ಕುಮಾರ ಕೃಪಾದಲ್ಲಿ ‘ಸ್ಯಾಂಟ್ರೋ’ ರವಿ ವಾಸ್ತವ್ಯ ಹೂಡಲು ನೆರವು ನೀಡಿದ್ದು ಜಂಟಿ ಕಾರ್ಯದರ್ಶಿ!
ಬೆಂಗಳೂರು: ಯಾವುದೇ ಅಡೆತಡೆಗಳಿಲ್ಲದಂತೆ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಕುಮಾರಕೃಪಾದಲ್ಲಿ ವ್ಯಾಸ್ತವ್ಯ ಹೂಡಲು ಜಂಟಿ ಕಾರ್ಯದರ್ಶಿ ಹಾಗೂ ಅವರ ಅಧೀನದಲ್ಲಿರುವ ಕೆಎಸ್ಟಿಡಿಸಿ ಸಿಬ್ಬಂದಿ ದೇವರಾಜ್ ಅವರು ನೆರವು ನೀಡಿದ್ದರೆಂದು ತಿಳಿದುಬಂದಿದೆ.
ಈ ಬಗ್ಗೆ ಜೆಡಿಎಸ್ನ ಹಿರಿಯ ನಾಯಕ ಎಚ್ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದು, ದೇವರಾಜ್ ಹಾಗೂ ಸ್ಯಾಂಟ್ರೋ ರವಿಯವರ ಚಟುವಟಿಕೆಗಳ ಬಗ್ಗೆ ಜಂಟಿ ಕಾರ್ಯದರ್ಶಿ ಮತ್ತು ಸರ್ಕಾರಕ್ಕೆ ಮಾಹಿತಿ ತಿಳಿದಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, ರವಿ ಅವರ ಚಟುವಟಿಕೆಗಳ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಬುಧವಾರ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ದೂರು ಸಲ್ಲಿಸಿರುವುದಾಗಿಯೂ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಮಾತನಾಡಿ, ಭ್ರಷ್ಟಾಚಾರ, ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಹೆಣ್ಣು ಮಕ್ಕಳ ಅಕ್ರಮ ಸಾಗಣೆ ಮತ್ತು ಸರ್ಕಾರಿ ಸೌಲಭ್ಯಗಳ ದುರುಪಯೋಗದ ಆರೋಪಗಳ ಕುರಿತು ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸ್ಯಾಂಟ್ರೋ ರವಿ 15 ವರ್ಷಗಳಿಂದ ದಂಧೆಕೋರನಾಗಿದ್ದು, ಈ ಹಿಂದೆಯೂ ಇದೇ ಅಕ್ರಮ ವರ್ಗಾವಣೆ ಆರೋಪಗಳು ಈತನ ವಿರುದ್ಧ ಕೇಳಿ ಬಂದಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.