ಮದ್ದೂರು: ಕೌಟುಂಬಿಕ ಕಲಹ ಹಿನ್ನೆಲೆ; ಪತ್ನಿ ಮತ್ತು ಮಗನಿಂದ ವ್ಯಕ್ತಿ ಕೊಲೆ

ಐದು ತಿಂಗಳ ಹಿಂದೆ ಜಗಳ ನಡೆದು ಉಮೇಶ್ ಪತ್ನಿ ಸವಿತಾ(45) ಹಾಗೂ ಮಗ ಶಶಾಂಕ್(22) ಸೇರಿ ಆತನ ಕಾಲಿಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ವ್ಯಕ್ತಿಯನ್ನು ಆತನ ಪತ್ನಿ ಹಾಗೂ ಮಗ ಸೇರಿ ಕೊಲೆ ಮಾಡಿದ್ದಾರೆ.

ಮದ್ದೂರು ತಾಲೂಕು ಚಾಪುರದೊಡ್ಡಿ ಗ್ರಾಮದಲ್ಲಿ ಉಮೇಶ್ (50) ಎಂಬಾತನ ಕೊಲೆಯಾಗಿದೆ. ಕೌಟುಂಬಿಕ ಸಮಸ್ಯೆಯಿಂದಾಗಿ ಗಂಡ ಮತ್ತು ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಐದು ತಿಂಗಳ ಹಿಂದೆ ಜಗಳ ನಡೆದು ಉಮೇಶ್ ಪತ್ನಿ ಸವಿತಾ(45) ಹಾಗೂ ಮಗ ಶಶಾಂಕ್(22) ಸೇರಿ ಆತನ ಕಾಲಿಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದರು.

ಬಳಿಕ ಸಂಬಂಧಿಕರ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಆದರೆ, ಚಾಪುರದೊಡ್ಡಿ ಗ್ರಾಮದಲ್ಲಿ ಶನಿವಾರ ಪಿತೃಪಕ್ಷ ಇರುವುದರಿಂದ ಪೂಜೆ ಪುರಸ್ಕಾರಗಳಲ್ಲಿ ಭಾಗಿಯಾಗಲು ಗುರುವಾರ ಸವಿತಾ ಮತ್ತು ಉಮೇಶ್ ಬಂದಿದ್ದರು. ಈ ವೇಳೆ ಮತ್ತೆ ಜಗಳ ನಡೆದಿದೆ. ಅಂತೆಯೇ ದೊಣ್ಣೆ ಹಾಗೂ ಮಚ್ಚುಗಳಿಂದ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.

ತೀವ್ರ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಉಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾವಿನ ವಿಷಯ ತಿಳಿಯುತ್ತಿದ್ದಂತೆ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಅನುಮಾನಗೊಂಡ ಸ್ಥಳೀಯರು ಮನೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಮದ್ದೂರು ಇನ್ಸ್‌ಪೆಕ್ಟರ್ ವೆಂಕಟೇಗೌಡ, ಬೆಸಗರಹಳ್ಳಿ ಪಿಎಸ್ಐ ಮಲ್ಲಪ್ಪ ಪರಿಶೀಲನೆ ನಡೆಸಿದರು. ಮಾತ್ರವಲ್ಲದೆ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com