ಧಾರವಾಡ: ಕಳೆದ ಬಾರಿ ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಇತ್ತು. ಈಗ ಸಂವಿಧಾನದ ಸರ್ಕಾರ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಾಖ್ಯಾನಿಸಿದ್ದಾರೆ.
ನಗರದಲ್ಲಿ ಸುದ್ದಿಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶ ನಡಿತಿರೋದು ಭಗವದ್ಗೀತೆ ಮೇಲೆ ಅಲ್ಲ, ಕುರಾನ್ ಮೇಲೆ ಅಲ್ಲ, ಬೈಬಲ್ ಮೇಲೆಯೂ ಅಲ್ಲ. ದೇಶ ನಡಿತಿರೋದು ಸಂವಿಧಾನದ ಮೇಲೆ. ಯಾರು ಏನಾದರೂ ಅನ್ನಲಿ, ಕರ್ನಾಟಕದಲ್ಲಿ ನಡಿತಿರೋದು ಸಂವಿಧಾನದ ಸರ್ಕಾರ. ಸರ್ಕಾರಗಳು ನಡೆಯೋದು ಸಂವಿಧಾನದ ಮೇಲೆ ಎಂದರು.
ಬಸವ ತತ್ವ, ಅಂಬೇಡ್ಕರ್ ತತ್ವದ ಮೇಲೆ ಸರ್ಕಾರ ನಡೀತಿದೆ. ಹಿಂದಿನ ಸರ್ಕಾರ ಹಿಂದುತ್ವದ ಮೇಲೆ ನಡೀತಿತ್ತು. ಪೀಠದ ಮೇಲೆ ಕುಳಿತು ಕಾಗೇರಿ ನಾನು ಆರ್ಎಸ್ಎಸ್ನವರು ಎಂದಿದ್ದರು. ಬಿಜೆಪಿಯವರು ಹಣದ ಮೇಲೆ ಹೆಣ ಮಾಡಿದ್ದಾರೆ. ಕೋವಿಡ್ ಕಾಲದಲ್ಲಿ ಬಿಜೆಪಿಯವರು ಹೆಣದ ಮೇಲೂ ಹಣ ಮಾಡಿದ್ದಾರೆ ಎಂದು ಆರೋಪಿಸಿದರು.
40 ಸಾವಿರ ಕೋಟಿ ಹಗರಣ ಆಗಿದೆ. ಹೆಣದ ಮೇಲೆ ಹಣ ಮಾಡಿದ್ದಾರೆ ಎಂದ್ರೆ ಮನುಷ್ಯತ್ವ ಅಲ್ಲ. ಇದು ಕಾಂಗ್ರೆಸ್ ನಾಯಕರ ಆರೋಪ ಅಲ್ಲ. ಮಾಜಿ ಕೇಂದ್ರ ಸಚಿವರಿಂದ ಹಾಲಿ ಶಾಸಕರ ಮೇಲೆ ಆರೋಪ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಉತ್ತರ ಕೊಡಬೇಕು. ಕೋವಿಡ್ ಭ್ರಷ್ಟಾಚಾರದಲ್ಲಿ ಕೇಂದ್ರಕ್ಕೂ ಪಾಲು ಹೋಗಿರಬಹುದು. 40 ಪರ್ಸೆಂಟ್ ಸರ್ಕಾರ ಬಿರುದು ಬಂದಿರೋದು ಬಿಜೆಪಿಯವರಿಂದ. ಕೇಂದ್ರ ನಾಯಕರು, ರಾಜ್ಯ ನಾಯಕರಿಗೂ ಪಾಲು ಹೋಗಿದೆ ಎಂದು ಗಂಭೀರ ಆರೋಪ ಮಾಡಿದರು.
