ಹಂಪಿ ಈ ವರ್ಷದ 'ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ'ವಾಗಿ ಕೇಂದ್ರ ಘೋಷಣೆ
ಬೆಂಗಳೂರು: ರಾಜ್ಯದ ವಿಶ್ವ ಪಾರಂಪರಿಕ ತಾಣವಾದ ವಿಜಯನಗರ ಸಾಮ್ರಾಜ್ಯದ ಹಂಪಿಗೆ ಈಗ ಮತ್ತೊಂದು ಗರಿ ಮೂಡಿದೆ. ಈ ವರ್ಷದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮವೆಂದು ಪ್ರವಾಸೋದ್ಯಮ ಸಚಿವಾಲಯವು ಬುಧವಾರ ಘೋಷಣೆ ಮಾಡಿದೆ. ಇದು ಗ್ರಾಮೀಣ ಮೂಲಸೌಕರ್ಯ ಮತ್ತು ಅದರ ಸಂಸ್ಕೃತಿಯನ್ನು ಸುಧಾರಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹಣ ಪಡೆಯಲು ನೆರವಾಗುತ್ತದೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಈ ಘೋಷಣೆ ಮಾಡಲಾಗಿದೆ.
ಅತ್ಯುತ್ತಮ ಪ್ರವಾಸೋದ್ಯಮ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮವಾಗಿ ಹಂಪಿ ಗುರುತಿಸಲ್ಪಟ್ಟಿದೆ ಎಂದು ಸಚಿವಾಲಯ ನೀಡಿರುವ ಪ್ರಶಸ್ತಿ ಪತ್ರದಲ್ಲಿ ತಿಳಿಸಲಾಗಿದೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ವೀಕರಿಸಿದ 795 ಅರ್ಜಿಗಳಲ್ಲಿ ಹಂಪಿಯನ್ನು ಆಯ್ಕೆ ಮಾಡಲಾಗಿದೆ. ಇದೊಂದು ಹೆಮ್ಮೆಯ ಕ್ಷಣ ಎಂದು ಕರ್ನಾಟಕ ಪ್ರವಾಸೋದ್ಯಮ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ಕೆ ಪಾಟೀಲ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ಬುಧವಾರ ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಇದರೊಂದಿಗೆ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತ ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಮತ್ತು ಹೋಮ್ಸ್ಟೇಗಳ ನೋಂದಣಿ ಮತ್ತು ಕಾರ್ಯಾಚರಣೆ ಉತ್ತೇಜಿಸಲು ಕೆಲಸ ಮಾಡಬಹುದು ಎಂದು ಸಚಿವಾಲಯದ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಇದು ಗ್ರಾಮೀಣ ಕಲೆ ಮತ್ತು ಕರಕುಶಲತೆಯನ್ನು ಜನಪ್ರಿಯಗೊಳಿಸಲು ಮತ್ತು ಹಳ್ಳಿಯ ಅನುಭವ ಪಡೆಯಲು, ಪ್ರವಾಸಿಗರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಕೃಷಿ ಮತ್ತು ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ರಾಜ್ಯಕ್ಕೆ ದೊಡ್ಡ ಪ್ರೋತ್ಸಾಹವಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮತ್ತೊಬ್ಬ ಅಧಿಕಾರಿ ಹೇಳಿದರು.
ಈ ಮಧ್ಯೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಮತ್ತು ಸ್ವಚ್ಛತಾ ಪಖವಾಡ (ಸ್ವಚ್ಛತೆ ಪಾಕ್ಷಿಕ) ಮತ್ತು ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಇಲಾಖೆಯು ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನ, ಹಂಪಿ, ಪಟ್ಟದಕಲ್ಲು, ಬೇಲೂರು, ಶೃಂಗೇರಿ, ಸೋಮನಾಥಪುರ, ಮೇಲುಕೋಟೆ ಮತ್ತು ಶ್ರೀರಂಗಪಟ್ಟಣ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ಜಾಗೃತಿ ಅಭಿಯಾನವನ್ನು ಕೈಗೊಂಡಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