ಸೂತಕ ಸಂಪ್ರದಾಯ ಆಚರಣೆ; ಬಾಣಂತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ನ್ಯಾಯಾಧೀಶರು
ಬಾಣಂತಿ, ಹಸುಗೂಸನ್ನು ಊರಿನಿಂದ ಹೊರಗಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಗುರುವಾರ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮಹಿಳೆಯನ್ನು ರಕ್ಷಿಸಿದ್ದಾರೆ.
Published: 28th July 2023 08:18 AM | Last Updated: 28th July 2023 08:18 AM | A+A A-

ತಾಯಿ ಮಗು ಇದ್ದ ಟೆಂಟ್
ತುಮಕೂರು: ಬಾಣಂತಿ, ಹಸುಗೂಸನ್ನು ಊರಿನಿಂದ ಹೊರಗಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಗುರುವಾರ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಸೂತಕವಾಗುತ್ತದೆ ಎಂದು ಮಹಿಳೆ ಮತ್ತು ಆಕೆಯ ಮಗುವನ್ನು ಗ್ರಾಮದಿಂದ ಹೊರಗೆ ಗುಡಿಸಲಿನಲ್ಲಿ ಬಿಡಲಾಗಿತ್ತು. ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಗು ಜುಲೈ 26ರಂದು ಪ್ರಾಣಬಿಟ್ಟಿತ್ತು.
ಮಗು ಮತ್ತು ತಾಯಿ ವಸಂತ ಇಬ್ಬರನ್ನೂ ಅವರ ಗ್ರಾಮದಿಂದ ದೂರವಿರುವ ಬಯಲು ಪ್ರದೇಶದಲ್ಲಿ ಬಿಡಲಾಗಿತ್ತು. ಇದು ಕಾಡುಗೊಲ್ಲ ಸಮುದಾಯದ ಸಂಪ್ರದಾಯವಾಗಿದೆ. ಮಗು ಸಾವಿಗೀಡಾದ ಬಳಿಕವೂ, ಆಕೆ ಅಶುದ್ಧ ಎಂದು ಪರಿಗಣಿಸಿದ ಸಮುದಾಯವು ತಾಯಿಯನ್ನು ಗ್ರಾಮದಲ್ಲಿರುವ ತನ್ನ ಮನೆಗೆ ಪ್ರವೇಶಿಸಲು ಅನುಮತಿ ನೀಡಿಲ್ಲ.
ಇದನ್ನೂ ಓದಿ: ತುಮಕೂರು: ಸೂತಕದ ಸಂಪ್ರದಾಯ ಆಚರಣೆ; ಬಾಣಂತಿ, ಶಿಶುವನ್ನು ಊರಿಂದ ಹೊರಗಿಟ್ಟ ಕಾಡುಗೊಲ್ಲ ಕುಟುಂಬ!
ಆಕೆಯು ಮನೆಗೆ ಪ್ರವೇಶಿಸಿದರೆ ತಮ್ಮ ಕುಲ ದೇವತೆಗಳ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂಬ ನಂಬಿಕೆ ಅವರಲ್ಲಿದೆ. ಬಳಿಕ ನ್ಯಾಯಾಧೀಶರು ತಾತ್ಕಾಲಿಕ ಟೆಂಟ್ನಲ್ಲಿದ್ದ ವಸಂತಾರನ್ನು ಭೇಟಿ ಮಾಡಿ, ಆಕೆಯನ್ನು ‘ಹಟ್ಟಿ’ಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಸಮುದಾಯದ ಇತರ ಸದಸ್ಯರೊಂದಿಗೆ ಸಭೆ ನಡೆಸಿ, ಇಂತಹ ