ಜ.31 ಕ್ಕೆ ಸಿಎಂ ಬೊಮ್ಮಾಯಿ `ರೈತ ಶಕ್ತಿ' ಯೋಜನೆಗೆ ಚಾಲನೆ: ಕೃಷಿ ಸಚಿವ ಬಿ ಸಿ ಪಾಟೀಲ್
ಜನವರಿ 31 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತರಿಗೆ ಗರಿಷ್ಠ 5 ಎಕರೆಗೆ ಡೀಸಲ್ ಗೆ ಸಹಾಯಧನ ನೀಡುವ ರೈತ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
Published: 26th January 2023 05:15 PM | Last Updated: 26th January 2023 05:15 PM | A+A A-

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ, 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಿ ಸಿ ಪಾಟೀಲ್
ಚಿತ್ರದುರ್ಗ : ಜನವರಿ 31 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತರಿಗೆ ಗರಿಷ್ಠ 5 ಎಕರೆಗೆ ಡೀಸಲ್ ಗೆ ಸಹಾಯಧನ ನೀಡುವ ರೈತ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ 74ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಗಣರಾಜ್ಯೋತ್ಸವದ ಸಂದೇಶ ನೀಡುವ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿದ ಸಚಿವರು, ಸಂವಿಧಾನ ರಚನೆ ಪೂರ್ಣಗೊಳಿಸಲು 2 ವರ್ಷ 11 ತಿಂಗಳು ಬೇಕಾಯಿತು. ಈ ಸಂವಿಧಾನ 1950 ಜನವರಿ 26 ರಂದು ಜಾರಿಗೆ ಬಂದಿತು. ಇದರ ನೆನಪಿಗಾಗಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಅಚರಣೆ ಮಾಡಲಾಗುತ್ತಿದೆ. ನಮ್ಮದು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ, ಇಲ್ಲಿ ಪ್ರಜೆಗಳು ಆಳುವವರನ್ನು ಆಯ್ಕೆ ಮಾಡುತ್ತಾರೆ. ಈ ಮೂಲಕ ಪ್ರಜೆಗಳೇ ಸ್ವತಃ ಆಡಳಿತ ನಡೆಸುವ ಮಾದರಿ ದೇಶದಲ್ಲಿದೆ ಎಂದ ಸಚಿವರು, ವೀರ ಸಂಗೊಳ್ಳಿ ರಾಯಣ್ಣ ಒಬ್ಬ ದೇಶಭಕ್ತ, ಇಂತಹ ವೀರಯೋಧ ಬಲಿದಾನಗೊಂಡ ದಿನವೂ ಇದಾಗಿದೆ ಎಂದು ಸಂಗೊಳ್ಳಿ ರಾಯಣ್ಣರನ್ನು ಕೂಡ ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಸ್ವಾಮಿ ವಿವೇಕಾನಂದ ಯುವ ಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತ್ನ ಯುವ ಸಂಘಗಳಿಗೆ ತಲಾ 05 ಲಕ್ಷ ರೂ. ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ಜ. 31 ರಂದು ಮುಖ್ಯಮಂತ್ರಿಗಳು ರೈತಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಗರಿಷ್ಠ 5 ಎಕರೆವರೆಗೆ ರೈತರು ಬಳಸುವ ಡೀಸೆಲ್ಗೆ ಸಹಾಯಧನ ಒದಗಿಸಲಾಗುವುದು ಎಂದರು.