ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಸಿಬಿಐ ತನಿಖೆಗೆ: ಸಚಿವ ಎಸ್ ಟಿ ಸೋಮಶೇಖರ್
ಬೆಂಗಳೂರು: ಸಹಕಾರಿ ಬ್ಯಾಂಕ್ಗಳ ಅಕ್ರಮ ತನಿಖೆಯನ್ನು ಸಿಬಿಐಗೆ ಸರ್ಕಾರ ವಹಿಸಲಿದೆ. 2-3 ದಿನಗಳಲ್ಲಿ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನಯು.ಬಿ. ವೆಂಕಟೇಶ್ ಪ್ರಶ್ನೆ ಕೇಳಿದರು. ಈ ಸರ್ಕಾರ ಸಹಕಾರಿ ಬ್ಯಾಂಕ್ಗಳ ಅಕ್ರಮದ ಪ್ರಕರಣದಲ್ಲಿ ಸುಳ್ಳು ಹೇಳುತ್ತಿದೆ. ಸಿಬಿಐಗೆ ಕೇಸ್ ಕೊಡುವುದಕ್ಕೆ ಹಿಂದೇಟು ಹಾಕುತ್ತಿದೆ. ಕೂಡಲೇ ಸಿಬಿಐ ತನಿಖೆಗೆ ಪ್ರಕರಣ ಕೊಡುವಂತೆ ಆಗ್ರಹ ಮಾಡಿದರು.
ರಾಜ್ಯ ರಾಜಧಾನಿ ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಎಲ್ಲ ರೀತಿಯ ತಯಾರಿ ನಡೆದಿದೆ. ಗೃಹ ಇಲಾಖೆ ಈ ಕುರಿತು ಸೂಕ್ತ ನಿರ್ಧಾರವನ್ನು ಶೀಘ್ರವೇ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಗುರು ರಾಘವೇಂದ್ರ ಬ್ಯಾಂಕ್, ಗುರುಸಾರ್ವಭೌಮ ಸಹಕಾರಿ ಬ್ಯಾಂಕ್, ವಶಿಷ್ಠ ಕ್ರೆಡಿಟ್ ಸಹಕಾರ ಬ್ಯಾಂಕ್ ಅಕ್ರಮ ಸಿಬಿಐಗೆ ವಹಿಸಲು ಸಹಕಾರ ಸಂಘಗಳ ನಿಬಂಧಕರು ಶಿಫಾರಸು ಮಾಡಿದ್ದಾರೆ.
ಈ ಮೂರು ಬ್ಯಾಂಕ್ನಲ್ಲಿ ದೊಡ್ಡ ಅಕ್ರಮ ಆಗಿದೆ. ಈಗಾಗಲೇ ನಾವು ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಶಿಫಾರಸನ್ನು ಈಗ ಗೃಹ ಇಲಾಖೆಗೆ ಮತ್ತು ಸಿಎಂಗೆ ಕಳಿಸುತ್ತೇವೆ. 2-3 ದಿನಗಳಲ್ಲಿ ಸಿಎಂಗೆ ಶಿಫಾರಸು ಕಳಿಸುತ್ತೇವೆ. ಸಿಎಂ ಜೊತೆ ಚರ್ಚೆ ಮಾಡಿ ಸಿಬಿಐಗೆ ತನಿಖೆ ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಸಿಬಿಐಗೆ ಪ್ರಕರಣ ಕೊಡಲು ನಿರ್ಧಾರ ಮಾಡಲಾಗಿದೆ. ಶೀಘ್ರವಾಗಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ಸಿಒಡಿ ಮತ್ತು ಸಹಕಾರ ಇಲಾಖೆಯ ತನಿಖೆ ಮೂರು ವರ್ಷ ನಡೆದಿದೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಲ್ಲಿ ಆಗಿರುವ ಎಲ್ಲ ಅವ್ಯವಹಾರ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಸರ್ಕಾರ ಇದನ್ನು ಪರಿಶೀಲಿಸುತ್ತಿದೆ. ಮುಂದಿನ ಹಂತದಲ್ಲಿ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ಅಗತ್ಯ ಸಿದ್ದತೆ ನಡೆದಿದೆ. ಸಿಬಿಐಗೆ ವಹಿಸುವಾಗ ಅವರು ಕೇಳಬಹುದಾದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂದು ಸಚಿವ ಸೋಮಶೇಖರ್ ವಿವರಿಸಿದರು.
ಇದುವರೆಗೆ 1,290 ಕೋಟಿ ರೂಪಾಯಿ ವಂಚನೆ ಬೆಳಕಿಗೆ ಬಂದಿದೆ. ಸಿಒಡಿ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ. ಈ ಹಂತದಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಿದರೆ ವಿಳಂಬವಾದೀತು ಎಂಬ ಕಾರಣಕ್ಕೆ ಹಾಗೆ ಮಾಡಿರಲಿಲ್ಲ ಎಂದು ವಿವರ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