ಮಂದಿರ, ಮಸೀದಿ ನಿರ್ಮಾಣಕ್ಕೆ ವ್ಯಯಿಸುವ ಹಣ ಅಶಕ್ತರ ಬದುಕು ಭದ್ರಗೊಳಿಸುವುದಕ್ಕೆ ಖರ್ಚು ಮಾಡಿ: ಮಾಜಿ ಸಚಿವ ಆಂಜನೇಯ

ದೇಶದಲ್ಲಿ ಈಚೆಗೆ ಗುಡಿ-ಗೋಪುರಗಳನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟುವ ಪದ್ಧತಿ ಆರಂಭವಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಬಡವರಿಗೆ ಮನೆ, ದೇಶದ ಜನರ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು ಎಂದು ಮಾಜಿ ಸಚಿವ...
ಸಂವಿಧಾನ ರಕ್ಷಣೆಗಾಗಿ; ಪ್ರಜಾಪ್ರಭುತ್ವ ಉಳಿವಿಗಾಗಿ ಜಾಗೃತಿ ಸಮಾವೇಶ ಉದ್ಘಾಟಿಸಿದ ಎಚ್ ಆಂಜನೇಯ
ಸಂವಿಧಾನ ರಕ್ಷಣೆಗಾಗಿ; ಪ್ರಜಾಪ್ರಭುತ್ವ ಉಳಿವಿಗಾಗಿ ಜಾಗೃತಿ ಸಮಾವೇಶ ಉದ್ಘಾಟಿಸಿದ ಎಚ್ ಆಂಜನೇಯ
Updated on

ಬೆಂಗಳೂರು: ದೇಶದಲ್ಲಿ ಈಚೆಗೆ ಗುಡಿ-ಗೋಪುರಗಳನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟುವ ಪದ್ಧತಿ ಆರಂಭವಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಬಡವರಿಗೆ ಮನೆ, ದೇಶದ ಜನರ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಅವರು ಶುಕ್ರವಾರ ಹೇಳಿದ್ದಾರೆ.

ಕುವೆಂಪು ಜನ್ಮದಿನಾಚರಣೆ ಹಾಗೂ ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿಯು ವಸಂತನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ರಕ್ಷಣೆಗಾಗಿ; ಪ್ರಜಾಪ್ರಭುತ್ವ ಉಳಿವಿಗಾಗಿ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರು, ಹಸಿವು, ಬಡತನಕ್ಕೆ ದೇಶದಲ್ಲಿ ಕೋಟ್ಯಂತರ ಜನ ಸಿಲುಕಿದ್ದಾರೆ. ಇದರಿಂದ ಅವರನ್ನು ಹೊರತರುವ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದರು.

ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಹೆಚ್ಚುತ್ತಿದೆ. ಬಡವರು, ದಲಿತರು ಮೋರಿ, ಮಲಮೂತ್ರ ವಿರ್ಸಜನೆ ಸ್ಥಳದ ಬಳಿ, ಕೊಳಚೆ ಪ್ರದೇಶದಲ್ಲಿ ಮುರುಕು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಒಂದೊತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಈ ಸತ್ಯ ಅರಿತುಕೊಂಡು, ಮಂದಿರ, ಮಸೀದಿ, ಚರ್ಚ್‌ಗಳ ನಿರ್ಮಾಣಕ್ಕೆ ವ್ಯಯಿಸುವ ಹಣವನ್ನು ಅಶಕ್ತರ ಬದುಕನ್ನು ಭದ್ರಗೊಳಿಸುವುದಕ್ಕೆ ಖರ್ಚು ಮಾಡಬೇಕಿದೆ ಎಂದು ಹೇಳಿದರು.

ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು. ಇದಕ್ಕೆ ಕಡಿವಾಣ ಹಾಕಲು ಹಣವನ್ನು ಜನರಿಗೆ ನೇರ ವಿತರಿಸುವ ಯೋಜನೆ ರೂಪಿಸಬೇಕು. ರಸ್ತೆ, ಬೀದಿ ದೀಪ ಎಂದು ವೆಚ್ಚ ಮಾಡುವುದಕ್ಕಿಂತ ಎಸ್ಸಿ, ಎಸ್ಟಿ ಜನರ ಶ್ರೇಯೋಭಿವೃದ್ಧಿಗೆ ನೇರವಾಗಿ ವ್ಯಯಿಸಬೇಕು ಎಂದರು.

ಮನೆ ಕಟ್ಟಿಕೊಳ್ಳಲು, ಸ್ವಯಂ ಉದ್ಯೋಗ, ಉದ್ಯಮ ಆರಂಭಿಸಲು, ಭೂಮಿ ಖರೀದಿ ಹೀಗೆ ವೈಯಕ್ತಿಕವಾಗಿ ಜನರ ಆರ್ಥಿಕ ಪ್ರಗತಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾವನ್ನು ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು. ಇದರಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com