ಟ್ಯಾಗ್ ಪ್ರಿಂಟ್ ಮಾಡಲು ಕಿಯೋಸ್ಕ್‌ ವಿಫಲ: ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಬ್ಯಾಗ್ ಬಿಟ್ಟು ತೆರಳಿದ ಮಹಿಳೆ!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಯಂ ಚೆಕ್-ಇನ್ ಯಂತ್ರದಲ್ಲಿ ಚೆಕ್ ಇನ್ ಬ್ಯಾಗೇಜ್ ಗೆ ಅಗತ್ಯವಿದ್ದ ಟ್ಯಾಗ್ ಮುದ್ರಣಗೊಳ್ಳದೇ ಮಹಿಳಾ ಪ್ರಯಾಣಿಕರೊಬ್ಬರು ಸಮಸ್ಯೆ ಎದುರಿಸಿದ ವಿಲಕ್ಷಣ ಘಟನೆ ನಡೆದಿದೆ. 
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಯಂ ಚೆಕ್-ಇನ್ ಯಂತ್ರದಲ್ಲಿ ಚೆಕ್ ಇನ್ ಬ್ಯಾಗೇಜ್ ಗೆ ಅಗತ್ಯವಿದ್ದ ಟ್ಯಾಗ್ ಮುದ್ರಣಗೊಳ್ಳದೇ ಮಹಿಳಾ ಪ್ರಯಾಣಿಕರೊಬ್ಬರು ಸಮಸ್ಯೆ ಎದುರಿಸಿದ ವಿಲಕ್ಷಣ ಘಟನೆ ನಡೆದಿದೆ. 
  
ಟರ್ಮಿನಲ್ 2 ನಲ್ಲಿ ಈ ಘಟನೆ ವರದಿಯಾಗಿದ್ದು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಲಖನೌಗೆ ಪ್ರಯಾಣಿಸಬೇಕಿದ್ದ ಮಹಿಳೆ, ಲಗೇಜ್ ನ್ನು ವಿಮಾನ ನಿಲ್ದಾಣದ ವಾಷ್ ರೂಮ್ ನಲ್ಲಿ ಬಿಟ್ಟು ತೆರಳಿದ್ದಾರೆ.

ಡಿಜಿಟಲ್ ಕಂಪನಿಯೊಂದರಲ್ಲಿ ಬ್ರ್ಯಾಂಡ್ ತಂತ್ರಜ್ಞರಾಗಿರುವ ವಾಣಿ ಸೆಹ್ಗಲ್ ತಮಗಾದ ಸಮಸ್ಯೆಯನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ. 

"ನ.08 ರಂದು ಬೆಳಿಗ್ಗೆ 5:45 ಕ್ಕೆ ವಿಮಾನ ಟೇಕ್ ಆಫ್ ಆಗಲಿತ್ತು. ಬೆಳಿಗ್ಗೆ 4.15 ರ ವೇಳೆಗೆ ನಾನು ಟಿ2 ತಲುಪಿದೆ. ಬ್ಯಾಗೇಜ್ ಟ್ಯಾಗ್ ಪಡೆಯುವುದಕ್ಕಾಗಿ ನಾನು ಪಿಎನ್ ಆರ್ ನಂಬರ್ ನಮೂದಿಸಲು ಯತ್ನಿಸಿದೆ. ಆದರೆ ಅಲ್ಲಿದ್ದ ಯಾವುದೇ ಕಿಯೋಸ್ಕ್ ಗಳೂ ಟ್ಯಾಗ್ ಪ್ರಿಂಟ್ ಮಾಡಲು ವಿಫಲವಾದವು. ವಿಮಾನ ಸಿಬ್ಬಂದಿಗೆ ಈ ಸಮಸ್ಯೆಯನ್ನು ವಿವರಿಸಿದೆ. ಆದರೆ ಅವರಿಗೂ ಅದೇ ಸಮಸ್ಯೆ ಎದುರಾಯಿತು. ಆದ್ದರಿಂದ ಅವರು ನನಗೆ ಬ್ಯಾಗೇಜ್ ಡ್ರಾಪ್ ಕೌಂಟರ್ ಗೆ ತೆರಳಿ ಪರಿಶೀಲನೆ ಪೂರ್ಣಗೊಳಿಸಿಕೊಳ್ಳುವಂತೆ ಸೂಚಿಸಿದರು. ಆದರೆ ಹಬ್ಬದ ಕಾರಣದಿಂದಾಗಿ ಸರತಿ ಸಾಲು ಉದ್ದವಾಗಿದ್ದರಿಂದ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಧಿಕ ಸಮಯ ಬೇಕಾಯಿತು. 

