ಇ.ವಿ ಕರಡು ನೀತಿ ಸಿದ್ಧ; 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಗುರಿ: ಸಚಿವ ಎಂಬಿ ಪಾಟೀಲ್

ಸರ್ಕಾರವು ರಾಜ್ಯವನ್ನು ದೇಶದ ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ದೇಶಕ್ಕೇ 'ನಂಬರ್ 1' ಮಾಡುವ ಗುರಿಯೊಂದಿಗೆ ಕರಡು ನೀತಿ ರೂಪಿಸಿದ್ದು, ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸುವ ಮತ್ತು 1 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶಗಳನ್ನು
ಎಂಬಿ ಪಾಟೀಲ್
ಎಂಬಿ ಪಾಟೀಲ್

ಬೆಂಗಳೂರು: ಸರ್ಕಾರವು ರಾಜ್ಯವನ್ನು ದೇಶದ ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ದೇಶಕ್ಕೇ 'ನಂಬರ್ 1' ಮಾಡುವ ಗುರಿಯೊಂದಿಗೆ ಕರಡು ನೀತಿ ರೂಪಿಸಿದ್ದು, ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸುವ ಮತ್ತು 1 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶಗಳನ್ನು ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ ಹೇಳಿದ್ದಾರೆ.

2023ರಿಂದ 2028ರವರೆಗಿನ ಐದು ವರ್ಷಗಳ ಅವಧಿಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿರುವ ನೀತಿಯ ಕರಡಿನ ಬಗ್ಗೆ ಚರ್ಚಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯಮ ಪ್ರತಿನಿಧಿಗಳೊಂದಿಗಿನ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ನಮ್ಮ ಸಂಚಾರ ಕ್ಷೇತ್ರವನ್ನು ಆಳಲಿವೆ. ಕರಡು ನೀತಿಯಲ್ಲಿ ಬಂಡವಾಳ ಸಬ್ಸಿಡಿಯನ್ನು ಹೆಚ್ಚಿಸಬೇಕೆನ್ನುವ ಸಲಹೆ ಕೊಡಲಾಗಿದೆ. ಜೊತೆಗೆ, ಉತ್ಪಾದನೆ ಆಧರಿಸಿ ಕೊಡುವ ಪ್ರೋತ್ಸಾಹ ಭತ್ಯೆಯನ್ನು ಈಗಿನಂತೆ ಶೇಕಡ 1ರ ಪ್ರಮಾಣದಲ್ಲೇ ಮುಂದುವರಿಸಿಕೊಂಡು ಹೋಗುವ ಚಿಂತನೆಯೂ ಇದರಲ್ಲಿದೆ ಎಂದು ಅವರು ತಿಳಿಸಿದರು.

ಕರಡು ನೀತಿಯು ಕೇವಲ ವಿದ್ಯುಚ್ಚಾಲಿತ ವಾಹನಗಳ ಬಗ್ಗೆ ಮಾತ್ರ ಗಮನ ಹರಿಸಿಲ್ಲ. ಬದಲಿಗೆ ಇದರಲ್ಲಿನ ಕೋಶಗಳಲ್ಲಿರುವ ಅನೋಡ್, ಕ್ಯಾಥೋಡ್, ಸೆಪರೇಟರ್ಸ್, ಕಾರ್ಬೊನೇಟ್, ಸಾಲ್ವೆಂಟ್, ಶಕ್ತಿಶಾಲಿ ಹೈಬ್ರಿಡ್ ವಾಹನಗಳು, ಬ್ಯಾಟರಿ ರೀಸೈಕ್ಲಿಂಗ್ ಸೌಲಭ್ಯ, ಪರೀಕ್ಷಾರ್ಥ ಮೂಲಸೌಕರ್ಯಗಳನ್ನೂ ಕರಡು ನೀತಿಯು ಒಳಗೊಂಡಿದೆ ಎಂದು ಅವರು ವಿವರಿಸಿದರು.

ವಿದ್ಯುತ್ ಚಾಲಿತ ವಾಹನಗಳ ಮತ್ತು ಬಿಡಿಭಾಗಗಳ ತಯಾರಿಕೆಗೆ ಸೂಕ್ತ ಸ್ಥಳಗಳಲ್ಲಿ ಔದ್ಯಮಿಕ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲು ಇದರಲ್ಲಿ ಹೇಳಲಾಗಿದೆ. ಇದಕ್ಕೆ ಗೌರಿಬಿದನೂರು ಮತ್ತು ಚಿಕ್ಕಮಲ್ಲಿಗೆವಾಡ ಎರಡನ್ನೂ ತಕ್ಕ ತಾಣಗಳೆಂದು ಗುರುತಿಸಲಾಗಿದೆ. ಉದ್ದೇಶಿತ ಕ್ಲಸ್ಟರುಗಳಲ್ಲಿ ಉತ್ಪಾದನಾ ಚಟುವಟಿಕೆ ಆರಂಭಿಸಲು ಸಜ್ಜುಗೊಳಿಸಿರುವ ಕೈಗಾರಿಕಾ ಶೆಡ್, ಪ್ಲಗ್ & ಪ್ಲೇ ಇನ್ಕ್ಯುಬೇಷನ್ ಸೌಲಭ್ಯ, ಪರೀಕ್ಷಾ ಪ್ರಯೋಗಾಲಯಗಳು, ತ್ವರಿತ ಅನುಮೋದನೆ ಮುಂತಾದ ಆರು ಅಂಶಗಳಿಗೆ ಒತ್ತು ಕೊಡಲಾಗುವುದು. ಜೊತೆಗೆ ವಿದ್ಯುತ್ಚಾಲಿತ ವಾಹನಗಳ ಬಳಕೆ ಉತ್ತೇಜಿಸಲು ಎಲ್ಲೆಡೆ ಚಾರ್ಜಿಂಗ್ ಸ್ಟೇಷನ್ನುಗಳನ್ನು ತ್ವರಿತ ಗತಿಯಲ್ಲಿ ಸ್ಥಾಪಿಸುವ ಚಿಂತನೆ ಇದೆ ಎಂದು ಅವರು ನುಡಿದರು.

