ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಉಮ್ಮಿಕಲ್ ಬೆಟ್ಟದ ಮೇಲಿನ ಗೋಮಾಳದ ಜಾಗದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಈ ಗೋಮಾಳವನ್ನು ಸ್ಥಳೀಯರು ತಮ್ಮ ಜಾನುವಾರುಗಳಿಗೆ ಹುಲ್ಲುಗಾವಲಾಗಿ ಬಳಸುತ್ತಿದ್ದರು. ಈ ಯೋಜನೆಯಲ್ಲಿನ ಅಕ್ರಮಗಳ ತನಿಖೆಗೆ ಸಮಿತಿ ರಚನೆ ಮಾಡಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, 'ಹಸುಗಳನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಅಥವಾ ಪಶುಸಂಗೋಪನೆಯಲ್ಲಿ ತೊಡಗಿರುವ ಅಥವಾ ಇತರೆ ಯಾವುದೇ ಗ್ರಾಮಸ್ಥರು ಯಾವುದೇ ವ್ಯಕ್ತಿ ಈ ಥೀಮ್ ಪಾರ್ಕ್ ನಿರ್ಮಾಣದಿಂದ ಗೋಮಾಳ ಜಮೀನಿನಲ್ಲಿ ತಮ್ಮ ಪ್ರಾಣಿಗಳನ್ನು ಮೇಯಿಸುವುದರಿಂದ ವಂಚಿತರಾಗಿದ್ದಾರೆ ಎಂಬುದನ್ನು ನಂಬಲಾಗುವುದಿಲ್ಲ' ಎಂದಿದೆ.
ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಪಿಐಎಲ್ನಲ್ಲಿ ಆರೋಪಿಸಲಾಗಿದೆ. ಆದರೆ, ಅರ್ಜಿದಾರರು ತೀರಾ ತಡವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ಕೋರ್ಟ್ ತಿಳಿಸಿದೆ.
ಪಿಐಎಲ್ನೊಂದಿಗೆ ಲಗತ್ತಿಸಲಾದ ಛಾಯಾಚಿತ್ರಗಳನ್ನು ಪರಿಶೀಲಿಸಿದ ನಂತರ, ಕೆಲವು ವರ್ಷಗಳ ಹಿಂದೆಯೇ ಕಾಮಗಾರಿಯನ್ನು ಪ್ರಾರಂಭಿಸಿರಬೇಕು ಮತ್ತು ಕಾಮಗಾರಿ ಇದೀಗ ಮುಕ್ತಾಯದ ಹಂತದಲ್ಲಿರುವಂತೆ ತೋರುತ್ತಿದೆ ಎಂದು ನ್ಯಾಯಾಲಯ ಹೇಳಿತು.
ಅರ್ಜಿದಾರರ ವಾದವನ್ನು ತಳ್ಳಿಹಾಕಿದ ಹೈಕೋರ್ಟ್, 'ನಿರ್ಮಾಣವು ಪೂರ್ಣಗೊಳ್ಳುವ ಹಂತದಲ್ಲಿದ್ದಾಗ, ಅರ್ಜಿದಾರರು ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡು ಈ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜತೆಗೆ, ಅರ್ಜಿಯಲ್ಲಿನ ಎಲ್ಲ ಅಂಶಗಳು ಅರ್ಜಿದಾರರ ಊಹೆಯಂತಿದ್ದು, ಸ್ವಂತ ಅಭಿಪ್ರಾಯದ ಬಂಡಲ್ ಆಗಿದೆ. ಇದೊಂದು ಸಾರಾಸಗಟಾಗಿ ತಳ್ಳಿಹಾಕುವಂತಹ ಅರ್ಜಿ’ ಎಂದು ಅಭಿಪ್ರಾಯಪಟ್ಟು ವಜಾಗೊಳಿಸಿ ಆದೇಶಿಸಿತು.
‘ಗೋವುಗಳನ್ನು ಸಾಕದವರು, ಗೋಮಾಳ ರಕ್ಷಣೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವೇ ಇಲ್ಲಎಂದು ಹೈಕೋರ್ಟ್ ಪೀಠ, ಕಳೆದ ಹತ್ತು ವರ್ಷಗಳ ಹಿಂದೆ ಅಭಿಪ್ರಾಯಪಟ್ಟಿದೆ. ಹೀಗಾಗಿ, ಅರ್ಜಿದಾರರು ಗೋವುಗಳನ್ನು ಸಾಕಿದ್ದಾರೆಯೇ? ಎಂದು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದರು.
ಏನಿದು ಪ್ರಕರಣ?
‘ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪಾಡಿಯ ಉಮಿಕುಂಜ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಪರಶುರಾಮ ಥೀಮ್ ಪಾರ್ಕ್ ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ. ಜತೆಗೆ, ಪರುಶುರಾಮ ಪ್ರತಿಮೆಗೆ ಕಳಪೆ ಗುಣಮಟ್ಟದ ತಾಮ್ರ ಬಳಸಲಾಗಿದೆ. ಮೂರ್ತಿಯನ್ನು ಕೆಟ್ಟ ರೀತಿಯಲ್ಲಿ ಜೋಡಿಸಲಾಗಿದ್ದು, ಅದಕ್ಕಾಗಿ ನಿರ್ಮಿಸಿರುವ ರಸ್ತೆಯೂ ಕಳಪೆ ಗುಣಮಟ್ಟದ್ದಾಗಿದೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಅಲ್ಲದೆ, ಈ ಪಾರ್ಕ್ ನಿರ್ಮಾಣಕ್ಕೆ ನಿಗದಿಪಡಿಸಿರುವ ಎರ್ಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1.58 ಎಕರೆ ಭೂಮಿಯು ಗೋಮಾಳಕ್ಕಾಗಿ ಮೀಸಲಿಟ್ಟಿದ್ದಾಗಿದೆ. ಹೀಗಾಗಿ, ಈ ಜಮೀನಿನಲ್ಲಿ ಯಾವುದೇ ಥೀಮ್ ಪಾರ್ಕ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೂ, ಕಾಮಗಾರಿ ನಡೆಸಲಾಗಿದೆ. ಗೋಮಾಳದಲ್ಲಿ ಪಾರ್ಕ್ ನಿರ್ಮಾಣ ಮಾಡುವುದಕ್ಕೆ ಸರ್ಕಾರದ ತೆರಿಗೆ ಹಣ ವ್ಯಯಿಸಲಾಗುತ್ತಿದ್ದು, ಇದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ’ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
Advertisement