ಜ. 22ರಂದು ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ, ನಂತರ ಭಕ್ತರ ಭೇಟಿಗೆ ಅವಕಾಶ: ಪೇಜಾವರ ಶ್ರೀಗಳು

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಜನವರಿ 22ರಂದು ಭಗವಾನ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಒಂದು ದಿನದ ನಂತರ ಭಕ್ತರು ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಮತ್ತು ಉಡುಪಿ ಪೇಜಾವರ ಮಠದ ಮುಖ್ಯಸ್ಥ ಶ್ರೀ ವಿಶ್ವಪ್ರಸನ್ನ ತೀರ್ಥರು ಗುರುವಾರ  ಹೇಳಿದರು.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಮಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಜನವರಿ 22ರಂದು ಭಗವಾನ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಒಂದು ದಿನದ ನಂತರ ಭಕ್ತರು ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಮತ್ತು ಉಡುಪಿ ಪೇಜಾವರ ಮಠದ ಮುಖ್ಯಸ್ಥ ಶ್ರೀ ವಿಶ್ವಪ್ರಸನ್ನ ತೀರ್ಥರು ಗುರುವಾರ  ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅಭಿಜಿತ್ ಮುಹೂರ್ತದಲ್ಲಿ ದೇವಸ್ಥಾನದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಭದ್ರತಾ ಕಾರಣಗಳಿಗಾಗಿ ದೇಗುಲ ಲೋಕಾರ್ಪಣೆ ದಿನದಂದು ಆಹ್ವಾನಿತರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು.

ಸುದೀರ್ಘ ಹೋರಾಟದ ನಂತರ ರಾಮಮಂದಿರ ನಿರ್ಮಾಣದೊಂದಿಗೆ ಭಾರತೀಯರ ಬಹುಕಾಲದ ಕನಸು ಈಗ ನನಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದಾಗುವ ಮಂದಿರದ ಉದ್ಘಾಟನೆಯನ್ನು ದೇಶದ ಎಲ್ಲಾ ರಾಮಮಂದಿರಗಳಳ್ಲಿ ಭಕ್ತರು ವೀಕ್ಷಿಸಬಹುದು ಎಂದು ಅವರು ತಿಳಿಸಿದರು.

'ವಿಗ್ರಹ ಪ್ರತಿಷ್ಠಾಪನೆಯ ಆಚರಣೆಗಳು ದೇಗುಲ ಲೋಕಾರ್ಪಣೆಗೆ ಐದು ದಿನಗಳ ಮೊದಲು ಪ್ರಾರಂಭವಾಗುತ್ತವೆ. 5-6 ಅಡಿ ಎತ್ತರದ ರಾಮ ಮೂರ್ತಿಯನ್ನು ಕೆತ್ತನೆ ಮಾಡಲಾಗುತ್ತಿದ್ದು, ಜ. 17ರಂದು ಮೆರವಣಿಗೆ ಮೂಲಕ ಸರಯೂ ನದಿಗೆ ಕೊಂಡೊಯ್ಯಲಾಗುವುದು. ಅಭಿಷೇಕದ ನಂತರ ಅದನ್ನು ದೇವಸ್ಥಾನಕ್ಕೆ ತರಲಾಗುವುದು. ಜನವರಿ 18 ರಂದು ದೇವಸ್ಥಾನದ ಗರ್ಭಗುಡಿಯಲ್ಲಿ ಇಡಲಾಗುವುದು. ಇದೇ ದಿನದಿಂದ ಮುಂದಿನ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ಜನವರಿ 21ರಂದು ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಲಾಗುವುದು. ಇದಾದ ಮುಂದಿನ 48 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ಮುಂದುವರಿಯಲಿದ್ದು, ಈ ಸಂದರ್ಭದಲ್ಲಿ ಭಕ್ತರು ಅಯೋಧ್ಯೆಯ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಅಯೋಧ್ಯೆಯಲ್ಲಿ ಬೃಹತ್ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಅವರು ಹೇಳಿದರು.

ಪೇಜಾವರ ಶ್ರೀಗಳು ಇತರ ಟ್ರಸ್ಟ್ ಸದಸ್ಯರೊಂದಿಗೆ ಅಕ್ಟೋಬರ್ 25 ರಂದು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ದೇಗುಲ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com