ಹಂಪಿ ಉತ್ಸವ 2023: ವಿಐಪಿ ಪಾಸ್'ಗಳ ರದ್ದುಪಡಿಸಿದರೂ ಜನರಿಂದ ನೀರಸ ಪ್ರತಿಕ್ರಿಯೆ

ಮೂರು ದಿನಗಳ ಹಂಪಿ ಉತ್ಸವಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಎರಡನೇ ದಿನವೂ ಕೂಡ ಜನರಿಂದ ನೀರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಂಪಿ: ಮೂರು ದಿನಗಳ ಹಂಪಿ ಉತ್ಸವಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಎರಡನೇ ದಿನವೂ ಕೂಡ ಜನರಿಂದ ನೀರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಹಂಪಿ ಉತ್ಸವದ ಮೊದಲ ದಿನ ಕೂಡ ನಿರೀಕ್ಷಿಸಿದಷ್ಟು ಜನರು ಉತ್ಸವಕ್ಕೆ ಆಗಮಿಸಿರಲಿಲ್ಲ. ಹಂಪಿ ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಾಲಿ ಕುರ್ಚಿಗಳ ನಡುವೆ ಉತ್ಸವ ಉದ್ಘಾಟಿಸಿದರು. ಅತಿ ಗಣ್ಯರು, ಗಣ್ಯರು ಹಾಗೂ ಸಾರ್ವಜನಿಕರಿಗೆ ಹಾಕಿದ್ದ ಬಹುತೇಕ ಕುರ್ಚಿಗಳೆಲ್ಲ ಖಾಲಿ ಇದ್ದವು. ಉಳಿದ ಮೂರು ವೇದಿಕೆ ಬಳಿಯೂ ಜನರಿರಲಿಲ್ಲ.

ಎಲ್ಲ ವೇದಿಕೆಗಳ ಬಳಿ ಜನರಿಗಿಂತ ಕಲಾವಿದರು, ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಫಲಪುಷ್ಪ ಪ್ರದರ್ಶನ, ಜಲಕ್ರೀಡೆ, ಸಾಹಸ ಕ್ರೀಡೆ, ಅಂಗವಿಕಲರ ಕ್ರೀಡಾಕೂಟ ಸೇರಿದಂತೆ ಇತರೆಡೆಯೂ ಪ್ರೇಕ್ಷಕರು ಸುಳಿಯಲಿಲ್ಲ. ಎಲ್ಲ ಕಾರ್ಯಕ್ರಮ, ಸ್ಪರ್ಧೆಗಳು– ಕಲಾವಿದರು, ಕ್ರೀಡಾಳುಗಳಿಗೆ ಮಾತ್ರ ಸೀಮಿತವಾಗಿದ್ದಂತೆ ಕಂಡು ಬಂದಿತು.

ಬೆಳಿಗ್ಗೆಯಿಂದಲೂ ಹಂಪಿಯಲ್ಲಿ ಸಂಭ್ರಮ ಕಂಡು ಬರಲಿಲ್ಲ. ಹೊಸಪೇಟೆಯಿಂದ ಹಂಪಿಗೆ ಸಂಪರ್ಕಿಸುವ ರಸ್ತೆ, ಕಡ್ಡಿರಾಂಪುರ ಕ್ರಾಸ್‌ನಿಂದ ಹಂಪಿಯೊಳಗೆ ಬರುವ ರಸ್ತೆಗಳೆಲ್ಲ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಮಾರ್ಗದುದ್ದಕ್ಕೂ ಪೊಲೀಸರು, ಅಧಿಕಾರಿಗಳು ಹಾಗೂ ಕಲಾವಿದರ ವಾಹನಗಳಷ್ಟೇ ಓಡಾಡುತ್ತಿರುವುದು ಕಂಡು ಬಂದಿತ್ತು.

ಮುಂದುವರೆದಿದ್ದು, ಪ್ರದರ್ಶನ ಮತ್ತು ಕಾರ್ಯಕ್ರಮದ ಸ್ಥಳಗಳಲ್ಲಿ ವಿರಳ ಜನಸಂದಣಿ ಕಂಡುಬಂದಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದ ಉತ್ಸವದ ಮೊದಲ ದಿನ 10 ಸಾವಿರಕ್ಕೂ ಕಡಿಮೆ ಜನ ಸೇರಿದ್ದರು.

ಮೊದಲ ದಿನವೇ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಜನರ ಸೇರಿಸಲು ಜಿಲ್ಲಾಡಳಿತವು ವಿವಿಐಪಿ, ವಿಐಪಿಗಳ ಪಾಸ್ ಗಳನ್ನು ರದ್ದುಪಡಿಸಿತ್ತು. ಆದರೂ ಕೂಡ ಎರಡನೇ ದಿನ ಕೂಡ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಹಂಪಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಜನರು ಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಕೆಲವು ಸಂಘಟಕರು ಹೇಳಿದ್ದಾರೆ.

ಈ ನಡುವೆ ಪ್ರವಾಸೋದ್ಯಮ ಸಚಿವರು ಮತ್ತು ಶಾಸಕ ಆನಂದ್ ಸಿಂಗ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ನಡುವಿನ ಜಟಾಪಟಿ ಇದಕ್ಕೆ ಕಾರಣವಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ.

ಹಂಪಿ ಉತ್ಸವ ಇತರ ಕಾರ್ಯಕ್ರಮಗಳಂತೆ ಅಲ್ಲ. ಹಂಪಿ ಯುನೆಸ್ಕೋ ಮತ್ತು ಎಎಸ್ಐ ರಕ್ಷಿತ ಸ್ಥಳವಾಗಿದೆ. ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮದ ಪ್ರಚಾರ ಮತ್ತು ಯಶಸ್ವಿಗೊಳಿಸಲು ಸರಣಿ ಸಭೆಗಳ ನಡೆಸಿದ್ದು, ಕಾರ್ಯಕ್ರಮದ ಕೊನೆಯ ಎರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಆಗಮಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ವಾಹನ ಪ್ರವೇಶವನ್ನು ಮುಕ್ತಗೊಳಿಸಿದ್ದೇವೆಂದು ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com