ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಕನ್ನಡ ಭಾಷೆ ಬೆಳವಣಿಗೆಗೆ ಹಾನಿ ಮಾಡುತ್ತಿದೆ: ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಆರೋಪ

86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಡಬಲ್ ಇಂಜಿನ್ (ರಾಜ್ಯ ಮತ್ತು ಕೇಂದ್ರ) ಬಿಜೆಪಿ ಸರ್ಕಾರಗಳು ಕನ್ನಡ ಭಾಷೆಯ ರಕ್ಷಣೆ ಮತ್ತು ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ಮೇಲೆ ಅವರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. 
ಡಾ ದೊಡ್ಡರಂಗೇಗೌಡ
ಡಾ ದೊಡ್ಡರಂಗೇಗೌಡ

ಹಾವೇರಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಡಬಲ್ ಇಂಜಿನ್ (ರಾಜ್ಯ ಮತ್ತು ಕೇಂದ್ರ) ಬಿಜೆಪಿ ಸರ್ಕಾರಗಳು ಕನ್ನಡ ಭಾಷೆಯ ರಕ್ಷಣೆ ಮತ್ತು ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ಮೇಲೆ ಅವರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. 

ಕನ್ನಡ ಭಾಷೆಯು ಇತ್ತೀಚೆಗೆ ಶಾಸ್ತ್ರೀಯ ಭಾಷೆಯ ಮಾನ್ಯತೆಯನ್ನು ಪಡೆದಿದ್ದರೂ ರಾಜ್ಯ ಸರ್ಕಾರ ಕೇಂದ್ರದ ಅನುದಾನ ಪಡೆಯುವಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ನಿನ್ನೆ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ವೇಳೆ ಆರೋಪಿಸಿದ್ದಾರೆ. 

ಕೇಂದ್ರ ಸರ್ಕಾರ ಯಾವಾಗಲೂ ಡಬಲ್ ಇಂಜಿನ್ ಸರ್ಕಾರದ ಅನುಕೂಲಗಳ ಬಗ್ಗೆ ಮಾತನಾಡುತ್ತದೆ. ಆದರೆ ಅದು ಕನ್ನಡಕ್ಕೆ ಹೇಗೆ ಒಲವು ತೋರಿದೆ , ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು,  ಭಾಷೆಯ ಅಭಿವೃದ್ಧಿ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಹೆಚ್ಚಿನದನ್ನು ಇದುವರೆಗೆ ಸಾಧಿಸಲಾಗಿಲ್ಲ ಎಂದಿದ್ದಾರೆ.

ಇತರೆ ಶಾಸ್ತ್ರೀಯ ಭಾಷೆಗಳಿಗೆ ನೀಡಿರುವ ಕೇಂದ್ರದ ಅನುದಾನವನ್ನು ಹೋಲಿಸಿ ಮಾತನಾಡಿದ ಅವರು, 2017ರಿಂದ 2020ರ ಅವಧಿಯಲ್ಲಿ ಸಂಸ್ಕೃತ ಭಾಷೆಯ ಅಭಿವೃದ್ಧಿಗೆ 642 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರೆ, ಕನ್ನಡಕ್ಕೆ 42 ಕೋಟಿ ರೂಪಾಯಿಗಳ ಬೇಡಿಕೆಗೆ ಕೇವಲ 3 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದೆ. ಇದೇ ಅವಧಿಯಲ್ಲಿ ತಮಿಳು ಭಾಷೆಗೆ 23 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕನ್ನಡ ಭಾಷೆಗೆ ಸುಮಾರು 5 ಕೋಟಿ ರೂಪಾಯಿ ಬಂದಿದೆ. ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಗಮನಕ್ಕೆ ಇದನ್ನು ತರಬೇಕು ಎಂದು ಒತ್ತಾಯಿಸಿದರು.

ಕನ್ನಡವನ್ನು ಜೀವನೋಪಾಯ, ಉದ್ಯೋಗ ಮತ್ತು ಉದ್ಯಮಶೀಲತೆಯ ಭಾಷೆಯಾಗಿ ಉತ್ತೇಜಿಸಬೇಕು. ಗ್ರಾಮೀಣ ಭಾಗದ ಜನರು ತಮ್ಮ ಮಾತೃಭಾಷೆಯಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಸಿಬ್ಬಂದಿಗಳು ಸಹಾಯ ಮಾಡಲು ನಿರಾಕರಿಸುತ್ತಿದ್ದಾರೆ. ಹೀಗಿರುವಾಗ ಕರ್ನಾಟಕದಲ್ಲಿ ಇಂತಹ ಬ್ಯಾಂಕ್‌ಗಳು ಏಕೆ ಇರಬೇಕು ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿ ಬಿಟ್ಟುಕೊಡುವುದಿಲ್ಲ: ಕನ್ನಡ ಭಾಷೆಗೆ ಕಾನೂನು ರಕ್ಷಣೆ ನೀಡುವ ರಾಜ್ಯ ಸರ್ಕಾರ ಮಂಡಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ದೊಡ್ಡರಂಗೇಗೌಡ ಸ್ವಾಗತಿಸಿದರು. ಕನ್ನಡವನ್ನು ರಾಜ್ಯ ಭಾಷೆಯಾಗಿ ಗುರುತಿಸುವುದು ಮತ್ತು ಆಡಳಿತ ಮತ್ತು ನ್ಯಾಯಾಂಗದಲ್ಲಿ ಭಾಷೆಯ ಬಳಕೆಗೆ ಒತ್ತು ನೀಡುವಂತಹ ಕೆಲವು ಸಕಾರಾತ್ಮಕ ಅಂಶಗಳನ್ನು ಮಸೂದೆ ಒಳಗೊಂಡಿದೆ. ಈ ಮಸೂದೆಯು ಶೀಘ್ರದಲ್ಲೇ ಶಾಸನವಾಗಬೇಕು, ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಕುರಿತು ಮಾತನಾಡಿದ ಅವರು, ನಾವು ಬೇರೆ ಯಾವುದೇ ರಾಜ್ಯಕ್ಕೆ ಕರ್ನಾಟಕದ ಒಂದು ಇಂಚು ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಮಹಾಜನ್ ಆಯೋಗದ ವರದಿಯು ಈಗಾಗಲೇ ಗಡಿ ರೇಖೆಯನ್ನು ಇತ್ಯರ್ಥಪಡಿಸಿದೆ. ಅಕ್ಕಪಕ್ಕದ ರಾಜ್ಯದವರು ಹಿಂಸಾಚಾರದಲ್ಲಿ ತೊಡಗಿ ಸಾಮಾಜಿಕ ಕಳಕಳಿ ಮೂಡಿಸುವುದು ಸರಿಯಲ್ಲ. ಸಮಸ್ಯೆಯನ್ನು ಮಾತುಕತೆಯ ಮೂಲಕ ಮತ್ತು ಕಾನೂನಿನ ಚೌಕಟ್ಟಿನೊಳಗೆ ಇತ್ಯರ್ಥಗೊಳಿಸಬೇಕು.

ಕನ್ನಡವು ಇಂಗ್ಲಿಷ್‌ನ ದಾಳಿಯನ್ನು ಎದುರಿಸುತ್ತಿದೆ. ಕನ್ನಡ ಮತ್ತು ಕರ್ನಾಟಕ ಪರಸ್ಪರ ಅವಲಂಬಿತವಾಗಿದ್ದು, ಅವುಗಳ ನಡುವೆ ಯಾವುದೇ ಪ್ರತ್ಯೇಕತೆಯು ಭಾಷೆಗೆ ಹಾನಿಯಾಗಬಹುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com