ಬೆಂಗಳೂರು: 'ಸಂವಿಧಾನವೇ ನನ್ನ ಧರ್ಮ, ಬಿಜೆಪಿಯವರು ನನ್ನ ಮೇಲೆ ಎಫ್ ಐಆರ್ ದಾಖಲಿಸಿ, ಬಂಧಿಸಲು ಬಯಸಿದರೆ ಅದಕ್ಕೆಲ್ಲಾ ಹೆದರಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಧಾರ್ಮಿಕ ಭಾವನೆಗಳಿ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ತಮ್ಮ ಮೇಲೆ ಉತ್ತರ ಪ್ರದೇಶದ ರಾಂಪುರದಲ್ಲಿ ಎಫ್ಐಆರ್ ದಾಖಲಾಗಿರುವ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆ ಯಾವುದೇ ಧರ್ಮಕ್ಕೆ ವಿರುದ್ಧವಾಗಿಲ್ಲ. ಮನುಷ್ಯರ ನಡುವೆ ತಾರತಮ್ಯ ಮಾಡುವ ಯಾವುದೇ ಧರ್ಮ ಧರ್ಮವಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
ಸಂವಿಧಾನವೇ ನನ್ನ ಧರ್ಮ, ಅದನ್ನು ನಾನು ಅನುಸರಿಸುತ್ತೇನೆ. ಬಿಜೆಪಿಯವರು ನನ್ನ ವಿರುದ್ಧ ಎಫ್ಐಆರ್ ದಾಖಲಿಸಲು ಅಥವಾ ನನ್ನನ್ನು ಬಂಧಿಸಲು ಬಯಸಿದರೆ, ಅದು ಅವರಿಗೆ ಬಿಟ್ಟದ್ದು, ನಾನು ನಿಜವಾಗಿಯೂ ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಈ ಜನರಿಗೆ ಕನ್ನಡ, ಹಿಂದಿ ಅಥವಾ ಇಂಗ್ಲಿಷ್ ಅರ್ಥವಾಗುವುದಿಲ್ಲ. ಸಂವಿಧಾನವೇ ನನ್ನ ಧರ್ಮ ಅಂತಾ ಹೇಳಿದ್ದೇನೆ. ಇದರಿಂದಾಗಿ ಬಿಜೆಪಿಗೆ ಏನಾದರೂ ತೊಂದರೆ ಇದೆಯೇ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಎಷ್ಟು ಬೇಕಾದರೂ ಎಫ್ಐಆರ್ ದಾಖಲಿಸಲಿ, ಹಾಗೆ ಮಾಡಲು ಅವರಿಗೆ ಸ್ವಾತಂತ್ರ್ಯವಿದೆ ಎಂದರು.
Advertisement