ಯತ್ನಾಳ್ ಆರೋಪಕ್ಕೆ ವಿಜಯೇಂದ್ರ ಉತ್ತರ ಕೊಡಬೇಕು. ವಿಜಯೇಂದ್ರ, ಯತೀಂದ್ರ ಮೇಲೆ ಶ್ಯಾಡೋ ಸಿಎಂ ಅಂತಾ ಆರೋಪ ಮಾಡಿದ್ರು. ಕಳೆದ ಸರ್ಕಾರದಲ್ಲಿ ಶ್ಯಾಡೋ ಸಿಎಂ ಯಾರಿದ್ರು. ಯತ್ನಾಳ್ ದಾಖಲೆ ಬಿಡುಗಡೆ ಮಾಡ್ತೀವಿ ಅಂತಾರೆ. ಯತ್ನಾಳ್ ಅವರಲ್ಲಿ ನಾನು ಕರ್ನಾಟಕ ಜನರ ಪರ ಮನವಿ ಮಾಡ್ತೀನಿ. ನೀವು ದಾಖಲೆ ಕೊಡಿ. ನೀವು ಪ್ರಮಾಣಿಕರು ಅಂತಾ ಗೊತ್ತಿದೆ. ಯಾವುದೇ ದಾಖಲೆ ಇದ್ದರೂ ಕೊಡಿ ಎಂದರು.
ಬ್ರಿಟಿಷರ ಬೂಟು ನೆಕ್ಕೋರು ಅನ್ನೋ ಹರಿಪ್ರಸಾದ್ ಹೇಳಿಕೆಗೆ ಖರ್ಗೆ ಪ್ರತಿಕ್ರಿಯಿಸಿ, ಅದರಲ್ಲಿ ತಪ್ಪೇನಿದೆ? ಕ್ಷಮಾಪಣೆ ಪತ್ರ ಬರೆದಿದ್ದು ಯಾರು? ಬ್ರಿಟಿಷರ ಬಳಿ ಪೆನ್ಶನ್ ತಗೊಂಡಿದ್ದು ಯಾರು. ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸ್ವಂತ ಇತಿಹಾಸ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಇಲ್ಲ. ಅವರು ಸೃಷ್ಟಿಸಬೇಕಾಗಿದೆ. ಹಾಗಾಗಿ ವಾಟ್ಸಪ್ ಯೂನಿವರ್ಸಿಟಿಯಲ್ಲಿ ಸುಳ್ಳು ಹಬ್ಬಿಸ್ತಾರೆ. ಅದನ್ನೇ ಯುವಕರು ನಂಬುತ್ತಾರೆ ಎಂದು ಟೀಕಿಸಿದರು.
ಅಮಿತ್ ಶಾ ಅಸಮರ್ಥ ಗೃಹಸಚಿವ: ಸ್ವತಂತ್ರ ಭಾರತದಲ್ಲಿ ಅಮಿತ್ ಶಾ ಅವರು ಒಬ್ಬ ಅಸಮರ್ಥ ಗೃಹ ಸಚಿವರಾಗಿದ್ದಾರೆ. ಮಣಿಪುರ ಹಿಂಸಾಚಾರ ಬಗ್ಗೆಯಾಗಲಿ, ಇತ್ತೀಚೆಗೆ ಸಂಸತ್ತಿನಲ್ಲಿ ಭದ್ರತೆ ಲೋಪದ ಬಗ್ಗೆಯಾಗಲೀ ಅವರು ಹೇಳಿಕೆ ನೀಡಿಲ್ಲ. ಅವರು ನಾಗರಿಕ ತಿದ್ದುಪಡಿ ಕಾಯ್ದೆ ಬಗ್ಗೆ ಹೇಳಿಕೆ ನೀಡಲು, ಅಹ್ಮದಾಬಾದ್ ನಲ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಸಮಯವಿದೆ, ಆದರೆ ಮಣಿಪುರ ಜನರ ಸಮಸ್ಯೆ ಬಗ್ಗೆ, ದೇಶದ ಭದ್ರತೆ ಬಗ್ಗೆ ಮಾತನಾಡಲು ಅವರಲ್ಲಿ ಸಮಯವಿಲ್ಲ ಎಂದು ಟೀಕಿಸಿದರು.
Advertisement