ಬೆಂಗಳೂರು: ಲಕ್ಷಾಂತರ ಸಂಖ್ಯೆಯಲ್ಲಿರುವ ನೀರಾವರಿ ಪಂಪ್ ಸೆಟ್ ಗಳನ್ನು ಸೌರಶಕ್ತಿ ಚಾಲಿತ ಪಂಪ್ ಸೆಟ್ ಗಳನ್ನಾಗಿ ಪರಿವರ್ತಿಸುವ ಯೋಜನೆಗೆ ಕರ್ನಾಟಕ ಸರ್ಕಾರ ಚಾಲನೆ ನೀಡಿದೆ. ಪಂಪ್ ಸೆಟ್ ಗಳಿಗೆ ನೀಡಲಾಗುವ ವಿದ್ಯುತ್ ಸಬ್ಸಿಡಿಯ ಹೊರೆಯನ್ನು ತಗ್ಗಿಸಲು ಈ ಯೋಜನೆ ಸಹಕಾರಿಯಾಗಲಿದೆ.
ಸೌರಶಕ್ತೀಕರಣದ ಯೋಜನೆಯಡಿ, ನೀರಾವರಿ ಪಂಪ್ ಗಳಿಗೆ ವಿದ್ಯುತ್ ಪೂರೈಕೆ ಮಾಡಲು ಸಬ್ ಸ್ಟೇಷನ್ ಗಳ ಬಳಿ ಸೋಲಾರ್ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಜಾಗಗಳನ್ನು ಗುರುತಿಸಲು ಮುಂದಾಗಿದೆ.
ಇದಕ್ಕಾಗಿ ಕಂದಾಯ ಭೂಮಿಗಳನ್ನು ಪ್ರತಿ ಎಕರೆಗೆ 1 ರೂಪಾಯಿಯಂತೆ ಗುತ್ತಿಗೆ ಆಧಾರದ ಮೇಲೆ ಹಾಗೂ ಮಾರುಕಟ್ಟೆ ಬೆಲೆಯಲ್ಲಿ ಖಾಸಗಿ ಭೂಮಿಯನ್ನು ಪಡೆಯಲು ಸರ್ಕಾರ ಮುಂದಾಗಿದೆ.
ಸರ್ಕಾರ ಎರಡು ಹಂತಗಳಲ್ಲಿ ಸೋಲಾರೈಸೇಶನ್ ನತ್ತ ಕೆಲಸ ಮಾಡುತ್ತಿದೆ. ಇದರಲ್ಲಿ ಮೊದಲನೆಯದ್ದಾಗಿ ಒಂದು ರೈತರ ಮಾಲಿಕತ್ವದ ನೀರಾವರಿ ಪಂಪ್ ಸೆಟ್ (ಐಪಿ) ಹಾಗೂ ಸಬ್ ಸ್ಟೇಷನ್ ಗಳಾಗಿವೆ. ಈ ಯೋಜನೆಯಲ್ಲಿ, ಐಪಿ ಸೆಟ್ ಗಳಿಗೆ ಶೇ.70-80 ರಷ್ಟು ವಿದ್ಯುತ್ ಪೂರೈಕೆ ಮಾಡುವ ಸಬ್ ಸ್ಟೇಷನ್ ಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ 34 ಲಕ್ಷ ಐಪಿ ಸೆಟ್ ಗಳಿದ್ದು, ಇದಕ್ಕೆ ವಿದ್ಯುತ್ ಸಬ್ಸಿಡಿಗಾಗಿ ಸರ್ಕಾರ ವಾರ್ಷಿಕ 15,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಈಗ ವಾರ್ಷಿಕ ಒಂದು ಲಕ್ಷ ಐಪಿ ಸೆಟ್ ಗಳನ್ನು ಸೌರ ವಿದ್ಯುತ್ ವ್ಯಾಪ್ತಿಗೆ ತರುವ ಗುರಿ ಹೊಂದಲಾಗಿದೆ. ಈ ವರ್ಷ ಡಿಸೆಂಬರ್ ನಿಂದ ಮಾರ್ಚ್ ವರೆಗೆ 30,000 ಐಪಿ ಸೆಟ್ ಗಳನ್ನು ಸೌರ ವಿದ್ಯುತ್ ವ್ಯಾಪ್ತಿಗೆ ತರುವ ಗುರಿ ಇದೆ.
