ಮಹದಾಯಿ ಯೋಜನೆಗೆ ಮತ್ತೆ ಕೊಕ್ಕೆ: ಜನರ ಬದುಕು ಹದಗೆಡಿಸುವ ನಿಮಗೆ ಎಷ್ಟು ಉಗಿದರೂ ಕಮ್ಮಿ, ಬಿಜೆಪಿ ವಿರುದ್ಧ ಜೆಡಿಎಸ್ ಕಿಡಿ

ಮಹದಾಯಿ ಯೋಜನೆಗೆ ಮತ್ತೆ ಕೊಕ್ಕೆ ಹಾಕಲಾಗುತ್ತಿದ್ದು, ಜನರ ಬದುಕು ಹದಗೆಡಿಸುವ ನಿಮಗೆ ಎಷ್ಟು ಉಗಿದರೂ ಕಮ್ಮಿ ಎಂದು ಬಿಜೆಪಿ ವಿರುದ್ಧ ಜೆಡಿಎಸ್ ಕಿಡಿಕಾರಿದೆ.
ಕುಮಾರಸ್ವಾಮಿ
ಕುಮಾರಸ್ವಾಮಿ
Updated on

ಬೆಂಗಳೂರು: ಮಹದಾಯಿ ಯೋಜನೆಗೆ ಮತ್ತೆ ಕೊಕ್ಕೆ ಹಾಕಲಾಗುತ್ತಿದ್ದು, ಜನರ ಬದುಕು ಹದಗೆಡಿಸುವ ನಿಮಗೆ ಎಷ್ಟು ಉಗಿದರೂ ಕಮ್ಮಿ ಎಂದು ಬಿಜೆಪಿ ವಿರುದ್ಧ ಜೆಡಿಎಸ್ ಕಿಡಿಕಾರಿದೆ.

ಈ ಸಂಬಂಧ ಗೋವಾ ರಾಜ್ಯದ ಪತ್ರಿಕಾ ವರದಿಯೊಂದಿಗೆ  ಸರಣಿ ಟ್ವೀಟ್ ಮಾಡಿರುವ ಜೆಡಿಎಸ್,  ಮಹದಾಯಿ ಯೋಜನೆಯ ಒಪ್ಪಿತ ಪರಿಷ್ಕ್ರತ ವಿಸ್ತೃತ ಯೋಜನಾ ವರದಿಯ ಮೇಲೆ ಸ್ಟೇ ತರಲು ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋಗಲಿದ್ದಾರೆ. ಇದರ ಜೊತೆಗೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಅರಣ್ಯ ಇಲಾಖೆ ಹಲವು ಸ್ಪಷ್ಟನೆ ಕೇಳಿದ್ದು, ಮಹತ್ವಾಕಾಂಕ್ಷಿ ಯೋಜನೆಗೆ ಮತ್ತೆ ಕೊಕ್ಕೆ ಹಾಕಲಾಗುತ್ತಿದೆ ಎಂದು ಹೇಳಿದೆ.

ಕೇಂದ್ರ, ರಾಜ್ಯ ಮತ್ತು ಗೋವಾದಲ್ಲೂ ಬಿಜೆಪಿ ಸರ್ಕಾರವಿದ್ದು, ಇವರೆಲ್ಲರಿಗೂ ಒಂದೇ ಹೈಕಮಾಂಡ್. ಆದ್ರೂ ಈ ಯೋಜನೆಯನ್ನು ಅನಗತ್ಯ ವಿವಾದಕ್ಕೀಡು ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಬದುಕು ಹಸನಾಗಿಸುವ ಇಂತಹ ಯೋಜನೆ, ರಾಜ್ಯ ಸರ್ಕಾರದ ಪಾಲಿಗೆ ಬರೀ ರಾಜಕಾರಣದ ಟ್ರಂಪ್‌ ಕಾರ್ಡ್. ಅವರಿಗೆ ಎಂತಹ ಬದ್ಧತೆಯೂ ಇಲ್ಲ. ಓಟಿಗಾಗಿ ಏನೂ ಮಾಡಲು ಹೇಸದ ಕೊಳಕು ರಾಜಕಾರಣವಿದು. ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಸುಮ್ಮನೆ ಕಾಲಹರಣ ಮಾಡುವ ಇಂತಹ ಹೈಕಮಾಂಡ್ ಗುಲಾಮಿ ಸರ್ಕಾರ ಕಿತ್ತೊಗೆಯಲೇಬೇಕು ಎಂದು ಕರೆ ನೀಡಿದೆ.

ಅಂತೂ ಇಂತೂ ಕುಂತಿ ಮಕ್ಕಳಿಗೆ ವನವಾಸ ತಪ್ಪಿದ್ದಲ್ಲ ಅನ್ನುವ ಹಾಗೆ, ಉತ್ತರ ಕರ್ನಾಟಕದ ಜನರ ಬವಣೆಗೆ ಕೊನೆ ಇಲ್ಲದಂತಾಗಿದೆ. ಇಂತಹ ಹೀನ ರಾಜಕಾರಣದಿಂದಾಗಿ ಗೋವಾದಲ್ಲಿ ವಾಸಿಸುವ ಕನ್ನಡಿಗರಿಗೂ ಮಾನಸಿಕ ಹಿಂಸೆ ಅನುಭವಿಸುವ ಸ್ಥಿತಿ ಉಲ್ಬಣವಾಗುತ್ತಿದೆ. ಇತ್ತ ಯೋಜನೆಗೆ ಹಾತೊರೆಯುತ್ತಿರುವ ಕನ್ನಡಿಗರ ಬಾಯಿಗೆ ಮಣ್ಣುಹಾಕುವ ಬಿಜೆಪಿಯವರೆ, ನಿಮ್ಮದು ಕಲ್ಲು ಮನಸ್ಸು. ಒಟ್ಟಿನಲ್ಲಿ ಕನ್ನಡಿಗರು ನಿಮ್ಮ ರಾಜಕೀಯ ಬೇಗೆಯಲ್ಲಿ ಬೆಂದು ಹೋಗಬೇಕು, ನೀವು ಅದರಲ್ಲಿ ಚಳಿ ಕಾಯಿಸಿಕೊಂಡು ಲಾಭ ಮಾಡಿಕೊಳ್ಳಬೇಕು. ಇಷ್ಟೇ ತಾನೆ ನಿಮ್ಮ ಉದ್ದೇಶ? ಜನರ ಬದುಕು ಹದಗೆಡಿಸುವ ನಿಮಗೆ ಎಷ್ಟು ಉಗಿದರೂ ಕಮ್ಮಿ ಎಂದು ಕಿಡಿಕಾರಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com