'ಶಕ್ತಿ' ಯೋಜನೆ ವಿರೋಧಿಸಿ ಬೆಂಗಳೂರು ಬಂದ್: ಪಟ್ಟು ಬಿಡದ ಸಾರಿಗೆ ಸಂಘಗಳ ಒಕ್ಕೂಟ, ಸಂಧಾನ ಸಭೆ ವಿಫಲ

ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಕರೆ ನೀಡಿರುವ ಸೆ.11ರ ಬೆಂಗಳೂರು ಸಾರಿಗೆ ಬಂದ್'ಗೆ ಸಂಬಂಧಿಸಿದಂತೆ ಗುರುವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಒಕ್ಕೂಟದ ಸದಸ್ಯರ ನಡುವಿನ ಸಂಧಾನಸಭೆ ವಿಫಲಗೊಂಡಿದೆ. ಹೀಗಾಗಿ ಅಂದು ಸಾರಿಗೆ ಬಂದ್ ನಡೆಯುವುದು ಖಚಿತವಾಗಿದ್ದು, ಬೆಂಗಳೂರಿನಲ್ಲಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಕರೆ ನೀಡಿರುವ ಸೆ.11ರ ಬೆಂಗಳೂರು ಸಾರಿಗೆ ಬಂದ್'ಗೆ ಸಂಬಂಧಿಸಿದಂತೆ ಗುರುವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಒಕ್ಕೂಟದ ಸದಸ್ಯರ ನಡುವಿನ ಸಂಧಾನಸಭೆ ವಿಫಲಗೊಂಡಿದೆ. ಹೀಗಾಗಿ ಅಂದು ಸಾರಿಗೆ ಬಂದ್ ನಡೆಯುವುದು ಖಚಿತವಾಗಿದ್ದು, ಬೆಂಗಳೂರಿನಲ್ಲಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಶಕ್ತಿ ಯೋಜನೆ ಜಾರಿ ನಂತರ ಖಾಸಗಿ ಸಾರ್ವಜನಿಕ ಸಾರಿಗೆ ಉದ್ಯಮಕ್ಕೆ ಎದುರಾಗಿರುವ ಸಮಸ್ಯೆಗಳು ಮತ್ತು ಆ್ಯಪ್ ಆಧಾರಿತ ಅಗ್ರಿಗೇಟರ್ ಗಳಿಂದ ಆಗುತ್ತಿರುವ ತೊಂದರೆ ನಿವಾರಿಸುವಂತೆ ಆಗ್ರಹಿಸಿ ಹಾಗೂ 30ಕ್ಕೂ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೆ.11ರಂದು ಬೆಂಗಳೂರು ಸಾರಿಗೆ ಬಂದ್'ಗೆ ಕರೆ ನೀಡಿವೆ.

ಜುಲೈನಲ್ಲೇ ಕರೆಯಲಾಗಿದ್ದ ಸಾರಿಗೆ ಬಂದ್ ನ್ನು ತಡೆಯಲು ರಾಜ್ಯ ಸರ್ಕಾರ ಖಾಸಗಿ ಸಾರಿಗೆ ಉದ್ಯಮಿಗಳೊಂದಿಗೆ ಹಲವು ಬಾರಿ ಸಭೆಯನ್ನು ನಡೆಸಿ ವಿಫಲಗೊಂಡಿತ್ತು. ನಿಗದಿಯಂತೆ ಸಾರಿಗೆ ಬಂದ್ ನಡೆಸಲು ಒಕ್ಕೂಟ ನಿರ್ಧರಿಸಿದೆ. ಅದಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನೂ ಕೂಡ ಮಾಡಿಕೊಳ್ಳಲಾಗಿದೆ.

ಆ ಹಿನ್ನೆಲೆಯಲ್ಲಿ ಗುರುವಾರ ಸಚಿವ ರಾಮಲಿಂಗಾರೆಡ್ಡಿಯವರು, ವಿಧಾನಸೌಧದಲ್ಲಿ ಒಂದೂವರೆ ಗಂಟೆ ಒಕ್ಕೂಟದ ಸದಸ್ಯರೊಂದಿಗೆ ಸಭೆ ನಡೆಸಿದರು. ಆದರೆ, ಬೇಡಿಕೆ ಈಡೇರುವವರೆಗೆ ಬಂದ್ ನಿಂದ ಹಿಂದೆ ಸರಿಯುವುದಿಲ್ಲ ಎಂದು ಒಕ್ಕೂಟದ ಸದಸ್ಯರು ಪಟ್ಟು ಹಿಡಿದ್ದಾರೆ. ಹೀಗಾಗಿ ಸೆ.11ರ ಸಾರಿಗೆ ಬಂದ್ ಹಿಂಪಡೆಯುವಂತೆ ಒಕ್ಕೂಟದ ಮನವೊಲಿಸಲು ಕರೆಯಲಾಗಿದ್ದ ಸಭೆ ವಿಫಲಗೊಳ್ಳುವಂತಾಗಿದೆ.

ಒಕ್ಕೂಟದ ನಾಮನಿರ್ದೇಶಿತ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, ‘ಒಕ್ಕೂಟವು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದೆ, ಶಕ್ತಿ ಯೋಜನೆಯಿಂದ ಆಗಿರುವ ಆದಾಯ ನಷ್ಟಕ್ಕೆ ಪರಿಹಾರ ನೀಡುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಆದರೆ, ಸಾರಿಗೆ ಸಚಿವರಿಂದ ಯಾವುದೇ ಭರವಸೆಗಳು ಬರಲಿಲ್ಲ. ಪರಿಹಾರದ ಬೇಡಿಕೆಯನ್ನು ಲಿಖಿತವಾಗಿ ಈಡೇರಿಸಲು ಸರ್ಕಾರ ಬದ್ಧವಾಗುವವರೆಗೆ ಬಂದ್ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಪರಿಹಾರದ ಭಾಗದ ಕುರಿತು ಸಾರಿಗೆ ಆಯುಕ್ತರೊಂದಿಗೆ ಚರ್ಚಿಸಲು ಸಚಿವರು ಶುಕ್ರವಾರದವರೆಗೆ ಸಮಯ ಕೋರಿದ್ದಾರೆಂದು ಹೇಳಿದರು.

ಈ ನಡುವೆ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಂದ್ ನಿಂದ ಎದುರಾಗಲಿರುವ ಸಮಸ್ಯೆಗಳು ಹಾಗೂ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.

ಈ ವೇಳೆ ಒಕ್ಕೂಟ ಕರೆ ನೀಡಿರುವ ಬಂದ್‌ನಿಂದಾಗಿ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಲಿದ್ದು, ಸಮಸ್ಯೆ ದೂರಾಗಿಸಲು ಖಾಸಗಿ ಬಸ್‌ಗಳು, ಆಟೋಗಳು ಮತ್ತು ಕ್ಯಾಬ್‌ಗಳು ಹೆಚ್ಚು ಬಳಕೆಯಾಗುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳ ನಿಯೋಜಿಸುವಂತೆ ರಾಜ್ಯ ಬಸ್ ನಿಗಮಗಳ ಅಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com