ಬೋವಿ ನಿಗಮದ ಮಾಜಿ ಎಂಡಿ, ಸಿಬ್ಬಂದಿಗಳಿಂದ 97 ಕೋಟಿ ರೂಪಾಯಿ ದುರುಪಯೋಗ: ಸಿಐಡಿ ವರದಿ ಸಲ್ಲಿಕೆ

ಕರ್ನಾಟಕ ಬೋವಿ ಅಭಿವೃದ್ಧಿ ನಿಗಮಕ್ಕೆ (KBDC) ಉದ್ಯೋಗ ಯೋಜನೆಯಡಿ ರಾಜ್ಯ ಸರ್ಕಾರ ನೀಡಿದ್ದ 97 ಕೋಟಿ ರೂಪಾಯಿಗೂ ಅಧಿಕ ಮೊತ್ತ ಹಣವನ್ನು 500 ಮಂದಿ ಫಲಾನುಭವಿಗಳ ಹೆಸರಿನಲ್ಲಿ ಅಕ್ರಮವಾಗಿ ಬಳಕೆ ಮಾಡಲಾಗಿದೆ ಎಂದು ಅಪರಾಧ ತನಿಖಾ ಇಲಾಖೆ (CID) ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಬೋವಿ ಅಭಿವೃದ್ಧಿ ನಿಗಮಕ್ಕೆ (KBDC) ಉದ್ಯೋಗ ಯೋಜನೆಯಡಿ ರಾಜ್ಯ ಸರ್ಕಾರ ನೀಡಿದ್ದ 97 ಕೋಟಿ ರೂಪಾಯಿಗೂ ಅಧಿಕ ಮೊತ್ತ ಹಣವನ್ನು 500 ಮಂದಿ ಫಲಾನುಭವಿಗಳ ಹೆಸರಿನಲ್ಲಿ ಅಕ್ರಮವಾಗಿ ಬಳಕೆ ಮಾಡಲಾಗಿದೆ ಎಂದು ಅಪರಾಧ ತನಿಖಾ ಇಲಾಖೆ (CID) ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. 

ಆರೋಪಿಗಳಾದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಆರ್.ಲೀಲಾವತಿ ಡಾ.ಬಿ.ಕೆ.ನಂಜಪ್ಪ, ಪ್ರಧಾನ ವ್ಯವಸ್ಥಾಪಕ ಪಿ.ಡಿ.ಸುಬ್ಬಪ್ಪ, ಕಚೇರಿ ಅಧೀಕ್ಷಕ ಮತ್ತು ಬೆಂಗಳೂರಿನ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಇತರ ಸಿಬ್ಬಂದಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಐಡಿ ವರದಿಯಲ್ಲಿ ತಿಳಿಸಿದೆ. 

ಆರೋಪಿಗಳು ಉದ್ಯೋಗ ಯೋಜನೆಯ ಫಲಾನುಭವಿಗಳ ಸಹಿಯನ್ನು ಆರ್ ಟಿಜಿಎಸ್  ನಮೂನೆಗಳಲ್ಲಿ ತೆಗೆದುಕೊಂಡು ಅವರ ಬ್ಯಾಂಕ್ ಖಾತೆಗಳಿಗೆ ತಲಾ 5 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ವರ್ಗಾಯಿಸಿದ್ದಾರೆ. ಅವರು ತಮ್ಮ ಒಡೆತನದ ಸೋಮನಾಥೇಶ್ವರ ಎಂಟರ್‌ಪ್ರೈಸಸ್, ಹರಿಣಿತಾ ಎಂಟರ್‌ಪ್ರೈಸಸ್, ಅಂಶಿಕಾ ಎಂಟರ್‌ಪ್ರೈಸಸ್ ಮತ್ತು ನ್ಯೂ ಡ್ರೀಮ್ಸ್ ಎಂಟರ್‌ಪ್ರೈಸಸ್‌ನಂತಹ ಕಂಪನಿಗಳಿಗೆ ಅಪಾರ ಪ್ರಮಾಣದ ಹಣವನ್ನು ವರ್ಗಾಯಿಸಿದ್ದಾರೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ (IISC) ಕೆಲಸ ಮಾಡುತ್ತಿರುವ ಆರ್ ಮಂಗಳಾ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ 51ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಯಶವಂತ್ ಕುಮಾರ್ ಅವರ ಮುಂದೆ ವರದಿ ಸಲ್ಲಿಸಲಾಯಿತು. ಈಕೆ ಪ್ರಕರಣದ ಪ್ರಮುಖ ಆರೋಪಿ ಲೀಲಾವತಿ ಸಹೋದರಿ.
ಬೆಂಗಳೂರಿನ ಐಐಎಸ್ಸಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಮಂಗಳಾ ಅವರ ಖಾತೆಗೆ ಅನ್ಸಿಕಾ ಎಂಟರ್‌ಪ್ರೈಸಸ್, ಹರ್ನಿತಾ ಕ್ರಿಯೇಷನ್ಸ್, ನ್ಯೂ ಡ್ರೀಮ್ಸ್ ಎಂಟರ್‌ಪ್ರೈಸಸ್ ಮತ್ತು ಸೋಮನಾಥೇಶ್ವರ ಎಂಟರ್‌ಪ್ರೈಸಸ್‌ನಿಂದ 91 ಲಕ್ಷ ರೂಪಾಯಿ ಜಮೆಯಾಗಿದೆ. 