ಈ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡಲು 'ಕಾಮನ್ ಫೆಸಿಲಿಟೀಸ್' ಮತ್ತು ಪರೀಕ್ಷಾ ಮೂಲಸೌಕರ್ಯಗಳನ್ನು ಒದಗಿಸುವ ಚಿಂತನೆ ಇದೆ. ಇದಕ್ಕಾಗಿ ಖಾಸಗಿಯವರಿಗೆ ಅವರು ಹೂಡುವ ಬಂಡವಾಳದ ಮೇಲೆ ಗರಿಷ್ಠ ಶೇಕಡ 30ರವರೆಗೂ ಪ್ರೋತ್ಸಾಹನ ಭತ್ಯೆ ನೀಡಲು ಕರಡು ನೀತಿಯು ಶಿಫಾರಸು ಮಾಡಿದೆ. ಇ.ವಿ. ಕ್ಷೇತ್ರದ ಬೆಳವಣಿಗೆಗೆ ಬೇಕಾದ ಸೂಕ್ತ ಕಾರ್ಯ ಪರಿಸರ ನಿರ್ಮಾಣ ಇದರ ಉದ್ದೇಶವಾಗಿದೆ ಎಂದು ಪಾಟೀಲ ಹೇಳಿದರು.

ಐಟಿಐ ಅಳವಡಿಕೆಗೆ ಒತ್ತು:
ವಿದ್ಯುತ್ ಚಾಲಿತ ವಾಹನಗಳ ಉದ್ಯಮಕ್ಕೆ ಕೌಶಲಪೂರ್ಣ ಮಾನವ ಸಂಪನ್ಮೂಲದ ತೀವ್ರ ಅಗತ್ಯವಿದೆ. ಇದಕ್ಕಾಗಿ ಕಂಪನಿಗಳೇ ಐಟಿಐ ತರಬೇತಿ ಕೋರ್ಸನ್ನು ಅಳವಡಿಸಿಕೊಳ್ಳುವ ಸಲಹೆ ಇದರಲ್ಲಿದೆ. ಇದರಿಂದಾಗಿ ತರಬೇತಿಗೆ ಮೀಸಲಿಡುವ ಸಮಯದಲ್ಲಿ ಶೇ.40ರಷ್ಟು ಉಳಿತಾಯವಾಗಲಿದೆ, 2 ರಿಂದ 4 ತಿಂಗಳ ಕಾಲಾವಧಿಯು ಕೂಡ ಕಡಿಮೆಯಾಗಲಿದೆ. ಇದರ ಜೊತೆಗೆ ಕಂಪನಿಗಳು ಇ.ವಿ. ನವೋದ್ಯಮಗಳು, ಸ್ಥಳೀಯ ವಿಶ್ವವಿದ್ಯಾಲಯಗಳ ಜೊತೆ ಸಹಭಾಗಿತ್ವ ಹೊಂದಬೇಕೆಂದು ಕರಡು ನೀತಿಯು ಹೇಳಿದೆ.

ಇ.ವಿ ಕ್ಲಸ್ಟರ್ಸ್ ಸ್ಥಾಪನೆ, ಚಾರ್ಜಿಂಗ್ ಸೌಲಭ್ಯಕ್ಕೆ ಸಲಹೆ:
ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಉದ್ಯಮಿಗಳು ಮೈಸೂರು, ಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಇ.ವಿ.ಕ್ಲಸರ್ ಗಳನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಜೊತೆಗೆ ಬೆಂಗಳೂರು-ಪುಣೆ ಮಧ್ಯೆ 10 ಹೆದ್ದಾರಿ ಟೋಲ್ ಇದ್ದು, ಇಲ್ಲೆಲ್ಲ ಎರಡೂ ಬದಿಗಳಲ್ಲಿ ಇ.ವಿ. ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದರು. ಇದಲ್ಲದೆ, ರಾಜ್ಯದ ಉಳಿದೆಡೆಗಳಲ್ಲೂ ಚಾರ್ಜಿಂಗ್ ಸೌಲಭ್ಯ ಒದಗಿಸಬೇಕಾದ ಜರೂರಿರುವ ಬಗ್ಗೆ ಗಮನ ಸೆಳೆದಿದ್ದಾರೆ. ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿ, ಕ್ರಮ ವಹಿಸಲಾಗುವುದು ಎಂದು ಸಚಿವ ಎಂ ಬಿ ಪಾಟೀಲ ಭರವಸೆ ನೀಡಿದರು. ಸನ್ ಮೊಬಿಲಿಟಿ ಅಧ್ಯಕ್ಷ ಸಂದೀಪ ಮೈನಿ, ಟೊಯೊಟಾ ಉಪ ವ್ಯವಸ್ಥಾಪಕ ನಿರ್ದೇಶಕ ಪರಶುರಾಮನ್, ಕಾಂಟಿನೆಂಟಲ್‌ ಅಧ್ಯಕ್ಷ ಪ್ರಶಾಂತ್ ದೊರೆಸ್ವಾಮಿ, ಎಕ್ಸೆಲ್ ಪಾರ್ಟ್ನರ್ಸ್ ಎಂಡಿ ಪ್ರಶಾಂತ ಪ್ರಕಾಶ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಸಭೆಗಳಲ್ಲಿ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಉಮಾಶಂಕರ್ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com