ಮೈಸೂರು: ವಿವಾಹಿತ ಮಹಿಳೆಗೆ ಸಂದೇಶ ಕಳುಹಿಸಿದ್ದಕ್ಕೆ ಯುವಕನೊಬ್ಬನನ್ನು ಹತ್ಯೆಗೈದ ಪ್ರಕರಣದ ಟ್ವಿಸ್ಟ್ ನಲ್ಲಿ ಮಹಿಳೆಯ ಪತಿಯ ಸ್ನೇಹಿತನೇ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಸ್ನೇಹಿತ ಮಹಿಳೆಯ ಪತಿ ವಿರುದ್ಧ ದ್ವೇಷ ಸಾಧಿಸಿ, ಪ್ರಕರಣದಲ್ಲಿ ಆತನನ್ನು ಜೈಲಿಗೆ ಕಳುಹಿಸಲು ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವನ್ನು ಭೇದಿಸಿದ ಪೊಲೀಸರು ದಿನೇಶ್ ಮತ್ತು ಆತನ ಸ್ನೇಹಿತ ಭೀಮನನ್ನು ಬಂಧಿಸಿದ್ದಾರೆ. ದಿನೇಶ್ ಸಂತ್ರಸ್ತೆಯ ಪತಿ ಎನ್.ಪ್ರಕಾಶ್ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದ್ದ. ಪ್ರಕಾಶ್ ಆರೋಪಿಯ ಸ್ನೇಹಿತನಾಗಿದ್ದ ಎಂಬುದು ತಿಳಿದುಬಂದಿದೆ.
ಎಚ್. ಡಿ. ಕೋಟೆ ತಾಲೂಕಿನ ನೇರಳೆ ಹುಂಡಿ ನಿವಾಸಿಯಾದ ಭಾನು ಪ್ರಕಾಶ್ ಅಕಾ ಸಿದ್ದು (24) ಕಳೆದ ಗುರುವಾರ ಕೊಲೆಯಾಗಿದ್ದ. ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಬಿನಿ ನದಿ ದಡದಲ್ಲಿ ಆತನ ಶವ ಪತ್ತೆಯಾಗಿತ್ತು. ವಿವಾಹಿತ ಮಹಿಳೆಯನ್ನು ಓಲೈಸಲು ಭಾನು ಪ್ರಕಾಶ್ ಯತ್ನಿಸಿದ್ದ ಎನ್ನಲಾಗಿದೆ. ಆತ ಆಕೆಗೆ ಸಂದೇಶಗಳನ್ನು ಕಳುಹಿಸುತ್ತಿದ್ದ ಮತ್ತು ಕರೆಗಳನ್ನೂ ಮಾಡುತ್ತಿದ್ದ. ಈ ವಿಚಾರವಾಗಿ ಇತ್ತೀಚೆಗೆ ಮಹಿಳೆ ಮತ್ತು ಮೃತನ ಕುಟುಂಬದ ನಡುವೆ ವಾಗ್ವಾದ ನಡೆದಿತ್ತು.
ನಂತರ ಭಾನು ಶವವಾಗಿ ಪತ್ತೆಯಾಗಿದ್ದು, ಆತನ ಕುತ್ತಿಗೆ, ಸೊಂಟ ಮತ್ತು ಹೊಟ್ಟೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಗುರುತುಗಳಿದ್ದವು. ಕೊಲೆಯ ಹಿಂದೆ ಸಂತ್ರಸ್ತೆಯ ಪತಿಯ ಪಾತ್ರವಿದೆ ಎಂದು ಕುಟುಂಬ ಮತ್ತು ಪೊಲೀಸರು ಸಹಜವಾಗಿಯೇ ಶಂಕಿಸಿದ್ದರು. ಆದರೆ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ರೀತಿಯ ಯಾವುದೇ ಅಂಶ ತಿಳಿದುಬಂದಿರಲಿಲ್ಲ.
ಮೃತರ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದಾಗ ಕರೆ ವಿಶ್ಲೇಷಣೆ ಆಧರಿಸಿ ಆರೋಪಿ ದಿನೇಶ್ ಪಾತ್ರದ ಶಂಕೆ ವ್ಯಕ್ತವಾಗಿತ್ತು. ದಿನೇಶ್ನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪ್ರಕರಣದಲ್ಲಿ ಮಹಿಳೆಯ ಪತಿ ಪ್ರಕಾಶ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವ ಉದ್ದೇಶದಿಂದ ಸಿಕ್ಕ ಅವಕಾಶವನ್ನು ಬಳಸಿಕೊಂಡ ಆರೋಪಿ ತನ್ನ ಸ್ನೇಹಿತ ಭೀಮನ ಜೊತೆ ಸೇರಿ ಭಾನು ಪ್ರಕಾಶ್ ನ ಕತ್ತು ಕೊಯ್ದು ಕೊಲೆ ಮಾಡಿದ್ದರು. ನಂತರ ಕೃತ್ಯಕ್ಕೆ ಬಳಸಿದ ಆಯುಧವನ್ನು ನೀರಿನ ಕಾಲುವೆಗೆ ಎಸೆದಿದ್ದರು. ಈ ಸಂಬಂಧ ತನಿಖೆ ನಡೆಯುತ್ತಿದೆ.
Advertisement