'ಹೆಂಡತಿಯರೇ, ನಿಮಗೆ ಬೇರೆ ಸಂಬಂಧ ಇದ್ರೆ ಓಡಿ ಹೋಗಿ, ಗಂಡನ ಕೊಲೆ ಮಾಡಬೇಡಿ; ಮಕ್ಕಳನ್ನು ಅನಾಥರಾಗಿಸಬೇಡಿ'

ಹೆಂಡತಿಯರೇ, ನಿಮಗೆ ಬೇರೆ ಸಂಬಂಧ ಇದ್ದರೆ  ಅವರೊಟ್ಟಿಗೆ  ಓಡಿ ಹೋಗಿ. ಆದರೆ, ಕಟ್ಟಿಕೊಂಡ ಗಂಡನನ್ನು ಕೊಲೆ  ಮಾಡಬೇಡಿ, ಮಕ್ಕಳನ್ನು ಅನಾಥರಾಗಿಸಬೇಡಿ ಎಂದು ಬೆಳಗಾವಿಯಲ್ಲಿ ಕರವೇ ರಾಜ್ಯ ಸಂಚಾಲಕರೊಬ್ಬರು ಮನವಿ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಹೆಂಡತಿಯರೇ, ನಿಮಗೆ ಬೇರೆ ಸಂಬಂಧ ಇದ್ದರೆ  ಅವರೊಟ್ಟಿಗೆ  ಓಡಿ ಹೋಗಿ. ಆದರೆ, ಕಟ್ಟಿಕೊಂಡ ಗಂಡನನ್ನು ಕೊಲೆ  ಮಾಡಬೇಡಿ, ಮಕ್ಕಳನ್ನು ಅನಾಥರಾಗಿಸಬೇಡಿ ಎಂದು ಬೆಳಗಾವಿಯಲ್ಲಿ ಕರವೇ ರಾಜ್ಯ ಸಂಚಾಲಕರೊಬ್ಬರು ಮನವಿ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಎಂಬುವವರು ಇಂತಹ ವಿಶಿಷ್ಟ ಮನವಿಯನ್ನು ಮಾಡಿದ್ದಾರೆ. ಕಟ್ಟಿಕೊಂಡ ಗಂಡ ಇಷ್ಟ ಇಲ್ಲದಿದ್ದರೆ ಆತನಿಂದ ಬೇರ್ಪಡಲು ಕಾನೂನಿನಲ್ಲಿ ನಿಮಗೆ ಅವಕಾಶ ಇದೆ. ಪತಿಗೆ ವಿಚ್ಛೇದನ ನೀಡಿ ನೀವು ನಿಮ್ಮ ದಾರಿಯನ್ನು ನೋಡಿಕೊಳ್ಳಬಹುದು. ಇಂತಹ ಅವಕಾಶಗಳನ್ನು ಬಿಟ್ಟು ಗಂಡನನ್ನೇ ಕೊಲೆ ಮಾಡಿದರೆ ಹೇಗೆ? ಕೊಲೆಯಂತಹ ಕೃತ್ಯಗಳಿಗೆ ಇಳಿಯಬೇಡಿ. ಯಾರದ್ದೂ ಜೀವವನ್ನು ತೆಗೆಯಬಾರದು. ಅವರಿಗೂ ಅವರದ್ದೇ ಆದ ಬದುಕು ಇರುತ್ತದೆ. ನಂಬಿಕೆ ಇರುತ್ತದೆ. ಅದನ್ನೇಕೆ ಹಾಳು ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿ ಅಂಬೇಡ್ಕರ್ ನಗರ ನಿವಾಸಿ ರಮೇಶ ಕಾಂಬಳೆ ಎಂಬುವವರು ಈಚೆಗೆ ಪತ್ನಿ ಮತ್ತವಳ ಪ್ರಿಯಕರನಿಂದ ಹತ್ಯೆಗೀಡಾಗಿದ್ದರು. ಕೊಲೆ ಮಾಡಿದ ಮೇಲೆ ಇವರಿಬ್ಬರೂ ಸೇರಿ ಆ ಶವವನ್ನು ಚೋರ್ಲಾ ಘಾಟ್‌ಗೆ ಎಸೆದು ಬಂದಿದ್ದರು. ಬಳಿಕ ಏನೂ ಆಗದಂತೆ ಇದ್ದು ಬಿಟ್ಟಿದ್ದರು. ಕೊಲೆ ಸುದ್ದಿ ತಿಳಿದ ತಕ್ಷಣ ಪತ್ನಿ ಗೋಳಾಡಿದ್ದಳು.

ಆದರೆ, ತನಿಖೆಗೆ ಇಳಿದ ಪೊಲೀಸರಿಗೆ ಆಕೆಯ ಅಸಲಿ ವಿಷಯ ಗೊತ್ತಾಗಿದೆ. ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾಳೆ. ಪ್ರಿಯಕರ ಬಾಳು ಬಿರಂಜೆ ಎಂಬಾತನ ಜತೆ ಸೇರಿದ್ದ ರಮೇಶ್‌ ಕಾಂಬಳೆ ಅವರ ಪತ್ನಿ ಸಂಧ್ಯಾ ಕಾಂಬಳೆ ತನ್ನ ಗಂಡನನ್ನೇ ಹತ್ಯೆ ಮಾಡಿದ ಆರೋಪಿಯಾಗಿದ್ದಾಳೆ. ‌ಈಗ ಕೊಲೆ ಆರೋಪಿಗಳು ಬಂಧಿತರಾಗಿದ್ದಾರೆ.

ಈ ಕಾರಣಕ್ಕಾಗಿ ಕರವೇ ಕುಟುಂಬಸ್ಥರ ನೆರವಿಗೆ ಬಂದಿದೆ. ತಪ್ಪಿತಸ್ಥರಿಗೆ ಶಿಕ್ಷೆ ಮಾಡುವಂತೆ ಆಗ್ರಹಿಸಿದೆ. ಜತೆಗೆ ಸಾಮೂಹಿಕವಾಗಿ ಮನವಿಯನ್ನೂ ಮಾಡಿದ್ದು, ಬಾಳಲು ಇಷ್ಟವಿಲ್ಲದಿದ್ದರೆ ಕಾನೂನು ಪ್ರಕಾರ ಪತ್ಯೇಕವಾಗಬೇಕು. ಈ ರೀತಿಯಾಗಿ ಯಾರ ಜೀವಕ್ಕೂ ಹಾನಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com