ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಹೆಸರು ಬಳಸಿ ವಂಚನೆ: ಆರೋಪಿ ಬಂಧನ

ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸಿದ ಪ್ರಕರಣದಲ್ಲಿ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಸುಧಾಮೂರ್ತಿ
ಸುಧಾಮೂರ್ತಿ
Updated on

ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸಿದ ಪ್ರಕರಣದಲ್ಲಿ ಆರೋಪಿಯನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರ ನಿವಾಸಿ ಅರುಣ್ ಸುದರ್ಶನ್(40) ಬಂಧಿತ ಆರೋಪಿ. ಅಮೆರಿಕದಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಡಾ. ಸುಧಾಮೂರ್ತಿ ಅವರು ಮುಖ್ಯ ಅತಿಥಿಯಾಗಿ ಬರಲಿದ್ದಾರೆಂದು ಸುಳ್ಳು ಪ್ರಚಾರ ಮಾಡಿ, ಕಾರ್ಯಕ್ರಮದ ಟಿಕೆಟ್‌ಗೆ ತಲಾ 40 ಡಾಲರ್ ಪಡೆದು ಜನರಿಗೆ  ವಂಚಿಸಿದ್ದರು. ಈ ಸಂಬಂಧ ಸುಧಾ ಮೂರ್ತಿಯವರ ಆಪ್ತ ಸಹಾಯಕಿ ಮಮತಾ ಸಂಜಯ್ ಅವರು ಲಾವಣ್ಯ ಮತ್ತು ಶೃತಿ ಎಂಬುವವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿ ಅರುಣ್ ಸುದರ್ಶನ್ ಹಾಗೂ ಅಮೆರಿಕದಲ್ಲಿ ವಾಸವಾಗಿರುವ ಶೃತಿಯ ಪತಿ ಸಂಬಂಧಿಗಳಾಗಿದ್ದು, ಕಾರಣಾಂತರಗಳಿಂದ ಎರಡು ಕುಟುಂಬಗಳ ಮಧ್ಯೆ ಮನಸ್ತಾಪ ಉಂಟಾಗಿ ದೂರವಾಗಿದ್ದರು. ಅಮೆರಿಕದಲ್ಲಿದ್ದ ಶೃತಿ ದಂಪತಿ ಕಳೆದ 10 ವರ್ಷಗಳಿಂದ ಅರುಣ್ ಜೊತೆ ಸಂಪರ್ಕ ಕಳೆದುಕೊಂಡಿದ್ದರು. ಹೀಗಾಗಿ ಅರುಣ್, ಶೃತಿ ದಂಪತಿ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಕೂಟ ಆಫ್‌ ನಾರ್ತನ್‌ ಕ್ಯಾಲಿಫೋರ್ನಿಯಾ ಅಮೆರಿಕದಲ್ಲಿ ಸೆ.26ರಂದು ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ. ಸುಧಾ ಮೂರ್ತಿ ಎಂಬ ಕಾರ್ಯಕ್ರಮ ಆಯೋಜಿಸಲು ಯೋಚಿಸಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿದ್ದ ಸಂಬಂಧಿ ಅರುಣ್‌ಗೆ ಕರೆ ಮಾಡಿ ಶೃತಿ ಮಾಹಿತಿ ನೀಡಿದ್ದರು. ಜೊತೆಗೆ ಈ ಕಾರ್ಯಕ್ರಮಕ್ಕೆ ಡಾ.ಸುಧಾಮೂರ್ತಿ ಅವರನ್ನು ಮುಖ್ಯ ಅತಿಥಿಯಾಗಿಸಲು ಸಾಧ್ಯವೇ ಎಂದು ಅರುಣ್​ಗೆ ಶೃತಿ ಕೇಳಿದ್ದರು. ಇದಕ್ಕೆ ಒಪ್ಪಿದ ಅರುಣ್, ಶೃತಿ ದಂಪತಿ ಗೌರವಕ್ಕೆ ಚ್ಯುತಿ ತರಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಧಾಮೂರ್ತಿ ಅವರಿಗೆ ಆಪ್ತ ಸಹಾಯಕಿಯಾಗಿರುವ ಲಾವಣ್ಯ ಜೊತೆಗೆ ಮಾತನಾಡಿದ್ದೇನೆ. ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದಾರೆ ಎಂದು ಶೃತಿ ದಂಪತಿಗೆ ಅರುಣ್ ಸುಳ್ಳು ಹೇಳಿದ್ದ. ಜೊತೆಗೆ ಸುಧಾಮೂರ್ತಿ ಅವರು ಅಮೆರಿಕಕ್ಕೆ ಬರುತ್ತಾರೆ ಎಂದು ಅವರ ವಿಮಾನದ ಟಿಕೆಟ್ ಹಾಗೂ ಅವರ ಖರ್ಚು ವೆಚ್ಚಕ್ಕಾಗಿ ಒಟ್ಟು 5 ಲಕ್ಷ ರೂ. ಪಡೆದಿದ್ದರು. ವಾಸ್ತವದಲ್ಲಿ ಸುಧಾ ಮೂರ್ತಿ ಅವರಿಗೆ ಲಾವಣ್ಯ ಎಂಬ ಆಪ್ತ ಸಹಾಯಕಿಯೇ ಇಲ್ಲ. ವಂಚಿಸುವುದಕ್ಕಾಗಿ ಅರುಣ್ ಸೃಷ್ಟಿಸಿರುವ ಹೆಸರಿದು ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಕಾರ್ಯಕ್ರಮಕ್ಕೆ ಸುಧಾಮೂರ್ತಿ ಬರುತ್ತಾರೆ ಎಂದು ಹೇಳಿದ್ದ ಅರುಣ್ ಮಾತು ನಂಬಿ ಶೃತಿ ದಂಪತಿಯು ಕಾರ್ಯಕ್ರಮದ ಕುರಿತು ಹಲವು ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತನ್ನೂ ನೀಡಿದ್ದರು. ಇದನ್ನು ಗಮನಿಸಿದ್ದ ಸುಧಾ ಮೂರ್ತಿಯವರ ಆಪ್ತ ಸಹಾಯಕಿ ಮಮತಾ, ಸುಧಾ ಮೂರ್ತಿ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ತನಿಖೆ ಕೈಗೊಂಡು ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com