ಪುನೀತ್ ರಾಜ್ ಕುಮಾರ್ (ಸಂಗ್ರಹ ಚಿತ್ರ)
ಪುನೀತ್ ರಾಜ್ ಕುಮಾರ್ (ಸಂಗ್ರಹ ಚಿತ್ರ)

ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಗೆ ಕರ್ನಾಟಕ ಚಾಲನೆ: ಇದರಿಂದ ಆಗುವ ಉಪಯೋಗಗಳೇನು ಅಂದರೆ...

ಹೃದಯಸ್ತಂಭನ ಪ್ರಕರಣಗಳು, ಪ್ರಮುಖವಾಗಿ ಯುವಕರಲ್ಲಿ ಹೆಚ್ಚುತ್ತಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಡಾ. ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಬೆಂಗಳೂರು: ಹೃದಯಸ್ತಂಭನ ಪ್ರಕರಣಗಳು, ಪ್ರಮುಖವಾಗಿ ಯುವಕರಲ್ಲಿ ಹೆಚ್ಚುತ್ತಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಡಾ. ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
 
ಈ ಯೋಜನೆ ಏಕಾಏಕಿ ಹೃದಯಾಘಾತಕ್ಕೆ ಒಳಗಾಗುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಪಡೆಯುವುದಕ್ಕೆ ಸಹಕಾರಿಯಾಗಲಿದೆ. 

ನಟ ಪುನೀತ್ ರಾಜ್ ಕುಮಾರ್ 2021 ರ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಮೃತಪಟ್ಟರು. ಈ ಯೋಜನೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದ್ದು, ಹೃದಯಸ್ತಂಭನಕ್ಕೆ ಒಳಗಾದ ವ್ಯಕ್ತಿಗೆ ಗೋಲ್ಡನ್ ಅವರ್ ಅವಧಿಯಲ್ಲಿ ಚಿಕಿತ್ಸೆ ಕೊಡಿಸುವ ಉದ್ದೇಶ ಹೊಂದಿದೆ. 

ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಅಂದರೆ ಏನು?

ಈ ಯೋಜನೆಯನ್ನು 2 ರೀತಿಯಲ್ಲಿ ಜಾರಿಗೆ ತರಲಾಗುತ್ತದೆ. ಅದೆಂದರೆ ಹಬ್ ಹಾಗೂ ಸ್ಪೋಕ್ ಮಾಡಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ (AED) ಸಾಧನಗಳನ್ನು ಅಳವಡಿಕೆ ಮಾಡಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇತ್ತೀಚೆಗೆ ಯುವಜನರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಗಮನಕ್ಕೆ ಬಂದಿದ್ದು, ಇದು ಆತಂಕಕಾರಿ ಸಂಗತಿ ಎಂದು ಹೇಳಿದ ಸಚಿವರು, ಅಧ್ಯಯನವೊಂದರ ಪ್ರಕಾರ ಹೃದಯಾಘಾತಕ್ಕೆ ಒಳಗಾದವರಲ್ಲಿ ಶೇ.35ರಷ್ಟು ಮಂದಿ 40ರ ಹರೆಯದವರು ಎಂಬ ಮಾಹಿತಿ ನೀಡಿದ್ದಾರೆ. 

ಹೃದಯಾಘಾತ ರೋಗಿಗಳಿಗೆ ಗೋಲ್ಡನ್ ಅವರ್ (ನಿರ್ಣಾಯಕ ಅವಧಿಯಲ್ಲಿ) ಚಿಕಿತ್ಸೆ ನೀಡುವುದು ಬಹಳ ಮುಖ್ಯ ಎಂದು ಹೇಳಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾಮಾನ್ಯ ಜನರ ನೆರವಿಗೆ ಧಾವಿಸುವುದು ಆರೋಗ್ಯ ಸಚಿವರಾಗಿ ತಮ್ಮ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

"ಹೃದಯ ಸ್ತಂಭನದ ಪ್ರಕರಣಗಳಲ್ಲಿ, ಸಾಧ್ಯವಾದಷ್ಟು ಜೀವಗಳನ್ನು ಉಳಿಸಬೇಕು. ಮತ್ತೆ ನಿರ್ಣಾಯಕ ಅವಧಿಯೊಳಗೆ, ಅವರಿಗೆ ಸಮಯಕ್ಕೆ ಚಿಕಿತ್ಸೆ ನೀಡಬೇಕು. ನಮ್ಮ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ," ಎಂದು ಸಚಿವರು ವಿವರಿಸಿದ್ದಾರೆ.

AED ಹೇಗೆ ಕಾರ್ಯನಿರ್ವಹಿಸಲಿದೆ?

ಹಬ್ ಮತ್ತು ಸ್ಪೋಕ್ ಮಾದರಿಯು ಬೈಸಿಕಲ್ ಚಕ್ರವನ್ನು ಹೋಲುವ ವಿತರಣಾ ಜಾಲವಾಗಿದೆ. ಹಬ್ ಮತ್ತು ಸ್ಪೋಕ್ ಮಾದರಿಯು ಹಠಾತ್ ಹೃದಯ ಸ್ತಂಭನವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಸರಕಾರ 85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನು 'ಸ್ಪೋಕ್' ಕೇಂದ್ರಗಳನ್ನಾಗಿ ಮಾಡುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಶ್ರೀ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ಒಟ್ಟು 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಹತ್ತು ಹಬ್‌ಗಳನ್ನು ರಚಿಸಲಾಗಿದೆ. ಯಾರಿಗಾದರೂ ಎದೆನೋವು ಕಾಣಿಸಿಕೊಂಡರೆ, ಕೂಡಲೇ ಕೇಂದ್ರಗಳಿಗೆ ಭೇಟಿ ನೀಡಿ ಇಸಿಜಿ ಮಾಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

ಎಐ ತಂತ್ರಜ್ಞಾನದ ಮೂಲಕ ಅವರ ಸ್ಥಿತಿ ಗಂಭೀರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾಲ್ಕೈದು ನಿಮಿಷಗಳಲ್ಲಿ ಪತ್ತೆ ಹಚ್ಚಬಹುದು ಎಂದು ಸಚಿವರು ತಿಳಿಸಿದ್ದಾರೆ.

ಇಸಿಜಿಯಲ್ಲಿ ಯಾವುದೇ ವ್ಯಕ್ತಿ ನಿರ್ಣಾಯಕ ಹಂತದಲ್ಲಿದ್ದರೆ, ಅಂತಹವರಿಗೆ ಟೆನೆಕ್ಟೆಪ್ಲೇಸ್ ಚುಚ್ಚುಮದ್ದನ್ನು ತಾಲೂಕು ಮಟ್ಟದ ಆಸ್ಪತ್ರೆಗಳಾದ ಸ್ಪೋಕ್ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು, ಹಠಾತ್ ಹೃದಯ ಸ್ತಂಭನವನ್ನು ತಡೆಯಲು ಈ ಚುಚ್ಚುಮದ್ದು ತುಂಬಾ ಪರಿಣಾಮಕಾರಿ ಎಂದು ಸಚಿವರು ವಿವರಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com