ಹಾಸನ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ಕಾಡಾನೆ ದಾಳಿ, ಅರವಳಿಕೆ ತಜ್ಞ ವೆಂಕಟೇಶ್ ಸಾವು
ಹಾಸನ: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹುಲಿಯೂರು ಗ್ರಾಮದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ಅರಣ್ಯ ಸಿಬ್ಬಂದಿ ಮೇಲೆ ಆನೆ ದಾಳಿ ಮಾಡಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರವಳಿಕೆ ತಜ್ಞ ವೆಂಕಟೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ಅರವಳಿಕೆ ತಜ್ಞ ವೆಂಕಟೇಶ್ ಅವರು ಶಾರ್ಪ್ ಶೂಟರ್ ಆಗಿದ್ದು, ಚಿಕಿತ್ಸೆ ನೀಡಲೆಂದು ಆನೆಗೆ ಅರವಳಿಕೆ ನೀಡುವ ಪ್ರಕ್ರಿಯೆ ವೇಳೆ ಈ ಅವಘಡ ಸಂಭವಿಸಿದೆ.
40 ವರ್ಷದ ಕಾಡಾನೆ ಭೀಮ ವೈದ್ಯಕೀಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಈ ಆನೆ ಮತ್ತೊಂದು ಆನೆಯೊಂದಿಗೆ ಕಾಳಗ ನಡೆಸಿದ್ದ ಹಿನ್ನೆಲೆಯಲ್ಲಿ ಅದರ ಬೆನ್ನಿನ ಮೇಲೆ ಗಾಯಗಳಾಗಿತ್ತು. ಹೀಗಾಗಿ ಚಿಕಿತ್ಸೆ ನೀಡಲು ಅರಣ್ಯ ಸಿಬ್ಬಂದಿ ಮುಂದಾಗಿದ್ದರು.
“ವೆಂಕಟೇಶ್ ಅವರು ಆನೆಯತ್ತ ಟ್ರ್ಯಾಂಕ್ವಿಲೈಸರ್ ಡಾರ್ಟ್ ಅನ್ನು ಹಾರಿಸಿದ್ದರು. ಅದು ಆನೆ ಹಿಂತಿರುಗಿ ಅವರ ಕಡೆಗೆ ಓಡುವಂತೆ ಪ್ರೇರೇಪಿಸಿತು. ಇದರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ವೆಂಕಟೇಶ್ ಅವರು ನಾಲೆಗೆ ಬಿದ್ದಿದ್ದಾರೆ. ಆನೆ ಅವರನ್ನು ಹಿಂಬಾಲಿಸಿ ದಾಳಿ ಮಾಡಿಗೆ. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಹೇಗೋ ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೂ ಬದುಕುಳಿಯಲಿಲ್ಲ’ ಎಂದು ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್ಕುಮಾರ್ ಅವರು ತಿಳಿಸಿದ್ದಾರೆ.
ವೆಂಕಟೇಶ್ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