ಹಾಸನ: ಜಿಲ್ಲೆಯ ಹಾಸನಾಂಬ ದೇಗುಲದಲ್ಲಿ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾಗ ವಿದ್ಯುತ್ ಶಾಕ್ ಆಘಾತದಿಂದ 17 ಮಂದಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೂಕು ನುಗ್ಗಲು ನಿರ್ವಹಿಸಲು ಬಳಸಿದ ಬ್ಯಾರಿಕೇಡ್ಗಳ ನಡುವೆ ಹಲವು ಜನರು ನಿಂತಿದ್ದರು. ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಶಾಕ್ ಅನುಭವಾಗಿದ್ದು, ಕಬ್ಬಿಣದ ಬ್ಯಾರಿಕೇಡ್ಗಳ ಮೂಲಕ ವಿದ್ಯುತ್ ಸ್ಪರ್ಶವಾಗಿರುವುದಾಗಿ ಭಕ್ತರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ಶಾಕ್ ಅನುಭವವಾಗುತ್ತಿದ್ದಂತೆಯೇ ಭಕ್ತರು ಏಕಾಏಕಿ ಓಡಲು ಆರಂಭಿಸಿದ್ದು, ಹದಿನೇಳು ಜನರನ್ನು ಬ್ಯಾರಿಕೇಡ್ಗಳಿಂದ ಹೊರಕ್ಕೆ ಸ್ಥಳಾಂತರಿಸಲಾಯಿತು. ಮಹಿಳೆಯರು ಸೇರಿದಂತೆ ಎಲ್ಲಾ 17 ಜನರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರಲ್ಲಿ ನಾಲ್ವರಿಗೆ ಗಾಯಗಳಾಗಿದ್ದರೆ, ಉಳಿದವರು ಆರೋಗ್ಯವಾಗಿದ್ದಾರೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಬ್ಯಾರಿಕೇಡ್ಗಳ ನಡುವೆ ನಿಂತಿದ್ದಾಗ ಕರೆಂಟ್ ಶಾಕ್ ಹೊಡೆಯಿತು ಎಂದು ಹೇಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಕಾಲ್ತುಳಿತ ಸಂಭವಿಸಿಲ್ಲ, ಇದು ಕೇವಲ ಗದ್ದಲವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಭಕ್ತರು ನಿಜವಾಗಿಯೂ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.ಈ ಸಂಬಂಧ ಚೆಸ್ಕಾಂ ಅಧಿಕಾರಿಗಳು ವಸ್ತುಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಗದ್ದಲದಲ್ಲಿ ಕೆಲ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಚಿಂತಿಸಬೇಕಾಗಿಲ್ಲ. ದಾಖಲಾದ 17 ಮಂದಿಯಲ್ಲಿ ಐವರು ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ ಮತ್ತು ಉಳಿದವರು ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದರು.
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಹಲವಾರು ಸಚಿವರು ಮತ್ತು ರಾಜಕೀಯ ಮುಖಂಡರು ಇತ್ತೀಚಿಗೆ ದೇವಾಲಯಕ್ಕೆ ಭೇಟಿ ನೀಡಿದ್ದರು.
Advertisement