
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಹದೇವಪುರ ವಲಯದ ಅಧಿಕಾರಿಗಳಿಗೆ ಟೆಕ್ ಕಾರಿಡಾರ್ಗಳ ಉದ್ದಕ್ಕೂ ಇರುವ ರಸ್ತೆ ಗುಂಡಿಗಳನ್ನು ಮತ್ತು ಅತಿಕ್ರಮಿತ ಫುಟ್ಪಾತ್ಗಳನ್ನು ಆದ್ಯತೆ ಆಧಾರದ ಮೇಲೆ ತೆರವುಗೊಳಿಸುವಂತೆ ಸೂಚಿಸಿದರು.
ಮಹದೇವಪುರದಲ್ಲಿ ಗುರುವಾರ ವಲಯ ಅಧಿಕಾರಿಗಳೊಂದಿಗೆ ನಡೆದ ಸಮನ್ವಯ ಸಭೆಯ ನಂತರ ಗಿರಿನಾಥ್ ಈ ನಿರ್ದೇಶನ ನೀಡಿದ್ದಾರೆ. ಅಧಿಕಾರಿಗಳು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಂತರ, ವಾರ್ಡ್ ರಸ್ತೆಗಳನ್ನು ಸರಿಪಡಿಸಬೇಕು ಎಂದು ಸೂಚಿಸಿದ್ದಾರೆ.
ಬಿಬಿಎಂಪಿ ಅನುಮತಿ ಇಲ್ಲದೆ ರಸ್ತೆಗಳನ್ನು ಅಗೆದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಂತಹ ಸಂಸ್ಥೆಗಳಿಗೆ ದಂಡ ವಿಧಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರು ಆದೇಶಿಸಿದ್ದಾರೆ.
ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿರುವ ಬಗ್ಗೆ ಜಂಟಿ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳುವಂತೆ ವಾರ್ಡ್ ಎಂಜಿನಿಯರ್ಗಳು ಮತ್ತು ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರಿಗೆ ಆಯುಕ್ತರು ಸೂಚಿಸಿದರು.
ಘನತ್ಯಾಜ್ಯ ನಿರ್ವಹಣಾ ಇಲಾಖೆ ಕಾಮಗಾರಿ ಹಾಗೂ ಫುಟ್ಪಾತ್ ಒತ್ತುವರಿ ತೆರವುಗೊಳಿಸುವಂತೆ ವಲಯ ಆಯುಕ್ತ ಇಬ್ರಾಹಿಂ ಮೈಗೂರು ಹಾಗೂ ಜಂಟಿ ಆಯುಕ್ತೆ ಕೆ.ದಾಕ್ಷಾಯಿಣಿ ಅವರಿಗೆ ಸೂಚಿಸಿದರು.
Advertisement