ದು ನಿಲ್ಲಿ; ರೋಹಿತ್‌ ಚಕ್ರತೀರ್ಥ ಗೆಲಿಲಿಯೋ ಕಥೆ ಹೇಳಿದ್ದೇಕೆ?

ಯಹೂದಿಗಳಿಗೆ 2,500 ವರ್ಷಗಳವರೆಗೆ ಜಗತ್ತಿನಲ್ಲಿ ನೆಲೆಯೇ ಇರಲಿಲ್ಲ. ಆದರೂ ಜ್ಞಾನಾರ್ಥಿಗಳಾಗಿ ವಿಶ್ವಕ್ಕೆ ಮಾರ್ಗದರ್ಶನ ಮಾಡುತ್ತಾ ಬದುಕಿದರು‌. ಅವರು ವಿಶ್ವದಾದ್ಯಂತ ಶೇ 5 ರಷ್ಟು ಇದ್ದಾರೆ. ಆದರೆ ಎಲ್ಲರೂ ಅವರನ್ನ ಒಪ್ಪಿಕೊಂಡು ಬದುಕುವಂತೆ ಸಾಧಿಸಿ ತೋರಿಸಿಕೊಟ್ಟಿದ್ದಾರೆ
ರೋಹಿತ್ ಚಕ್ರತೀರ್ಥ
ರೋಹಿತ್ ಚಕ್ರತೀರ್ಥ

ಶಿವಮೊಗ್ಗ: ಬ್ರಾಹ್ಮಣರು ಜಾಗತಿಕವಾಗಿ ಯಹೂದಿಗಳಂತೆ ಎದ್ದುನಿಲ್ಲಬೇಕಿದೆ ಎಂದು ಅಂಕಣಕಾರ ರೋಹಿತ್ ಚಕ್ರತೀರ್ಥ ಅಭಿಪ್ರಾಯಪಟ್ಟಿದ್ದಾರೆ.

ಶಿವಮೊಗ್ಗದಲ್ಲಿ ಗುರುವಾರ ರಾತ್ರಿ ವಿಪ್ರ ಬಾಂಧವರ ಸ್ನೇಹ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರ ರೂಪಿಸಿದ್ದ ಪಠ್ಯಪುಸ್ತಕದ ಪರಿಷ್ಕರಣೆ ಕುರಿತು ಗೆಲಿಲಿಯೋ ಕಥೆಯೊಂದನ್ನು ಹೇಳಿ ಅವರು ರಾಜ್ಯ ಸರ್ಕಾರದ ಕಾಲೆಳೆದಿದ್ದಾರೆ.

ಯಹೂದಿಗಳಿಗೆ 2,500 ವರ್ಷಗಳವರೆಗೆ ಜಗತ್ತಿನಲ್ಲಿ ನೆಲೆಯೇ ಇರಲಿಲ್ಲ. ಆದರೂ ಜ್ಞಾನಾರ್ಥಿಗಳಾಗಿ ವಿಶ್ವಕ್ಕೆ ಮಾರ್ಗದರ್ಶನ ಮಾಡುತ್ತಾ ಬದುಕಿದರು‌. ಅವರು ವಿಶ್ವದಾದ್ಯಂತ ಶೇ 5 ರಷ್ಟು ಇದ್ದಾರೆ. ಆದರೆ ಎಲ್ಲರೂ ಅವರನ್ನ ಒಪ್ಪಿಕೊಂಡು ಬದುಕುವಂತೆ ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಕಸಗುಡಿಸುವ ಕೆಲಸವನ್ನೂ ಅವರು ಶ್ರದ್ಧೆಯಿಂದ ಮಾಡುತ್ತಾರೆ.

ಜಗತ್ತಿನಲ್ಲಿ ಬೌದ್ಧಿಕ ಶಕ್ತಿಯಾಗಿ ಬದುಕುವುದು ಅವರ ಗುರಿಯಾಗಿತ್ತು. ಇಂದು ಯಾವುದೇ ರಂಗದಲ್ಲೂ ಯಹೂದಿಗಳಿದ್ದಾರೆ. ಬ್ರಾಹ್ಮಣರು ಅವರನ್ನು ಅನುಸರಿಸುವ ಅನಿವಾರ್ಯತೆ ಎದುರಾಗಿದೆ. ಆರ್ಥಿಕವಾಗಿ ನಾವೂ ಪ್ರಬಲರಾಗಬೇಕು. ಆಗ ಯಾರ ಮುಂದೆಯೂ ತಲೆತಗ್ಗಿಸಬೇಕಿಲ್ಲ ಎಂದು ಹೇಳಿದರು.

