ಯುವಜನತೆಗೆ ಸರ್ಕಾರ ಆದ್ಯತೆ; ಕನ್ನಡದಲ್ಲಿ ಶಬ್ದ ಕಲಿತು ಸಂದೇಶ ನೀಡಬೇಕು: ಯುವಜನೋತ್ಸವ ಸಮಾರೋಪದಲ್ಲಿ ಸಿಎಂ ಬೊಮ್ಮಾಯಿ ಸಲಹೆ
ನಾವು ಯಾವುದೇ ರಾಜ್ಯಕ್ಕೆ ಸೇರಿದವರಾಗಲಿ, ಏನೇ ಮಾಡಲಿ ಕೊನೆಯಲ್ಲಿ ನಮ್ಮೆಲ್ಲರ ಹೃದಯದಲ್ಲಿ ತುಡಿಯುವುದು ಭಾರತ ಮಾತೆ. ಭಾರತ ಮಾತೆ ನಮ್ಮೆಲ್ಲರನ್ನೂ ಬೆಸೆಯುತ್ತಾಳೆ. ಹೀಗಾಗಿ ನಮ್ಮ ಜೀವನ ಭಾರತದ ಒಳಿತಿಗಾಗಿ ಸದಾ ಮಿಡಿಯುತ್ತಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 16th January 2023 01:10 PM | Last Updated: 16th January 2023 05:01 PM | A+A A-

ಸಿಎಂ ಬೊಮ್ಮಾಯಿ
ಧಾರವಾಡ: ನಾವು ಯಾವುದೇ ರಾಜ್ಯಕ್ಕೆ ಸೇರಿದವರಾಗಲಿ, ಏನೇ ಮಾಡಲಿ ಕೊನೆಯಲ್ಲಿ ನಮ್ಮೆಲ್ಲರ ಹೃದಯದಲ್ಲಿ ತುಡಿಯುವುದು ಭಾರತ ಮಾತೆ. ಭಾರತ ಮಾತೆ ನಮ್ಮೆಲ್ಲರನ್ನೂ ಬೆಸೆಯುತ್ತಾಳೆ. ಹೀಗಾಗಿ ನಮ್ಮ ಜೀವನ ಭಾರತದ ಒಳಿತಿಗಾಗಿ ಸದಾ ಮಿಡಿಯುತ್ತಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಯುವಜನರು ತಮ್ಮ ಕೆಲಸದಲ್ಲಿ, ಸಾಧನೆಯಲ್ಲಿ ದೇಶಕ್ಕೋಸ್ಕರ ಕೆಲಸ ಮಾಡಿ, ದೇಶಕ್ಕೆ ಒಳ್ಳೆಯ ಹೆಸರು ತರುವಲ್ಲಿ ಸಾಧನೆ ಮಾಡಿ ಖುಷಿಯನ್ನು ಗಳಿಸಬೇಕು. ಖುಷಿ ನಮ್ಮ ನಮ್ಮ ಕೆಲಸ ಕಾರ್ಯಗಳಲ್ಲಿಯೇ ಸಿಗುತ್ತದೆ. ಹಿಮಾಲಯ ಪರ್ವತ ಏರಿ ತೇನ್ ಸಿಂಗ್ ಭಾರತೀಯ ತ್ರಿವರ್ಣ ಧ್ವಜ ಹಾರಿಸಿದ ಘಟನೆಯನ್ನು ವಿವರಿಸಿದರು.
ವಿದೇಶಗಳಿಗೆ ಹೋಲಿಸಿದರೆ ಭಾರತದ ಶಿಕ್ಷಣ ವ್ಯವಸ್ಥೆ ಬಹಳ ಮುಂದಿದೆ. ನಮ್ಮ ದೇಶದ ಜನರ ಬುದ್ದಿಮಟ್ಟ ವಿದೇಶಿಯರಿಗೆ ಹೋಲಿಸಿದರೆ ಹೆಚ್ಚಾಗಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ ಬೇರೆ ದೇಶಗಳಿಂದ ವಿಭಿನ್ನವಾಗಿದ್ದು ನಾವು ಅದ್ವಿತೀಯ ಸ್ಥಾನದಲ್ಲಿ ನಿಲ್ಲುತ್ತೇವೆ. ನಮ್ಮ ದೇಶದ ಜನಸಂಖ್ಯೆ ದೇಶದ ತಾಕತ್ತು ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಗರೀಬ್ ಕಲ್ಯಾಣ ಯೋಜನೆಯಿಂದ ಇಂದು ದೇಶದ ಜನರು ಹಸಿವಿನಿಂದ ಕೂರುವ, ಸಾಯುವ ಪರಿಸ್ಥಿತಿ ಇಲ್ಲ, ಕೋವಿಡ್ ಸಾಂಕ್ರಾಮಿಕ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದೆ. ನಮ್ಮ ದೇಶದ ಆರ್ಥಿಕತೆ, ಅವಕಾಶ, ಜನರ ಜೀವನ ಮಟ್ಟ ಸುಧಾರಿಸಿದೆ, ಸ್ಕಿಲ್ ಇಂಡಿಯಾ ಕಾರ್ಯಕ್ರಮ, ಮುದ್ರಾ ಯೋಜನೆ ಶಿಕ್ಷಣ ಜೊತೆಗೆ ಯುವಜನತೆಗೆ ಬಹಳ ಅನುಕೂಲವಾಗುತ್ತಿದೆ ಎಂದು ಶ್ಲಾಘಿಸಿದರು.
