ಚಿಕ್ಕಬಳ್ಳಾಪುರ: ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ; ಭೀಕರ ಅಪಘಾತದಲ್ಲಿ 13 ಮಂದಿ ಸಾವು

ಚಿಕ್ಕಬಳ್ಳಾಪುರದ ಹೊರವೊಲಯದಲ್ಲಿ ಗುರುವಾರ ಬೆಳಗ್ಗೆ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.
ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ
ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ

ಚಿಕ್ಕಬಳ್ಳಾಫುರ: ಚಿಕ್ಕಬಳ್ಳಾಪುರದ ಹೊರವೊಲಯದಲ್ಲಿ ಗುರುವಾರ ಬೆಳಗ್ಗೆ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

ಇಂದು ಬೆಳಗಿನ ಜಾವ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯ ಮುಂದೆಯೇ ರಸ್ತೆ ಬದಿ ನಿಂತಿದ್ದ ಬಲ್ಕರ್ ಲಾರಿಗೆ ಟಾಟಾ ಸುಮೋ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸುಮೋದಲ್ಲಿ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓರ್ವ ಗಾಯಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಟಾಟಾ ಸುಮೋ ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರದ ಕಡೆ ಹೋಗುತ್ತಿತ್ತು. ಆದರೆ ದಟ್ಟ ಮಂಜು ಕವಿದ ಹಿನ್ನೆಲೆಯಲ್ಲಿ ಟಾಟಾ ಸುಮೊ ಚಾಲಕನಿಗೆ ಸರಿಯಾಗಿ ರಸ್ತೆ ಕಾಣಿಸಿಲ್ಲ. ಇದರಿಂದ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. 

ಮಗು, ಮೂವರು ಮಹಿಳೆಯರು ಸೇರಿ 13 ಜನ ಮೃತಪಟ್ಟಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಮೃತರು ಆಂಧ್ರದ ಗೊರಂಟ್ಲ ನಿವಾಸಿಗಳು ಎನ್ನುವುದು ಗೊತ್ತಾಗಿದೆ. ಒಬ್ಬೊಬ್ಬರು ಒಂದೊಂದು ಊರಿನವರು ಎಂಬ ಮಾಹಿತಿ ಸಿಕ್ಕಿದೆ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್​.ನಾಗೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೃತರ ವಿವರ ನೀಡಿದ ನಾಗೇಶ್ ಅವರು, ದೊಡ್ಡಬಳ್ಳಾಪುರ ಪಟ್ಟಣದ ನಿವಾಸಿ ಅರುಣಾ(22), ಬಾಗೇಪಲ್ಲಿಯ ನರಸಿಂಹ ಮೂರ್ತಿ (37) , ಆಂಧ್ರ ಪ್ರದೇಶದ ಗೊರಟ್ಲ ಪಲ್ಲಿಯ ನರಸಿಂಹಪ್ಪ (40), ರಿತ್ವಿಕ್(6), ಪೆರಿಮಿಲ್ಲಿ ಪವನ್ ಕುಮಾರ್, ಬೆಂಗಳೂರಿನ ಸುಬ್ಬಮ್ಮ(66) , ಪೆನುಗುಂಟಾದ  ಶಾಂತಮ್ಮ (37), ಪುಟಪರ್ತಿ ರಾಜವರ್ಧನ್ (15) ಪೆನುಗುಂಟಾದ ವೆಂಕಟರಮಣ(51), ಮರಕೋರಪಲ್ಲಿಯ ನಾರಾಯಣಪ್ಪ(50) ಗುರುತಿಸಲಾಗಿದ್ದು, ಉಳಿದ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com