ಬ್ರಾಹ್ಮಣರು ಸಿದ್ಧಾಂತಗಳನ್ನು ಒಪ್ಪಿಕೊಂಡವರು. ಕಮ್ಯುನಿಸ್ಟ್ ಪಾರ್ಟಿಯಲ್ಲೂ ಬ್ರಾಹ್ಮಣರು ಹೆಚ್ಚಿದ್ದಾರೆ. ಬ್ರಾಹ್ಮಣರಿಗೆ ಬ್ರಾಹ್ಮಣರೇ ಶತ್ರುಗಳು. ಹಾಗಾಗಿ ಬ್ರಾಹ್ಮಣರು ಬ್ರಹ್ಮಕ್ಷತ್ರಿಯರಾಗಿ ಬದುಕಬೇಕಿದೆ. ಎಲ್ಲಾ ರಂಗದಲ್ಲೂ ಇದ್ದು ಬದುಕುವಂತಾಗಬೇಕಿದೆ. ಬ್ರಾಹ್ಮಣರನ್ನ ದೇಶದ ವ್ಯವಸ್ಥೆಯಲ್ಲಿ ತುಚ್ಛವಾಗಿ ಕಾಣಲಾಗುತ್ತಿದೆ. ಮೊದಲೆಲ್ಲ ಹೀಗೆ ಇರಲಿಲ್ಲ. ಈಗ 100 ವರ್ಷಗಳ ಹಿಂದಿನಿಂದ ಬ್ರಿಟಿಷರ ಷಡ್ಯಂತ್ರ್ಯದಿಂದಾಗಿ ಬ್ರಾಹ್ಮಣರನ್ನು ತುಚ್ಛವಾಗಿ ನೋಡಲಾರಂಭಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸಲು ಪಠ್ಯ ಪುಸ್ತಕಕ್ಕೆ ವೀರ ಸಾವರ್ಕರ್ ಹಾಗೂ ಕೇಶವ ಬಲಿರಾಮ ಹೆಡ್ಗೇವಾರ್‌ರಂತಹ ದಿಗ್ಗಜರ ಪಾಠ ಸೇರಿಸಿದ್ದೆವು. ಅವರಿಬ್ಬರೂ ಸ್ವಾತಂತ್ರ್ಯ ಹೋರಾಟಗಾರರು ಎನ್ನಲು ಸೂಕ್ತ ದಾಖಲೆ ಒದಗಿಸಲು ಸಿದ್ದನಿದ್ದೇನೆ ಎಂದು ರೋಹಿತ್ ಚಕ್ರತೀರ್ಥ ಹೇಳಿದರು.

ಪಠ್ಯ ಸೇರ್ಪಡೆ, ತೆಗೆಯುವ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ಸರ್ವ ಸ್ವತಂತ್ರವಾಗಿದೆ. ನನ್ನ ಅವಧಿಯಲ್ಲಿ ಪರಿಷ್ಕರಣೆ ಸಮಿತಿ ಶಿಫಾರಸು ಮಾಡಿದ್ದ ಪಠ್ಯಪುಸ್ತಕ ಸರ್ಕಾರದ ಸ್ವತ್ತು, ಯಾವುದನ್ನು ಯಾಕೆ ತೆಗೆದಿರಿ ಎಂದು ಪ್ರಶ್ನಿಸಲು ಆಗೋಲ್ಲ. ನಾವು ಪರಿಷ್ಕರಣೆ ಮಾಡಿದಾಗ ಹಿಂದಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರನ್ನೂ ಕರೆದಿದ್ದರೂ ಬರಲಿಲ್ಲ.ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಮುಂದಾಗಿರುವ ಈ ಸರ್ಕಾರ, ಕೆಲವರ ಪಾಠ ಕೈಬಿಡಲಿದೆ ಎಂಬ ಮಾತು ಕೇಳಿಬರುತ್ತಿದೆ ಎಂದು ಪ್ರಸ್ತಾಪಿಸಿದ ಚಕ್ರತೀರ್ಥ ಗೆಲಿಲಿಯೋನ ಕಥೆ ಹೇಳಿದರು.

ಗೆಲಿಲಿಯೋ ಭೂಮಿ ದುಂಡಾಗಿದೆ. ಸೂರ್ಯನ ಸುತ್ತ ಭೂಮಿ ತಿರುಗುತ್ತೆ ಎಂದು ಹೇಳಿದಾಗ. ಆಗಿನ ಜಗತ್ತು‌ ಒಪ್ಪಲಿಲ್ಲ. ಜನರ ನಂಬಿಕೆಯನ್ನ ಮುರಿದಾಗ ಆತ ಸಂಕಷ್ಟಗಳ ಎದುರಿಸಿ ಜರ್ಝರಿತವಾಗಿದ್ದ. ಹೀಗಾಗಿ ಇಲ್ಲ ಭೂಮಿಯೇ ತಟಸ್ಥ. ಸೂರ್ಯನೇ ಅದರ ಸುತ್ತ ತಿರುಗೋದು ಎಂದು ರಾಜನ ಮುಂದೆ ತನ್ನ ಹೇಳಿಕೆ ಬದಲಿಸಿದ್ದ. ಅರಮನೆಯ ದ್ವಾರದ ಬಳಿ ನಿಂತವನೊಬ್ಬ ಗೆಲಿಲಿಯೋಗೆ 'ಕೊನೆಗೂ ಅವರು (ರಾಜ) ಹೇಳಿದ್ದನ್ನೇ ಒಪ್ಪಿಕೊಂಡ್ಯಲ್ಲಾ' ಎಂದು ಕೇಳ್ತಾನೆ. ಅದಕ್ಕೆ ಗೆಲೆಲಿಯೋ ನಾನು ಒಪ್ಪಿಕೊಂಡ ಕೂಡಲೇ ಜಗದ ನಿಯಮ ಬದಲಾಗೊಲ್ಲ. ಅದು ಹಾಗೆ ಇರುತ್ತದೆ. ಇವರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಅವರ ವಾದ ಒಪ್ಪಬೇಕಾಯಿತು ಎಂದು ಉತ್ತರಿಸುತ್ತಾನೆ. ಹಾಗೆಯೇ ಪಠ್ಯ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಾಠ ತೆಗೆಯುವುದರಿಂದ ಸತ್ಯ ಬದಲಿಸಲು ಆಗೊಲ್ಲ ಎಂದು ರೋಹಿತ್ ಚಕ್ರತೀರ್ಥ ಮಾರ್ಮಿಕವಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com