ಯುವಕರಿಗೆ ಕರ್ನಾಟಕ ಆದ್ಯತೆ: ನಮ್ಮ ಯುವಜನತೆಗೆ ಕರ್ನಾಟಕ ಸರ್ಕಾರ ಬಹಳ ಕಾರ್ಯಕ್ರಮಗಳನ್ನು ತಂದಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಆರಂಭಿಸಲಾಗುವುದು. ಯುವಜನತೆಗೆ ಉದ್ಯೋಗಕ್ಕೆ ಪ್ರಾಜೆಕ್ಟ್ ಗಳನ್ನು ನೀಡಲಾಗುತ್ತದೆ. 5 ಲಕ್ಷ ಯುವಕರಿಗೆ ಸ್ವ ಉದ್ಯೋಗದಡಿ ಕೆಲಸ ನೀಡುವ ಯೋಜನೆಯನ್ನು ಸರ್ಕಾರ ಮಾಡಿದೆ ಎಂದು ಹೇಳಿದರು.
ಯುವನೀತಿ ಜಾರಿಗೆ ತರಲಾಗಿದ್ದು, ಅದರಲ್ಲಿ ಶಿಕ್ಷಣ, ಉದ್ಯೋಗ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅವಕಾಶಗಳಿವೆ. ಯುವನೀತಿಗೆ ಸ್ವಾಮಿ ವಿವೇಕಾನಂದರ ಯೋಚನೆಗಳೇ ಪ್ರೇರಣೆಯಾಗಿವೆ.
ಜೀವನವೊಂದು ಆಟ, ಜೀವಿಸಲು ನಾವು ಆಡಬೇಕು ಹೊರತು ಬೇರೆಯವರಿಗೆ ತೊಂದರೆಯನ್ನುಂಟುಮಾಡಲು ಅಲ್ಲ. ಎಲ್ಲರೂ ನ್ಯಾಯನಿಷ್ಠುರವಾಗಿ ಆಟವಾಡಬೇಕು, ನಿಮ್ಮ ಯಶಸ್ಸು ನಿಮ್ಮ ಕೈಯಲ್ಲಿದೆ ಎಂದರು.
ಕನ್ನಡ ಶಬ್ದ ಬೆಳೆಸೋಣ: ಕನ್ನಡಿಗರಾಗಿ ನಾವು ಕನ್ನಡವನ್ನು ಮಾತನಾಡಿ ಬೇರೆ ರಾಜ್ಯದವರಿಂದ ಬಂದವರಲ್ಲಿ ಕನ್ನಡದಲ್ಲಿ ಮಾತನಾಡಿ ಅವರಲ್ಲಿ ಕನ್ನಡ ಭಾಷೆಯನ್ನು ಪರಿಚಯಿಸಿ ನಮ್ಮ ಭಾಷೆಯನ್ನು ಉಳಿಸಿ ಬೆಳೆಸೋಣ ಎಂದು ಸಿಎಂ ಬೊಮ್ಮಾಯಿ ಕಿವಿಮಾತು ಹೇಳಿದರು.
ಕನ್ನಡದಲ್ಲಿ ಏಳು ಶಬ್ದ ಕಲಿತು ಕನ್ನಡ ಭಾಷೆಯಲ್ಲಿಯೇ ಸಂದೇಶ ಕಳುಹಿಸಬೇಕು ಎಂದರು.
ರಾಷ್ಟ್ರೀಯ ಯುವಜನೋತ್ಸವ -2023 ರ ಸಮಾರೋಪ ಸಮಾರಂಭ, ಧಾರವಾಡ. https://t.co/Ye14TxXZCy
— CM of Karnataka (@CMofKarnataka) January 16, 2023