ಬೆಂಗಳೂರು: ಎಪ್ಪತ್ತರ ದಶಕದಲ್ಲಿ ಸ್ಪಿನ್ನರ್ಗಳಾದ ಬಿಎಸ್ ಚಂದ್ರಶೇಖರ್ ಮತ್ತು ಇಎಎಸ್ ಪ್ರಸನ್ನ ಮತ್ತು ಬ್ಯಾಟ್ಸ್ಮನ್ ಗುಂಡಪ್ಪ ವಿಶ್ವನಾಥ್ ಅವರು ತಮ್ಮ ಪ್ರತಿಭೆ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಗಳಿಸಿದ್ದರು. ಇದೀಗ ಇವರ ಹೆಸರುಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್ ಗಳಿಗೆ ಹೆಸರಿಡುವುದಕ್ಕೆ ಅಭಿಯಾನ ನಡೆಸುವುದಾಗಿ ಮಾಜಿ ಎಂಎಲ್ಸಿ ಮೋಹನ್ ಕೊಂಡಜ್ಜಿ ಹೇಳುತ್ತಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಕೊಂಡಜ್ಜಿಯವರ ಬರಹಕ್ಕೆ ಮಾಜಿ ಸಚಿವ, ಬಿಜೆಪಿ ಶಾಸಕ ಸುರೇಶ್ ಕುಮಾರ್, ಖಂಡಿತಾ ಈ ಕೆಲಸ ಆಗಬೇಕು, ನಾನು ನನ್ನ ಕೈಲಾದ ಸಹಕಾರ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ ಎಂದರು.
ಇತಿಹಾಸಕಾರ ರಾಮಚಂದ್ರ ಗುಹಾ ದಾಖಲೆಯಲ್ಲಿ ಈ ಪ್ರಸ್ತಾಪವನ್ನು ಮಾಡಿದ್ದಾರೆ. ಅವರು ಬ್ರಿಜೇಶ್ ಪಟೇಲ್ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರೊಂದಿಗೆ ಮೂರು ಶ್ರೇಷ್ಠ ಕ್ರಿಕೆಟಿಗರ ಹೆಸರನ್ನು ಸ್ಟ್ಯಾಂಡ್ಗಳಿಗೆ ಹೆಸರಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು. ಐದು ದಶಕಗಳ ಹಿಂದೆ ರಣಜಿ ಟ್ರೋಫಿ ಗೆಲ್ಲಲು ಕರ್ನಾಟಕ ತಂಡ ಬಲಿಷ್ಠ ತಂಡಗಳಾದ ದೆಹಲಿ ಮತ್ತು ಬಾಂಬೆಯನ್ನು ಸೋಲಿಸಲು ವಿಶ್ವನಾಥ್ ಅವರ ಬ್ಯಾಟಿಂಗ್ ಕಾರಣ ಎನ್ನುತ್ತಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ನಿತ್ಯ ಭೇಟಿ ನೀಡುವ ಮಹಾನ್ ಕ್ರಿಕೆಟ್ ಪ್ರೇಮಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ಬಗ್ಗೆ ಪ್ರಸ್ತಾಪಿಸುವುದಾಗಿ ಚಲನ ಚಿತ್ರ ನಿರ್ದೇಶಕರೂ ಆಗಿರುವ ಕೊಂಡಜ್ಜಿ ಹೇಳುತ್ತಾರೆ. ಕರ್ನಾಟಕದ ಮತ್ತೋರ್ವ ಮುಖ್ಯಮಂತ್ರಿಯಾಗಿದ್ದ, ಸ್ವತಃ ಕ್ರಿಕೆಟ್ ಪ್ರೇಮಿಯಾಗಿದ್ದ ಎಸ್.ನಿಜಲಿಂಗಪ್ಪ ಕೂಡ ಆಟದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದು, ಸ್ವತಃ ಕ್ರಿಕೆಟಿಗರಾಗಿದ್ದರು ಎಂದು ಕೊಂಡಜ್ಜಿ ನೆನಪಿಸಿಕೊಂಡರು. ಕ್ರೀಡಾಂಗಣದಲ್ಲಿ ನಿಜಲಿಂಗಪ್ಪ ಅವರ ಸ್ಮರಣಾರ್ಥ ಕೊಠಡಿ ಇದೆ. ಅವರ ಕಾಲದಲ್ಲಿಯೇ ಕೆಎಸ್ಸಿಎ ಕ್ರೀಡಾಂಗಣಕ್ಕೆ ರಕ್ಷಣಾ ಅಧಿಕಾರಿಗಳಿಂದ ಭೂಮಿಯನ್ನು ಗುತ್ತಿಗೆ ನೀಡಲಾಯಿತು ಎನ್ನುತ್ತಾರೆ.
ವಾಂಖೆಡೆ ಸ್ಟೇಡಿಯಂನ ತವರು ಮುಂಬೈನಲ್ಲಿ ವಿಜಯ್ ಮರ್ಚೆಂಟ್, ವಿನೂ ಮಂಕಡ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಗೇಟ್ಗಳಿಗೆ ಇಡಲಾಗಿದೆ. ದೆಹಲಿಯ ಪ್ರಸಿದ್ಧ ಫಿರೋಜ್ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಮೊಹಿಂದರ್ ಅಮರನಾಥ್, ಬಿಷೇನ್ ಸಿಂಗ್ ಬೇಡಿ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ.
ಇನ್ನು ಅಂತಾರಾಷ್ಟ್ರೀಯವಾಗಿಯೂ ಕೆಲವು ತಿಂಗಳ ಹಿಂದೆ, ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಬ್ರಿಯಾನ್ ಲಾರಾ ಮತ್ತು ನಮ್ಮವರೇ ಆದ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಗೇಟ್ಗೆ ಹೆಸರಿಸಲಾಯಿತು.'' ಎಂದು ಕ್ರಿಕೆಟ್ ಬರಹಗಾರ ಜೋಸೆಫ್ ಹೂವರ್ ಹೇಳುತ್ತಾರೆ.
ಈ ಮೂವರು ಕರ್ನಾಟಕದ ಶ್ರೇಷ್ಠ ಕ್ರಿಕೆಟಿಗರಾಗಿದ್ದು, ಹೆಸರು ಹೊಂದಲು ಅರ್ಹರಾಗಿರುತ್ತಾರೆ. ಅವರ ಹೆಸರಿನಲ್ಲಿ ಸ್ಟ್ಯಾಂಡ್ ಗಳಿಗೆ ಇಟ್ಟರೆ ಸೂಕ್ತ ಎನ್ನುತ್ತಾರೆ.
ಸ್ವತಃ ಮಾಜಿ ರಣಜಿ ತಾರೆ ಮತ್ತು ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ನ ಸಚೇತಕ ಪ್ರಕಾಶ್ ರಾಥೋಡ್, "ನಾವು ಈ ಪ್ರಸ್ತಾಪವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ" ಎನ್ನುತ್ತಾರೆ.
Advertisement