ಮೈಸೂರು ದಸರೆಯ ವೈಭವಕ್ಕಿಲ್ಲ 'ಬರ': ಪ್ರವಾಸೋದ್ಯಮ ಉತ್ತೇಜಿಸಲು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧಾರ!

ರಾಜ್ಯದ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿರುವ ನಡುವಲ್ಲೂ ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಬಾರಿಯ ಮೈಸೂರು ದಸರಾವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆಗಳ ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ರಾಜ್ಯದ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿರುವ ನಡುವಲ್ಲೂ ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಬಾರಿಯ ಮೈಸೂರು ದಸರಾವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆಗಳ ನಡೆಸುತ್ತಿದೆ.

ರೈತರ ಸಂಕಷ್ಟಕ್ಕೆ ಮರುಗಿದ್ದ ಸರ್ಕಾರ ಈ ಹಿಂದೆ ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸುವುದಾಗಿ ತಿಳಿಸಿತ್ತು. ಆದರೀಗ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 15 ರಿಂದ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುತ್ತಿದ್ದು, ಹಬ್ಬವನ್ನು 9 ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲು ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ನವರಾತ್ರಿ ಉತ್ರವಕ್ಕಾಗಿ 12ಕ್ಕೂ ಹಚ್ಚು ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಅರಮನೆಯ ಮುಂಭಾಗದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ತಾರೆಯರು ಭಾಗಿಯಾಗಲಿದ್ದಾರೆ.

ಕಾರ್ಯಕ್ರಮ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರ್ಕಾರ 15 ಕೋಟಿ ಬಿಡುಗಡೆ ಮಾಡಿದ್ದು, 10 ಕೋಟಿ ಅನುದಾನ ನೀಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮೈಸೂರು ಅರಮನೆ ಮಂಡಳಿಗೆ ದಸರಾ ಕಾರ್ಯಕ್ರಮಗಳಿಗೆ 5 ಕೋಟಿ ರೂ.ಗಳ ಚೆಕ್ ಬರೆಯುವಂತೆ ಸೂಚಿಸಲಾಗಿದೆ. ಇದಲ್ಲದೇ ಪ್ರಾಯೋಜಕತ್ವಕ್ಕಾಗಿ ಕನಿಷ್ಠ 4 ಕೋಟಿ ರೂ.ಗಳನ್ನು ಸಂಗ್ರಹಿಸಲು ಕೈಗಾರಿಕೋದ್ಯಮಿಗಳು, ಸಂಘ-ಸಂಸ್ಥೆಗಳು, ಉದ್ಯಮಿಗಳ ಬಾಗಿಲು ತಟ್ಟಲು ಜಿಲ್ಲಾಡಳಿತವೂ ಮುಂದಾಗಿದೆ ಎಂದು ತಿಳಿದುಬಂದಿದೆ.

ಪ್ರಾಯೋಜಕರು ಪ್ರಮುಖ ಜಾಹೀರಾತು ಸ್ಥಳಗಳನ್ನು ಬಯಸಿದ್ದರು. ಆದರೆ, ಪ್ರೋಟೋಕಾಲ್ ಸಮಸ್ಯೆಗಳಿಂದಾಗಿ ಅದಕ್ಕೆ ಅನುಮತಿ ನೀಡಲು ಸಾಧ್ಯವಾಗಲಿಲ್ಲ ಎಂದು  ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಹೇಳಿದರು.

ಯುವ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ ಮತ್ತು ರೈತ ದಸರಾವನ್ನು ಪ್ರಾಯೋಜಿಸಲು ಅನೇಕರು ಮುಂದೆ ಬಂದಿದ್ದಾರೆಂದು ತಿಳಿಸಿದರು.

ಸ್ಥಳೀಯ ಆರ್ಥಿಕತೆಯ ಬೆನ್ನೆಲುಬಾಗಿರುವ ಪ್ರವಾಸೋದ್ಯಮವನ್ನು ಉತ್ತೇಜಿಸಲು ದಸರಾ ಸಮಿತಿಯು ಸಿದ್ಧತೆಗಳನ್ನು ನಡೆಸಿದೆ. ಬರಗಾಲದಿಂದ ಕಂಗೆಟ್ಟಿರುವ ರೈತರೊಂದಿಗೆ ಜಿಲ್ಲಾಡಳಿತವಿದೆ. ಆದರೆ, ದಸರಾವನ್ನು ಸರಳವಾಗಿ ಆಚರಿಸಿದರೆ, ಅದು ಪ್ರವಾಸಿಗರ ಮೇಲೆ ಪರಿಣಾಮ ಬೀರುತ್ತದೆ. ದಸರಾ ಸಮಿತಿಯು ಕಲಾವಿದರಿಗೆ ಸಾಕಷ್ಟು ಅವಕಾಶವನ್ನು ಕಲ್ಪಿಸಿದೆ. ಎಲ್ಲಾ ಹತ್ತು ವೇದಿಕೆಗಳಲ್ಲಿ 250 ತಂಡಗಳಿಗೆ ಪ್ರದರ್ಶನ ನೀಡಲು ಅನುಮೋದಿಸಿದೆ. ಕಿರು ರಂಗಮಂದಿರ, ಟೌನ್‌ಹಾಲ್, ರಾಮ ಗೋವಿಂದ ಮತ್ತು ನಟನ ರಂಗದಲ್ಲಿ ರಂಗಕರ್ಮಿಗಳು ನಾಟಕಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com