
ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೊಂಡಾಡಿದ್ದು, ಈ ನಡುವಲ್ಲೇ ಚಾಲಕರು ಹಾಗೂ ನಿರ್ವಹಕರ ದುರ್ವರ್ತನೆ ಹಾಗೂ ಕಿರುಕುಳ ಕುರಿತು ಹಲವು ಮಹಿಳೆಯರು ದೂರಿದ್ದಾರೆ.
ನಿನ್ನೆಯಷ್ಟೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿಯವರು, 'ಕರ್ನಾಟಕದಲ್ಲಿ ಲಕ್ಷ್ಮಿ, ವಂದನಾ, ಪೂಜಾ ಮತ್ತು ಅವರಂತಹ ಲಕ್ಷಾಂತರ ಮಹಿಳೆಯರು ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ಸಬಲರಾಗಿದ್ದಾರೆ. ಇದು ಅವರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುತ್ತದೆ. ಶಾಲೆ, ಕಾಲೇಜಿಗೆ, ಕೆಲಸಕ್ಕೆ ಹೋಗಲಿ ಅಥವಾ ರಾಜ್ಯದ ಎಲ್ಲಿಗೆ ಹೋಗಲಿ, 'ಶಕ್ತಿ ಯೋಜನೆಯು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದೆ. ಯೋಜನೆಯು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ನಮ್ಮ ಆಡಳಿತದ ಮಾದರಿಯು ಕರ್ನಾಟಕದ ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡುವುದನ್ನು ಖಾತ್ರಿಪಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ನೀಡುವ ಜೊತೆ ಜೊತೆಗೆ ಅಸಲಿ ಹಿಂದುತ್ವಕ್ಕೆ ಶಕ್ತಿ ತುಂಬಿದೆ. ಎಲ್ಲಾ ಹಿಂದೂ ದೇಗುಲಗಳು, ಪುಣ್ಯಕ್ಷೇತ್ರಗಳು ತುಂಬಿ ತುಳುಕುತ್ತಿವೆ. ನಮ್ಮ ದೇವರ ಪೂಜಿಸಿ, ಪ್ರೀತಿಸುವುದು, ಇತರ ಧರ್ಮೀಯರನ್ನು ಗೌರವಿಸುವವನೇ ನಿಜವಾದ ಹಿಂದೂ. ಇದು ಈಗ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿದೆ. ನಿಜ ಹಿಂದೂಗಳ ರಕ್ಷಣೆ, ಅಭಿವೃದ್ಧಿಗೆ ಕಾಂಗ್ರೆಸ್ ಸದಾ ಬದ್ಧ ಎಂದ ಹೇಳಿದ್ದರು.
ಆದರೆ, ಯೋಜನೆ ಕುರಿತು ಹಲವು ಮಹಿಳೆಯರು ದೂರುಗಳನ್ನು ಹೇಳಿದ್ದಾರೆ. ಬಿಎಂಟಿಸಿ ಬಸ್ ಪ್ರಯಾಣಿಕರಾಗಿರುವ ಮಾನಸಾ ಆರ್ ಎಂಬುವವರು ಮಾತನಾಡಿ, ಯೋಜನೆ ಬಳಿಕ ನನಗೆ ಅತ್ಯಂತ ಕೆಟ್ಟ ಅನುಭವವಾಗಿತ್ತು. ಬಿಎಂಟಿಸಿ ಕಂಡಕ್ಟರ್ ಒಬ್ಬ ಕ್ಯಾಶ್ ಕೊಡುತ್ತೀರಾ ಅಥವಾ ಅಥವಾ ಸಿದ್ದರಾಮಯ್ಯ ಸ್ಕೀಂ ಆ...?’ ಎಂದು ಅವಹೇಳನಕಾರಿಯಾಗಿ ಕೇಳಿದ್ದ. ಮತ್ತೊಬ್ಬ ಕಂಡಕ್ಟರ್ ಕ್ಯಾಶ್ ಆ ಅಥವಾ ಓಸಿ ಟಿಕೆಟ್ ಆ?’ ಎಂದು ಕೇಳಿದ್ದ ಎಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸಚಿವರ ಗಮನಕ್ಕೆ ತಂದಾಗ, ಸಚಿವರು ಇಂತಹ ಘಟನೆಗಳನ್ನು ದಯವಿಟ್ಟು ನನ್ನ ಅಥವಾ ಸಂಬಂಧಪಟ್ಟಂತಹ ಅಧಿಕಾರಿಗಳ ಗಮನಕ್ಕೆ ತನ್ನಿ. ನಾವು ಕ್ರಮ ಕೈಗೊಳ್ಳುತ್ತೇವೆ. ನಮ್ಮ ಪ್ರಯಾಣಿಕರೊಂದಿಗೆ ಯಾರೂ ಅಸಭ್ಯವಾಗಿ ವರ್ತಿಸುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಅಧಿಕಾರಿಗಳು ಮಾತನಾಡಿ, ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ನೀಡಲಾಗುವ ಪ್ರತಿ ಉಚಿತ ಟಿಕೆಟ್ ಮೇಲೆ ಚಾಲಕರು ಹಾಗೂ ನಿರ್ವಾಹಕರಿಗೆ ಶೇ.2ರಷ್ಟು ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಇದರಿಂದ ಅವರಿಗೆ ರೂ.200-300 ಹೆಚ್ಚಿನ ಹಣವಾಗಿ ಸಿಗುತ್ತದೆ. ಶಕ್ತಿ ಯೋಜನೆಯಡಿ ಈ ಎಲ್ಲಾ ಪ್ರಯಾಣಿಕರನ್ನು ಟಿಕೆಟ್ ಪಡೆದ ಪ್ರಯಾಣಿಕರು ಎಂದೇ ಪರಿಗಣಿಸಲಾಗುತ್ತದೆ, ನಿರ್ವಾಹಕರಾಗಲೀ, ಚಾಲಕರಾಗಲಿ ದುರ್ವರ್ತನೆ ತೋರಿದರೆ ನಮ್ಮ ಗಮನಕ್ಕೆ ತರಬೇಕು. ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು.
Advertisement