ಕೇರಳದಲ್ಲಿ ಹೆಚ್ಚಿದ ನಿಫಾ ವೈರಸ್, ಗಡಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

ಕೇರಳದಲ್ಲಿ ನಿಫಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ 10 ಹಾಸಿಗೆಗಳ ವಾರ್ಡ್‌ಗಳನ್ನು ನಿಯೋಜಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ 10 ಹಾಸಿಗೆಗಳ ವಾರ್ಡ್‌ಗಳನ್ನು ನಿಯೋಜಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಇದುವರೆಗೆ ಕರ್ನಾಟಕದಲ್ಲಿ ಯಾವುದೇ ನಿಫಾ ವೈರಸ್ ಪ್ರಕರಣಗಳು ವರದಿಯಾಗಿಲ್ಲ. ಎಲ್ಲ ಗಡಿ ಜಿಲ್ಲೆಗಳಲ್ಲಿ ಕಣ್ಗಾವಲು ಆರಂಭಿಸಲಾಗಿದೆ ಎಂದರು.

ನಿಫಾ ವೈರಸ್ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಕ್ಷಿಪ್ರ ಪ್ರತಿಕ್ರಿಯೆ ತಂಡದೊಂದಿಗೆ ನಿನ್ನೆ ಬುಧವಾರ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಚಿವರು ಅಗತ್ಯ ಔಷಧಿಗಳ ದಾಸ್ತಾನು ಮತ್ತು ನಿಫಾ ಪ್ರಕರಣಗಳ ಲಕ್ಷಣಗಳನ್ನು ಗುರುತಿಸಲು ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡಲು ಸೂಚನೆ ನೀಡಿದರು. ಸಮುದಾಯ ಆರೋಗ್ಯ ಕೇಂದ್ರಗಳು (CHC), ಸಾರ್ವಜನಿಕ ಆರೋಗ್ಯ ಕೇಂದ್ರಗಳು (PHC) ಮತ್ತು ದಕ್ಷಿಣ ಕನ್ನಡ, ಮೈಸೂರು, ಕೊಡಗು ಮತ್ತು ಚಾಮರಾಜನಗರದ ಖಾಸಗಿ ಆಸ್ಪತ್ರೆಗಳು ಸಹ ವೈರಸ್ ರೋಗಲಕ್ಷಣಗಳಿಂದ ಬಳಲುತ್ತಿರುವ ಜನರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲು, ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ.

ಜ್ವರದಿಂದ ಬಳಲುತ್ತಿರುವವರು, ಕೋಝಿಕ್ಕೋಡ್‌ಗೆ ಪ್ರಯಾಣಿಸಿದವರು ಅಥವಾ ನಿಫಾ ಪಾಸಿಟಿವ್ ಜನರೊಂದಿಗೆ ನೇರ ಸಂಪರ್ಕದಲ್ಲಿದ್ದವರು ಸೋಂಕಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೇರಳದಲ್ಲಿ ರೋಗಲಕ್ಷಣದ ಜನರನ್ನು ಈಗಾಗಲೇ ಪ್ರತ್ಯೇಕಿಸಲಾಗಿದೆ. ಕರ್ನಾಟಕದಲ್ಲಿ ಶಂಕಿತ ರೋಗಿಗಳ ಗಂಟಲು ಸ್ವ್ಯಾಬ್, ಮೂತ್ರ ಮತ್ತು ರಕ್ತದ ಮಾದರಿಗಳನ್ನು ತೆಗೆದುಕೊಂಡು ರಾಷ್ಟ್ರೀಯ ವೈರಾಣು ಸಂಸ್ಥೆ (NIV) ಗೆ ಕಳುಹಿಸಲು ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. 

ಎಲ್ಲರ ಮೇಲೆ ವೈರಸ್‌ ಪರೀಕ್ಷೆ ಮಾಡಲು ಸಾಧ್ಯವಾಗದ ಕಾರಣ ರೋಗಲಕ್ಷಣ ಹೊಂದಿದವರನ್ನು ಮಾತ್ರ ನಿರಂತರವಾಗಿ ಪರೀಕ್ಷಿಸಲಾಗುವುದು ಮತ್ತು ಕಣ್ಗಾವಲು ಕ್ರಮಗಳನ್ನು ಬಲಪಡಿಸಲಾಗಿದೆ ಎಂದು ಅವರು ಹೇಳಿದರು.

ತಲೆನೋವು, ಉಸಿರಾಟದ ತೊಂದರೆ, ಕೆಮ್ಮು ಮತ್ತು ನೋಯುತ್ತಿರುವ ಗಂಟಲು, ಅತಿಸಾರ, ವಾಂತಿ, ಸ್ನಾಯು ನೋವು ಮತ್ತು ತೀವ್ರ ದೌರ್ಬಲ್ಯದಂತಹ ನಿಫಾ ರೋಗಲಕ್ಷಣಗಳ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜನರು ಮಾಸ್ಕ್‌ಗಳನ್ನು ಬಳಸುವುದು, ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಬಾವಲಿಗಳು ಮತ್ತು ಹಂದಿಗಳ ಸಂಪರ್ಕವನ್ನು ತಪ್ಪಿಸುವುದು, ಹಣ್ಣುಗಳು ಮತ್ತು ತರಕಾರಿಗಳನ್ನು ಸರಿಯಾಗಿ ತೊಳೆದ ನಂತರವೇ ಸೇವಿಸುವುದು ಮುಂತಾದ ತಡೆಗಟ್ಟುವ ನೈರ್ಮಲ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಪರಿಸ್ಥಿತಿಯನ್ನು ಕೂಲಂಕುಷವಾಗಿ ಅವಲೋಕಿಸಲಾಗುತ್ತಿದ್ದು, ಅಗತ್ಯದ ಆಧಾರದ ಮೇಲೆ ಪ್ರಯಾಣ ಸಲಹೆಯನ್ನು ನೀಡಲಾಗುವುದು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಆತಂಕ ಪಡುವ ಅಗತ್ಯವಿಲ್ಲ, ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಜನತೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com