ರಾಜ್ಯದಲ್ಲಿ ಹಲವು ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ, ಮೂಲ ಸೌಕರ್ಯ ಕೊರತೆ: 45 ಲಕ್ಷಕ್ಕೂ ಅಧಿಕ ಮಕ್ಕಳ ಜೀವ ಅಪಾಯದಲ್ಲಿ!

ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ರಾಜ್ಯ ನಾಲ್ವರು ಮುಖ್ಯಮಂತ್ರಿಗಳನ್ನು ಕಂಡಿದೆ, ಆದರೆ ರಾಜ್ಯದ ಶಾಲೆಗಳ ಮೂಲಸೌಕರ್ಯಗಳು ಮಾತ್ರ ಸುಧಾರಣೆಯಾಗಿಲ್ಲ, ಹಲವು ಕಡೆಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ.
ಶಿವಾಜಿನಗರದ ಕೂಕ್ಸ್ ರಸ್ತೆಯಲ್ಲಿ ಬಿಬಿಎಂಪಿ ನರ್ಸರಿ ಶಾಲೆ ಛಾವಣಿ ಕುಸಿದು ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಹಾನಿಗೀಡಾಗಿರುವುದು
ಶಿವಾಜಿನಗರದ ಕೂಕ್ಸ್ ರಸ್ತೆಯಲ್ಲಿ ಬಿಬಿಎಂಪಿ ನರ್ಸರಿ ಶಾಲೆ ಛಾವಣಿ ಕುಸಿದು ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಹಾನಿಗೀಡಾಗಿರುವುದು

ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ರಾಜ್ಯ ನಾಲ್ವರು ಮುಖ್ಯಮಂತ್ರಿಗಳನ್ನು ಕಂಡಿದೆ, ಆದರೆ ರಾಜ್ಯದ ಶಾಲೆಗಳ ಮೂಲಸೌಕರ್ಯಗಳು ಮಾತ್ರ ಸುಧಾರಣೆಯಾಗಿಲ್ಲ, ಹಲವು ಕಡೆಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ.

ಶಿವಾಜಿನಗರದ ಹಳೆಯ ಬಿಬಿಎಂಪಿ ಶಾಲೆಯೊಂದು ಕುಸಿದಿರುವುದು ಈ ಸರ್ಕಾರಿ ಕಟ್ಟಡಗಳನ್ನು ನಿರ್ವಹಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಇಲ್ಲಿ ಮಕ್ಕಳ ಜೀವಕ್ಕೆ ಅಪಾಯವಿರುವುದು ಎದ್ದು ಕಾಣುತ್ತಿದೆ. 

ಶಾಲಾ ಸಾಕ್ಷರತೆ ಮತ್ತು ಶಿಕ್ಷಣ ಇಲಾಖೆಗಳ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 47 ಸಾವಿರ ಸರ್ಕಾರಿ ಶಾಲೆಗಳಿವೆ ಮತ್ತು 45.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 2019 ಮತ್ತು 2013 ರ ನಡುವೆ ಮುಖ್ಯಮಂತ್ರಿಗಳು ಅಭಿವೃದ್ಧಿ ಮತ್ತು ಶಿಕ್ಷಣವನ್ನು ಉತ್ತೇಜಿಸಿದ್ದಾರೆ. ಆದರೆ ಬೇರೆ ಬೇರೆ ಇಲಾಖೆಗಳಿಂದ ಮಂಜೂರಾತಿ ಪಡೆಯಲು ಈ ವಲಯಗಳು ಹರಸಾಹಸ ಪಡುತ್ತಲೇ ಇವೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಜುಲೈಯಲ್ಲಿ ಬಜೆಟ್ ಮಂಡಿಸಿದಾಗ, ಸರ್ಕಾರವು 3,833 ಹಳೆಯ ಶಿಥಿಲಗೊಂಡ ಮತ್ತು ಮಳೆಯಿಂದ ಹಾನಿಗೊಳಗಾದ ಶಾಲಾ ಕಟ್ಟಡಗಳನ್ನು ನವೀಕರಣಕ್ಕಾಗಿ ಪಟ್ಟಿ ಮಾಡಿತ್ತು, ಇದರಲ್ಲಿ 724 ಪದವಿಪೂರ್ವ ಕಾಲೇಜು ಕೊಠಡಿಗಳ ನವೀಕರಣಕ್ಕೆ 100 ಕೋಟಿ ರೂಪಾಯಿ ಭರವಸೆ ನೀಡಿದರೂ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.

ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ 2,777 ಕೊಠಡಿಗಳು ಕಳಪೆ ಸ್ಥಿತಿಯಲ್ಲಿವೆ, ಮಳೆಯಿಂದ ಹಾನಿಗೊಳಗಾಗಿವೆ ಎಂದು ಸರ್ಕಾರ ಗುರುತಿಸಿತ್ತು. 2020-2021ರ ಬಜೆಟ್‌ನಲ್ಲಿ ಆಗಿನ ಸಿಎಂ ಬಿಎಸ್ ಯಡಿಯೂರಪ್ಪ ಅವರು 26 ಜಿಲ್ಲೆಗಳ 3,386 ಸರ್ಕಾರಿ ಶಾಲೆಗಳಲ್ಲಿ 6,469 ತರಗತಿ ಕೊಠಡಿಗಳನ್ನು 758 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತು ನಬಾರ್ಡ್ ಸಹಯೋಗದಲ್ಲಿ ಪುನರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಅದಕ್ಕೂ ಹಿಂದೆ ಮೈತ್ರಿ ಸರ್ಕಾರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರ ಸರ್ಕಾರದ ಅವಧಿಯಲ್ಲಿ 1,500 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಿ, 5,000 ತರಗತಿ ಕೊಠಡಿಗಳನ್ನು ಮೇಲ್ದರ್ಜೆಗೇರಿಸಲಾಗಿತ್ತು. ಶಾಲಾ ಕಟ್ಟಡಗಳ ನಿರ್ವಹಣೆಗೆ ‘ಒನ್‌ ಎಸ್ಟೇಟ್‌ ಮ್ಯಾನೇಜರ್‌’ ನೇಮಕ ಮಾಡುವ ಯೋಜನೆ ಸಕಾರಾತ್ಮಕವಾಗಿದ್ದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ.

ಉದ್ದೇಶಿತ ಯೋಜನೆಗಳು ಮತ್ತು ಭರವಸೆಗಳು ಅನುಷ್ಠಾನಗೊಳ್ಳುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪ್ರತಿ ವರ್ಷ ಕಟ್ಟಡಗಳ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಹೇಳುತ್ತಾರೆ.

ಚೈಲ್ಡ್ ರೈಟ್ಸ್ ಟ್ರಸ್ಟ್ (CRT) ನಿರ್ದೇಶಕ ವಾಸುದೇವ್ ಶರ್ಮ, ಕಟ್ಟಡಗಳು ಎಷ್ಟು ಹಳೆಯವು, ಎಷ್ಟು ಕಾಲ ನಿರ್ವಹಣೆ ಮಾಡಬಹುದು ಎಂಬುದನ್ನು ನೋಡಿಕೊಳ್ಳಲು ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗ ಇರಬೇಕು. ಅತ್ಯಂತ ಕಳಪೆ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ಮುರಿಯಬೇಕು. ದುರಂತಗಳು ಸಂಭವಿಸುವವರೆಗೆ ಕಾಯಬಾರದು ಎನ್ನುತ್ತಾರೆ.

ಬಿಬಿಎಂಪಿ ಶಿಕ್ಷಣ ಇಲಾಖೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ , ಕುಸಿದ ಕಟ್ಟಡವು 70 ವರ್ಷಗಳಷ್ಟು ಹಳೆಯದಾಗಿದೆ. ನಾವು ಈಗಾಗಲೇ ಕೆಲವು ತಿಂಗಳ ಹಿಂದೆ ಹೊಸ ಕಟ್ಟಡವನ್ನು ಪ್ರಸ್ತಾಪಿಸಿದ್ದೆವು. ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ನಮಗೆ ತಿಳಿದಿರಲಿಲ್ಲ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com