ಮಂಗಳಾ ಅವರು ಕೆಬಿಡಿಸಿಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ ಎಂದು ವಾದಿಸಿದರು. ಸಿಐಡಿ ಸಲ್ಲಿಸಿದ ವರದಿಯನ್ನು ಪರಿಗಣಿಸಿದ ನ್ಯಾಯಾಲಯ ಮಂಗಳಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಕೊರೋನಾ ಸಾಲ: ತಿಮ್ಮಯ್ಯ ಮತ್ತು ಶಶಾಂಕ್ ವಿರುದ್ಧ ತಿಪ್ಪಣ್ಣ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಕಲಬುರಗಿ ಜಿಲ್ಲೆಯ ಕಾಳಗಿ ಪೊಲೀಸರು 2022 ರಲ್ಲಿ ಪ್ರಕರಣ ದಾಖಲಿಸಿದ್ದರು. ಫೆಬ್ರವರಿ 2022 ರಲ್ಲಿ, ತಿಮ್ಮಯ್ಯ ಅವರು ದೂರುದಾರರನ್ನು ಮತ್ತು ಇತರ 19 ಜನರನ್ನು ಭೇಟಿ ಮಾಡಿದರು. ಯಾದಗಿರಿಯಲ್ಲಿರುವ ಯೆಸ್ ಬ್ಯಾಂಕ್‌ನ ಶಾಖೆಯಿಂದ ತಲಾ 30,000 ರೂಪಾಯಿಗಳ ಕೊರೋನಾ ಸಾಲ ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿ ಅವರ ಆಧಾರ್ ಕಾರ್ಡ್‌ಗಳು, ಚುನಾವಣಾ ಐಡಿಗಳು, ಪ್ಯಾನ್ ಕಾರ್ಡ್‌ಗಳು ಮತ್ತು ಭಾವಚಿತ್ರಗಳನ್ನು ತೆಗೆದುಕೊಂಡಿದ್ದರು. 

ತಿಮ್ಮಯ್ಯ ಸಾಲದ ಪತ್ರಗಳು ಮತ್ತು ಖಾಲಿ ಕಾಗದಗಳ ಮೇಲೆ ಅವರ ಸಹಿ ಮತ್ತು ಹೆಬ್ಬೆರಳಿನ ಗುರುತುಗಳನ್ನು ಪಡೆದರು. ಸಾಲದ ಮೊತ್ತವನ್ನು ಪಡೆಯಲು ಹೊಸ ಸಿಮ್ ಕಾರ್ಡ್‌ಗಳನ್ನು ಖರೀದಿಸಬೇಕು ಎಂದು ಅವರು ಅವರಿಗೆ ತಿಳಿಸಿದರು. ಅವರು ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಅವರಿಗೆ ನೀಡಿದರು. ನಂತರ, ಯೆಸ್ ಬ್ಯಾಂಕ್‌ನಿಂದ ತಲಾ 10 ಲಕ್ಷ ರೂಪಾಯಿ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ಸಮುದಾಯದ ಮುಖಂಡರೊಬ್ಬರು ಮಾಹಿತಿ ನೀಡಿದರು.

ಬೆಂಗಳೂರಿನ ಕೆಬಿಡಿಸಿ ಕಚೇರಿಯನ್ನು ಸಂಪರ್ಕಿಸಿದಾಗ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದ್ದು, ನಂತರ ಸೋಮನಾಥೇಶ್ವರ ಎಂಟರ್‌ಪ್ರೈಸಸ್ ಖಾತೆಗೆ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com