ಮೋದಿಯವರು ಒಮ್ಮೆ ಕೈಬೀಸಿ ಹೋದರೆಂದರೆ ಜನತೆಗೆ ಬರೆ ಎಳೆದು ಹೋದರು ಎಂದೇ ಅರ್ಥ!: ಕಾಂಗ್ರೆಸ್

ಮೋದಿಯವರು ಒಮ್ಮೆ ಕೈಬೀಸಿ ಹೋದರೆಂದರೆ ಜನತೆಗೆ ಬರೆ ಎಳೆದು ಹೋದರು ಎಂದೇ ಅರ್ಥ ಎಂದು ರಾಜ್ಯ ಕಾಂಗ್ರೆಸ್ ಮತ್ತೆ ಗೃಹಬಳಕೆಯ ಮತ್ತು ವಾಣಿಜ್ಯ ಬಳಕೆಯ ಎಲ್‍‌ಪಿಜಿ ಸಿಲಿಂಡರ್ ಬೆಲೆ ಏರಿಕೆಯ ವಿರುದ್ಧ ಕಿಡಿಕಾರಿದೆ.
ಕಾಂಗ್ರೆಸ್ ಲೋಗೋ
ಕಾಂಗ್ರೆಸ್ ಲೋಗೋ
Updated on

ಬೆಂಗಳೂರು: ಮೋದಿಯವರು ಒಮ್ಮೆ ಕೈಬೀಸಿ ಹೋದರೆಂದರೆ ಜನತೆಗೆ ಬರೆ ಎಳೆದು ಹೋದರು ಎಂದೇ ಅರ್ಥ ಎಂದು ರಾಜ್ಯ ಕಾಂಗ್ರೆಸ್ ಮತ್ತೆ ಗೃಹಬಳಕೆಯ ಮತ್ತು ವಾಣಿಜ್ಯ ಬಳಕೆಯ ಎಲ್‍‌ಪಿಜಿ ಸಿಲಿಂಡರ್ ಬೆಲೆ ಏರಿಕೆಯ ವಿರುದ್ಧ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಗೃಹಬಳಕೆಯ ಸಿಲಿಂಡರ್ ದರ ಇಂದಿನಿಂದ ಮತ್ತೆ ₹50 ಏರಿಕೆಯಾಗಿದೆ. ಮೋದಿಜಿಯ ಅಚ್ಛೆ ದಿನಗಳಲ್ಲಿ ಜನರು ಕಾಡುಮೇಡು ಅಲೆದು ಗೆಡ್ಡೆಗೆಣಸು ತಿಂದು ಬದುಕುವ ಹಂತಕ್ಕೆ ಬರುವುದು ನಿಶ್ಚಿತ. ಈ ಅಮಾನವೀಯ ಬೆಲೆ ಏರಿಕೆಯಲ್ಲಿ ನೆರವು ನೀಡಲೆಂದೇ ನಮ್ಮ ಗೃಹಲಕ್ಷ್ಮಿ ಯೋಜನೆ ಎಂದು ಹೇಳಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹ 350 ಏರಿಕೆಯಾಗಿದೆ. ಗೃಹಬಳಕೆಯ ಸಿಲಿಂಡರ್ ಬೆಲೆ ₹50 ಏರಿಕೆಯಾಗಿದೆ. ಅಚ್ಛೆ ದಿನಗಳಲ್ಲಿ ಅನ್ನ ಬೇಯಿಸಿ ತಿನ್ನುವುದೂ ಕೂಡ 'ಐಷಾರಾಮಿ ಜೀವನ' ಎನ್ನುವ ಸ್ಥಿತಿಗೆ ತಂದಿಟ್ಟಿದ್ದಕ್ಕೆ ಧನ್ಯವಾದಗಳು ಮೋದಿಜಿ!! ಮೊದಲು ಹೊಗೆಯಿಂದ ಕಣ್ಣೀರು ಬರ್ತಿತ್ತು, ಈಗ ಸಿಲಿಂಡರ್ ಕೂಡ ಕಣ್ಣೀರು ತರಿಸುತ್ತಿದೆ ಅಲ್ಲವೇ ಬಿಜೆಪಿ ಕರ್ನಾಟಕ ಎಂದು ಪ್ರಶ್ನಿಸಿದೆ.

