ಅಕ್ಕಿ ಬದಲು ಹಣ ಕೊಡುವುದಕ್ಕೆ ಜನರು ಖುಷಿಯಾಗಿದ್ದಾರೆ, ಬಿಜೆಪಿ ಮಾತ್ರ ಆರೋಪ ಮಾಡುತ್ತಿದೆ: ಸಚಿವ ಎಂ ಬಿ ಪಾಟೀಲ್

ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡುವ ಬದಲಿಗೆ ಹಣ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಟೀಕಿಸುವ ಪ್ರತಿಪಕ್ಷ ಬಿಜೆಪಿ ನಾಯಕರ ವಿರುದ್ಧ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್(M B Patil) ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. (Anna Bhagya)
ಸಚಿವ ಎಂ ಬಿ ಪಾಟೀಲ್(ಸಂಗ್ರಹ ಚಿತ್ರ)
ಸಚಿವ ಎಂ ಬಿ ಪಾಟೀಲ್(ಸಂಗ್ರಹ ಚಿತ್ರ)

ಬೆಂಗಳೂರು: ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡುವ ಬದಲಿಗೆ ಹಣ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಟೀಕಿಸುವ ಪ್ರತಿಪಕ್ಷ ಬಿಜೆಪಿ ನಾಯಕರ ವಿರುದ್ಧ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್(M B Patil) ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಹೆಚ್ಚುವರಿ ಅಕ್ಕಿ ನೀಡುವ ಬದಲು ಸರ್ಕಾರ 170 ರೂಪಾಯಿ ನೀಡುವ ನಿರ್ಧಾರಕ್ಕೆ ಜನತೆ ಖುಷಿಯಾಗಿದ್ದಾರೆ. ಇದರಿಂದ ಅವರು ಅಕ್ಕಿ, ರಾಗಿ, ಜೋಳ ಯಾವುದು ಬೇಕಾದರೂ ಖರೀದಿಸಬಹುದು. ಆದರೆ ರಾಜ್ಯದ ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿ(BJP) ನಾಯಕರು ಮಾತ್ರ ಇದರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಬಿಜೆಪಿ ಮುಖಂಡರು, ಅಕ್ಕಿ ಸಂಗ್ರಹಿಸಲು ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರ ಜನರಿಗೆ ಹಣ ನೀಡಬೇಕೆಂದು ಸಲಹೆ ನೀಡಿದ್ದರು. ಈಗ ಸರ್ಕಾರ ಹಣ ನೀಡಲು ನಿರ್ಧರಿಸಿದಾಗ ಬಿಜೆಪಿಯವರು ಅದನ್ನು ದೂರುತ್ತಿದ್ದಾರೆ, ಟೀಕಿಸುತ್ತಿದ್ದಾರೆ. ಸರ್ಕಾರ ಅಕ್ಕಿ ಖರೀದಿಸುವವರೆಗೆ ಜನತೆಗೆ ಹೆಚ್ಚುವರಿ 5ಕೆಜಿ ಅಕ್ಕಿ ಬದಲು ಹಣ ನೀಡುವುದು ತಾತ್ಕಾಲಿಕ ವ್ಯವಸ್ಥೆಯಷ್ಟೆ ಎಂದು ಸ್ಪಷ್ಟಪಡಿಸಿದರು. 

ಎಲ್ಲಾ ಐದು ಭರವಸೆಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಬಿಜೆಪಿ ಆಡಳಿತದಲ್ಲಿ ಕೇಳಿಬಂದಿರುವ ಅಕ್ರಮಗಳು, ಹಗರಣ, ಭ್ರಷ್ಟಾಚಾರಗಳ ಬಗ್ಗೆ ಸರ್ಕಾರ ಒಂದು ತಾರ್ಕಿಕ ಅಂತ್ಯವನ್ನು ನೀಡಲಿದೆ ಎಂದರು. 

ಬಿಜೆಪಿ ನಾಯಕರು ಈಗ ತಮ್ಮ ತಮ್ಮೊಳಗೆ ಕಚ್ಚಾಡುತ್ತಿದ್ದಾರೆ. ಮನೆಯೊಂದು 100 ಬಾಗಿಲು ಎಂಬಂತಾಗಿದೆ ಪರಿಸ್ಥಿತಿ. ಪಕ್ಷದೊಳಗೆ 20ಕ್ಕೂ ಹೆಚ್ಚು ಗುಂಪುಗಳಿವೆ. ಅವರನ್ನೆಲ್ಲ ಒಗ್ಗೂಡಿಸುವುದು ಹೈಕಮಾಂಡ್ ಗೆ ಸಾಧ್ಯವಾಗುತ್ತಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com