ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಗೃಹ ಲಕ್ಷ್ಮಿ ಮನೆಯ ಒಡತಿಗೆ ಪ್ರತಿ ತಿಂಗಳು 2,000ರೂಪಾಯಿಗಳ ಆರ್ಥಿಕ ನೆರವನ್ನು ನೀಡುವುದಾಗಿದೆ. ಆದರೆ ಫಲಾನುಭವಿಗಳಲ್ಲಿ ಅನೇಕರಿಗೆ ಇನ್ನೂ ಹಣ ಜಮೆಯಾಗಿಲ್ಲ. ಇದುವರೆಗೂ 9.44ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗಿಲ್ಲ. ಸದ್ಯ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಧ್ಯಮ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ.
ಡೆಮೊ ಪರಿಶೀಲನೆ ವೇಳೆ ವಿಫಲತೆ, ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳಲ್ಲಿ ಅರ್ಜಿದಾರರ ಹೆಸರು ವ್ಯತ್ಯಾಸ ಸೇರಿದಂತೆ ವಿವಿಧ ಕಾರಣಗಳಿಂದ ಗೃಹ ಲಕ್ಷ್ಮಿ ಯೋಜನೆಯಡಿ 9,44,155 ಅರ್ಜಿದಾರರು ಸರ್ಕಾರದ ಆರ್ಥಿಕ ನೆರವನ್ನು ಪಡೆಯಲು ಸಾಧ್ಯವಾಗಿಲ್ಲ.
ರಾಜ್ಯ ಸರ್ಕಾರ ಆಗಸ್ಟ್ 30 ರಂದು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿ ಹಣ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಕೆಲವು ಅರ್ಜಿದಾರರು ಯೋಜನೆಯಡಿ ಹಣ ಪಡೆಯದಿರಲು ಕಾರಣಗಳನ್ನು ವಿವರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, 1,59,356 ಅರ್ಜಿದಾರರ ಡೆಮೊ ಪರಿಶೀಲನೆ ವಿಫಲವಾಗಿದೆ. 5,96,268 ಅರ್ಜಿದಾರರಿಂದ ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಹೊಂದಾಣಿಕೆಯಾಗಿಲ್ಲ ಎಂದು ಹೇಳಿದರು.
ಆಧಾರ್ ಮತ್ತು ಬ್ಯಾಂಕ್ ಖಾತೆಗಳಲ್ಲಿನ ಅರ್ಜಿದಾರರ ಹೆಸರುಗಳಲ್ಲಿನ ವ್ಯತ್ಯಾಸಗಳು ಮತ್ತು ಅರ್ಜಿದಾರರ ಹೆಸರು ಮತ್ತು ವಿಳಾಸಗಳಲ್ಲಿ ಹೊಂದಾಣಿಕೆಯಾಗದಿರುವುದು ಕೆಲವು ಕಾರಣಗಳಾಗಿವೆ. ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಅರ್ಹ ಅರ್ಜಿದಾರರಿಗೆ ಸರ್ಕಾರವು ಆಗಸ್ಟ್ನಲ್ಲಿ 2,169 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 4 ರವರೆಗೆ 93 ಲಕ್ಷ ಫಲಾನುಭವಿಗಳಿಗೆ 2000 ರೂಪಾಯಿಗಳ ಆರ್ಥಿಕ ನೆರವು ವರ್ಗಾವಣೆ ಮಾಡಲಾಗಿದ್ದು, ಇನ್ನೂ 5.5 ಲಕ್ಷ ಫಲಾನುಭವಿಗಳ ವಿವರ ಸಂಗ್ರಹಿಸಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ.
Advertisement