ಉಡುಪಿ: ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಜಾತ್ರೆಯ ವೇಳೆ ನಾಗಸ್ವರ ಸೇವೆ ನೀಡುತ್ತಿದ್ದ ಉಡುಪಿ ಜಿಲ್ಲೆಯ ಕಾಪುವಿನ ಶೇಖ್ ಜಲೀಲ್ ಸಾಹೇಬ್ ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೋಮು ಸೌಹಾರ್ದತೆಯ ಪ್ರತೀಕವಾಗಿದ್ದ 54 ವರ್ಷದ ನಾಗಸ್ವರ ವಾದಕ ಜಲೀಲ್ ಸಾಹೇಬ್ ಅವರು ಇಂದು ನಾಗಸ್ವರ ಹೆಗಲಿಗೇರಿಸಿಕೊಂಡು ಮನೆಯಿಂದ ಹೊರಗೆ ಹೋಗಿದ್ದು, ಹೋಟೆಲ್ ನಲ್ಲಿ ಚಹಾ ಕುಡಿಯಲು ಕುಳಿತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಜಲೀಲ್ ಸಾಹೇಬ್ ಅವರು ಪತ್ನಿ, ಮಗಳು, ಸಹೋದರ ಸಹಿತ ಅಪಾರ ಬಂಧು ಬಳಗಳನ್ನು ಅಗಲಿದ್ದಾರೆ.
ಜಲೀಲ್ ಸಾಹೇಬರು ಮುಸ್ಲಿಂ ಕುಟುಂಬದಿಂದ ಬಂದಿದ್ದರೂ, ದೇವಸ್ಥಾನದಲ್ಲಿ ಹಿಂದೂ ದೇವರಿಗೆ ಸೇವೆ ಸಲ್ಲಿಸುತ್ತಿದರು ಮತ್ತು ಕೋಲ ಮತ್ತು ಆಶ್ಲೇಷಾ ಬಲಿ ಆಚರಣೆಗಳಲ್ಲಿ ನಾಗಸ್ವರ ಸೇವೆ ಸಲ್ಲಿಸಿದ್ದರು.
ಜಲೀಲ್ ಸಾಹೇಬರು ತಮ್ಮ ಅಜ್ಜ ಇಮಾಮ್ ಸಾಹೇಬ್, ತಂದೆ ಬಾಬನ್ ಸಾಹೇಬ್ ಅವರಿಂದ ಬಳುವಳಿಯಾಗಿ ಬಂದ ನಾಗಸ್ವರ ವಾದನವನ್ನು ಕಳೆದ 40 ವರ್ಷಗಳಿಂದ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದರು.
Advertisement