ನಾಗಮಂಗಲದ ಸೌಮ್ಯಕೇಶವ ದೇಗುಲದ ಸುತ್ತಲಿನ ಒತ್ತುವರಿ ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಆದೇಶ

ಅಧಿಕಾರಿಗಳ ನಿಷ್ಕ್ರಿಯತೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ನಾಗಮಂಗಲದ ಸೌಮ್ಯಕೇಶವ ದೇವಸ್ಥಾನದ ಸುತ್ತಲಿನ ಅನಧಿಕೃತ ಮತ್ತು ಅಕ್ರಮ ಒತ್ತುವರಿಗೆ ಸಂಬಂಧಿಸಿದಂತೆ ನೀಡಲಾದ ನೋಟಿಸ್‌ಗಳನ್ನು ಅನುಸರಿಸಿ, ಕಾನೂನು ಪ್ರಕಾರ ತೆರವುಗೊಳಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಸೂಚಿಸಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಅಧಿಕಾರಿಗಳ ನಿಷ್ಕ್ರಿಯತೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ನಾಗಮಂಗಲದ ಸೌಮ್ಯಕೇಶವ ದೇವಸ್ಥಾನದ ಸುತ್ತಲಿನ ಅನಧಿಕೃತ ಮತ್ತು ಅಕ್ರಮ ಒತ್ತುವರಿಗೆ ಸಂಬಂಧಿಸಿದಂತೆ ನೀಡಲಾದ ನೋಟಿಸ್‌ಗಳನ್ನು ಅನುಸರಿಸಿ, ಕಾನೂನು ಪ್ರಕಾರ ತೆರವುಗೊಳಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು, ಎರಡು ವಾರಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಸಾರ್ವಜನಿಕ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಶನಿವಾರ ಆದೇಶ ನೀಡಿದೆ.

ನಂತರ ಮುಂದಿನ ನಾಲ್ಕು ವಾರಗಳಲ್ಲಿ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಬೇಕು ಎಂದು ಪೀಠ ಹೇಳಿದೆ.

ಈ ಪುರಾತತ್ವ ಸ್ಥಳದ ಸುತ್ತಲೂ ಒಟ್ಟು 1,566 ಒತ್ತುವರಿಯಾಗಿರುವುದು ಕಂಡುಬಂದಿದೆ. ಇವುಗಳಲ್ಲಿ ಯಾವುದು ಅಕ್ರಮ ಎಂದು ಅಧಿಕಾರಿಗಳು ಈಗ ನಿರ್ಧರಿಸಬೇಕು.

ನಾಗಮಂಗಲದ ನಿವಾಸಿಗಳಾದ ಬಿವಿ ಲೋಕೇಶ್ ಮತ್ತು ವಸಂತಕುಮಾರ್ ಎಂಬುವವರು 2015ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯ್ದೆಗೆ ವಿರುದ್ಧವಾಗಿ ದೇವಾಲಯದಿಂದ 120 ಮೀಟರ್ ಅಂತರದಲ್ಲಿ ಜಾಮಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದರು.

12ನೇ ಶತಮಾನದಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನ ನಿರ್ಮಿಸಿದ ಈ ದೇವಾಲಯವು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ.

ಕಾಯ್ದೆಯ ಪ್ರಕಾರ, ಸಂರಕ್ಷಿತ ಪುರಾತತ್ವ ಸ್ಮಾರಕದಿಂದ 200 ಮೀಟರ್‌ಗಳಷ್ಟು ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವಂತಿಲ್ಲ ಎಂದು ಪಿಐಎಲ್‌ನಲ್ಲಿ ಸೂಚಿಸಲಾಗಿದೆ.

ಈ ವರ್ಷದ ಅಕ್ಟೋಬರ್ 9 ರಂದು ನಡೆದ ಹಿಂದಿನ ವಿಚಾರಣೆಯ ವೇಳೆ ಮಂಡ್ಯ ಜಿಲ್ಲಾಧಿಕಾರಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ಶನಿವಾರ ಜಿಲ್ಲಾಧಿಕಾರಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಫೆಬ್ರುವರಿ 26, 2020 ರಂದು, ಆಪಾದಿತ ಅತಿಕ್ರಮಣಗಳ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸಹಾಯ ಮಾಡಲು ಮತ್ತು ಈಗಾಗಲೇ ನೀಡಲಾದ 52 ನೋಟಿಸ್‌ಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಮಾರ್ಚ್ 31, 2020ರ ಮೊದಲು ಅಫಿಡವಿಟ್ ಸಲ್ಲಿಸಲು ಡಿಸಿಗೆ ಹೈಕೋರ್ಟ್ ನಿರ್ದೇಶನಗಳನ್ನು ನೀಡಿತ್ತು.

ದುರದೃಷ್ಟವಶಾತ್, ಮೂರು ವರ್ಷಗಳ ಅವಧಿಯ ನಂತರವೂ, ಅಕ್ಟೋಬರ್ 2023 ರಲ್ಲಿ ಅಧಿಕಾರಿಗಳ ನಡುವೆ ಪತ್ರವ್ಯವಹಾರವಾಗಿದೆ ಎಂಬುದನ್ನು ಹೊರತುಪಡಿಸಿ, ಈ ವಿಷಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂಬುದನ್ನು ಹೈಕೋರ್ಟ್ ಪೀಠ ಗಮನಿಸಿತು.

ಅಧಿಕಾರಿಗಳು ಈ ವಿಷಯದಲ್ಲಿ ನಿಜವಾದ ಪ್ರಗತಿ ಕಾಣದೆ, ಕಾಗದದ ಕುದುರೆ ಸವಾರಿ ಮಾಡುವುದರಲ್ಲಿ ಸಂತೋಷಪಡುತ್ತಿದ್ದಾರೆ. ಎಎಸ್‌ಐ ನೋಟಿಸ್‌ ನೀಡಿದ್ದರೂ, ಕಾಮಗಾರಿ ನಡೆಸಲಾಗಿದೆ ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ.

'ಈ ನಿರ್ಮಾಣವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಏಕೆಂದರೆ, ಯಾವುದೇ ಯೋಜನಾ ಅನುಮೋದನೆ ಇಲ್ಲ, ಯಾವುದೇ ಪ್ರಾಧಿಕಾರದಿಂದ ಪರವಾನಗಿಗಳನ್ನು ಪಡೆದಿಲ್ಲ. ಅಕ್ರಮ ನಿರ್ಮಾಣವು ಪ್ರಾಚೀನ ಸ್ಮಾರಕದ ಎತ್ತರವನ್ನು ಮೀರಿದೆ. ಈಗಿರುವ ಪುರಾತನ ಸ್ಮಾರಕಕ್ಕಿಂತ ಹೆಚ್ಚಿನ ಎತ್ತರದಲ್ಲಿ ಕಟ್ಟಡದ ನಿರ್ಮಾಣವು ಸ್ಮಾರಕವನ್ನು ಕುಬ್ಜವಾಗಿಸಿದೆ ಮತ್ತು ಅದರ ಪ್ರಾಮುಖ್ಯತೆ ಮತ್ತು ಭವ್ಯತೆಯನ್ನು ಕಡಿಮೆ ಮಾಡಿದೆ. ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಈ ನಿರ್ಮಾಣ ಮಾಡಲಾಗಿದೆ' ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com