ಕೊನೆಗೆ ನನ್ನ ಸರತಿ ಬರುವಾಗ ನಾನು ತೆರಳಬೇಕಿದ್ದ ವಿಮಾನದ ಚೆಕ್-ಇನ್ ಪ್ರಕ್ರಿಯೆ ಮುಗಿದಿದೆ ಎಂದೂ ವಿಮಾನದಲ್ಲಿ ಲಗೇಜ್ ಕೊಂಡೊಯ್ಯುವುದಕ್ಕೆ ಸಾಧ್ಯವಿಲ್ಲವೆಂದೂ ಸಿಬ್ಬಂದಿ ತಿಳಿಸಿದರು. ಸಂಬಂಧಪಟ್ಟವರಿಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಭದ್ರತಾ ಪರಿಶೀಲನೆ ನಡೆಯುವುದು ಹಾಗೂ ವಿಮಾನ ಏರುವ ಪ್ರಕ್ರಿಯೆ ಬಾಕಿ ಇತ್ತು ಅಷ್ಟರಲ್ಲಿ ಶೌಚಾಲಯದ ಬಳಿ ತೆರಳಿ ಅಲ್ಲಿಯೇ ಲಗೇಜ್ ನ್ನು ಬಿಟ್ಟು ಹೊರಟಿದ್ದಾಗಿ ಮಹಿಳೆ ಹೇಳಿದ್ದಾರೆ.

ಸಹಾನುಭೂತಿಯ ಕೊರತೆ 

"ನಾನು ಹಬ್ಬಕ್ಕೆ ಹಾಗೂ ಇನ್ನಿತರ ಪಾರ್ಟಿಗಳಿಗೆ ಧರಿಸುವುದಕ್ಕಾಗಿ ಬಟ್ಟೆಗಳನ್ನು ತೆಗೆದುಕೊಂಡಿದ್ದೆ. ಅದಷ್ಟೇ ಅಲ್ಲದೇ ಮೇಕ್-ಅಪ್ ಉತ್ಪನ್ನಗಳೂ ಲಗೇಜ್ ನಲ್ಲಿ ಸೇರಿದ್ದವು. ಆದರೆ ಇಲ್ಲಿನ ಅನಾನುಕೂಲದಿಂದಾಗಿ ನಾನು ಲಗೇಜ್ ನ್ನು ಶೌಚಾಲಯದ ಕೊಠಡಿಯ ಎದುರು ಬಿಟ್ಟು ಬರಬೇಕಾಯಿತು. ಕೊನೆಗೆ ಆತುರಾತುರವಾಗಿ ವಿಮಾನವನ್ನು ಕೊನೆಯದಾಗಿ ಏರಿದೆ, ನನ್ನ ಲಗೇಜ್ ನ್ನು ಕಳೆದುಹೋದ, ಪತ್ತೆಯಾದ ವಿಭಾಗದಲ್ಲಿರಿಸಿರುತ್ತಾರೆ ಎಂಬ ವಿಶ್ವಾಸವಿದೆ" ಎಂದು ಮಹಿಳೆ ಹೇಳಿದ್ದಾರೆ.

ಏರ್‌ಲೈನ್ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ಸಹಾನುಭೂತಿ ಮತ್ತು ಬೆಂಬಲದ ಕೊರತೆಯಿಂದ ಮಹಿಳೆ ಅಸಮಾಧಾನಗೊಂಡಿದ್ದಾರೆ. ಆದರೂ ಆಕೆಯ ಕಥೆ ಸುಖಾಂತ್ಯ ಕಂಡಿತು. ಮಹಿಳೆ ಲಖನೌ ತಲುಪಿದ ನಂತರ Lost and found ವಿಭಾಗಕ್ಕೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದರು. "ಸಿಬ್ಬಂದಿಗಳು ಲಗೇಜ್ ನ್ನು ವಶಕ್ಕೆ ಪಡೆದಿದ್ದು ಅದು ಈಗ ಸುರಕ್ಷಿತವಾಗಿದೆ. ನಾನು ಅದನ್ನು ಒಂದು ತಿಂಗಳೊಳಗೆ ವಾಪಸ್ ಪಡೆಯಬೇಕಿದೆ ಎಂದು ವಾಣಿ ಹೇಳಿದ್ದಾರೆ. ಆದರೆ ಈ ಘಟನೆ ಬಗ್ಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಿಂದ ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com