ಈ ಪ್ರಕ್ರಿಯೆಯನ್ನು ನಿರ್ವಹಿಸಿ, ನಿಗಾ ವಹಿಸುವುದಕ್ಕಾಗಿ ಮೀಸಲಾದ ಸಾಫ್ಟ್ವೇರ್ ನ್ನು ಸೃಷ್ಟಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸೌರ ವಿದ್ಯುತ್ ಉತ್ಪಾದನೆಯನ್ನು ವಿಕೇಂದ್ರೀಕರಿಸುವುದು ಮತ್ತು ಉಷ್ಣ ಸ್ಥಾವರಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ಮೂಲಕ ಒಟ್ಟಾರೆ ವಿದ್ಯುತ್ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಯೋಜನೆಯ ಎರಡನೇ ಗುರಿಯಾಗಿದೆ. ಈ ಪ್ರಯತ್ನದ ಭಾಗವಾಗಿ ಪಾವಗಡ ಸೋಲಾರ್ ಪಾರ್ಕ್ನತ್ತ ಗಮನ ಹರಿಸಲಾಗುತ್ತದೆ.
ಪ್ರಸ್ತುತ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಗೆ ಪ್ರತಿ ಯೂನಿಟ್ಗೆ 5 ರೂ ವೆಚ್ಚವಾಗುತ್ತಿದೆ. ಆದರೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಪ್ರಕಾರ ಸೌರಶಕ್ತಿಯನ್ನು ಪ್ರತಿ ಯೂನಿಟ್ ಉತ್ಪಾದನೆಗೆ ಕೇವಲ 3.17 ರೂ. ಖರ್ಚಾಗಲಿದೆ.
ಸ್ವಾಧೀನಪಡಿಸಿಕೊಳ್ಳಲು ಜಮೀನು ಗುರುತಿಸಲು ಜಿಲ್ಲಾ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಂದಾಯ ಭೂಮಿ ಅಕ್ರಮ ಸಕ್ರಮದಿಂದ ಮುಕ್ತವಾಗಿರಬೇಕು, ಫಲವತ್ತಾಗಿರಬಾರದು ಮತ್ತು ಗ್ರಿಡ್ನಿಂದ 500 ಮೀಟರ್ ಒಳಗೆ ಇರಬೇಕು ಎಂದು ಅವರು ತಿಳಿಸಿದ್ದಾರೆ.
ಮೊದಲ ಹಂತದ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಜಮೀನು ಖರೀದಿ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅದರಂತೆ ಬೆಸ್ಕಾಂ ವ್ಯಾಪ್ತಿಯ 240 ಉಪಕೇಂದ್ರಗಳಿಗೆ 1300 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸಲು ಇಲಾಖೆ ಟೆಂಡರ್ ಕರೆದಿದ್ದು, ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತ್ ಉತ್ಪಾದನೆ ಆರಂಭಿಸಲು ಡಿಸೆಂಬರ್ ಗುರಿ ನಿಗದಿಪಡಿಸಿದೆ.
ರೈತರಿಗೆ ಅರಿವು ಮೂಡಿಸಲು ಮತ್ತು ಸ್ವತಂತ್ರ ಸೋಲಾರ್ ಐಪಿ ಸೆಟ್ಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲು ಇಲಾಖೆಯು ಮೊದಲ ಬಾರಿಗೆ ಕಾರ್ಯಾಗಾರವನ್ನು ಸಹ ಆಯೋಜಿಸುತ್ತಿದೆ. ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಕಾರ್ಯಾಗಾರ ನಡೆಯಲಿದೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ಸೌರಶಕ್ತಿ ಹೊಂದಿದ ಐಪಿ ಸೆಟ್ಗಳನ್ನು ಅಳವಡಿಸುವ ಪರಿಕಲ್ಪನೆಯ ಕುರಿತು ಕರ್ನಾಟಕದ ರೈತರಿಗೆ ಶಿಕ್ಷಣ ನೀಡಲು ಮಹಾರಾಷ್ಟ್ರದ ರೈತರನ್ನು ಆಹ್ವಾನಿಸಲಾಗಿದೆ.
Advertisement