ರೈತರಿಗೆ ಅವಮಾನಿಸುವುದನ್ನು ಬಿಜೆಪಿ ನಿಲ್ಲಿಸುವುದು ಯಾವಾಗ? ರೈತರನ್ನು 'ಹೇಡಿಗಳು' ಎಂದಿದ್ದ ಬಿಜೆಪಿ ನಾಯಕರು ಈಗ 'ಸೋಂಬೇರಿಗಳು' ಎನ್ನುತ್ತಿದ್ದಾರೆ. ರೈತರು ಅಕ್ಕಿ ಪಡೆದು ಕೆಲಸ ಮಾಡುವುದನ್ನೇ ನಿಲ್ಲಿಸಿದ್ದಾರೆ ಎನ್ನುವ ಬಿಜೆಪಿ ಸಂಸದರು ಒಂದು ದಿನವಾದರೂ ರೈತರ ಗೋಳು ಆಲಿಸಿದ್ದಾರೆಯೇ? ಉತ್ತಿ ಬಿತ್ತಿದ್ದಾರೆಯೇ? #ರೈತವಿರೋಧಿಬಿಜೆಪಿ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಜೋಶಿ, ಸಂತೋಷರ ಮುಖ ತೋರಿಸಿದರೆ ನಾಲ್ಕು ಮತಗಳು ಸಿಗುವುದಿಲ್ಲ ಎಂಬ ವಾಸ್ತವ ಸಂಗತಿ ಅರಿವಾಗುತ್ತಲೇ ಬಿಎಸ್ ಯಡಿಯೂರಪ್ಪ ಅವರನ್ನು ಉತ್ಸವ ಮೂರ್ತಿ ಮಾಡಲು ಹೊರಟಿರುವ ಇದೇ ಬಿಜೆಪಿ, ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರನ್ನು ಹೇಗೆಲ್ಲಾ ನಡೆಸಿಕೊಂಡಿತ್ತು ಎಂಬುದನ್ನು ಜನತೆ ನೋಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಯಡಿಯೂರಪ್ಪ ಎಂಬ ಉತ್ಸವ ಮೂರ್ತಿಯನ್ನು ವಿಸರ್ಜನಾ ಮೂರ್ತಿ ಮಾಡಲಿದೆ ಬಿಜೆಪಿ ಎಂದು ತಿಳಿಸಿದೆ.

ಇಂದು ಬಿಎಸ್‌ವೈ ಅವರ ಕಾಲು ಹಿಡಿಯುತ್ತಿರುವ ಬಿಜೆಪಿ, ಕಣ್ಣೀರು ಹಾಕಿಸಿ ಯಡಿಯೂರಪ್ಪನವರ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬುದನ್ನು ಉತ್ತರಿಸಲಿ. ಇಂದಿಗೂ ಸಿಗದ ಉತ್ತರ ಸಿಗದ ಪ್ರಶ್ನೆಗಳು ಯಾವುವೆಂದರೆ, ಅವಧಿ ಪೂರೈಸುತ್ತೇನೆ ಎನ್ನುತ್ತಿದ್ದ ಬಿಎಸ್ ಯಡಿಯೂರಪ್ಪ ಅವರು ಇದ್ದಕ್ಕಿದ್ದಂತೆ ದೆಹಲಿಗೆ ಹೋಗಿ ಬಂದು ರಾಜೀನಾಮೆ ಕೊಟ್ಟಿದ್ದೇಕೆ? ಕಣ್ಣೀರು ಹಾಕಿ ಗೋಳಾಡಿದ್ದೇಕೆ? ಎಂದು ಪ್ರಶ್ನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com