ಎನ್ಇಪಿ ರದ್ದುಗೊಳಿಸಿ, ಎಸ್ಇಪಿ ಜಾರಿಗೊಳಿಸುತ್ತೇವೆ: ಸಚಿವ ಎಂಸಿ ಸುಧಾಕರ್
ಕಲಬುರಗಿ: ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿ(ಎಸ್ಇಪಿ) ಜಾರಿಗೊಳಿಸುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಸಿ ಸುಧಾಕರ್ ಅವರು, ಎನ್ಇಪಿ ಬದಲಾಯಿಸಿ, ಎಸ್ಇಪಿ ಜಾರಿಗೊಳಿಸುತ್ತೇವೆ. ಈ ಹಿಂದೆ ತರಾತುರಿಯಲ್ಲಿ ಎನ್ಇಪಿ ಜಾರಿಗೊಳಿಸಲಾಗಿತ್ತು ಎಂದಿದ್ದಾರೆ.
ರಾಜ್ಯದಲ್ಲಿ ಈಗ 15 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ 32 ವಿಶ್ವವಿದ್ಯಾಲಯಗಳಿವೆ. ಆಯವ್ಯಯದ ಶೇಕಡಾ 6 ರಷ್ಟು ಅನುದಾನ ಶಿಕ್ಷಣ ಇಲಾಖೆಗೆ ನೀಡಬೇಕು ಎಂದು ಹೇಳಲಾಗುತ್ತದೆ. ಆದರೆ ಹಿಂದಿನ ಸರ್ಕಾರ 5400 ಕೋಟಿ ರೂ. ಮಾತ್ರ ನೀಡಿತ್ತು. ಇದು ಬಜೆಟ್ನ ಶೇಕಡಾ 1.7 ರಷ್ಟು ಅನುದಾನ ಮಾತ್ರ ಉನ್ನತ ಶಿಕ್ಷಣ ಇಲಾಖೆಗೆ ಬಂದಿದೆ ಎಂದರು.
ಬಹುತೇಕ ಅನುದಾನ ಸಂಬಳಕ್ಕೆ ಹೋಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇಲಾಖೆಯ ಅನುಧಾನ ಹೆಚ್ಚಾಗಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಅತಿಥಿ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ.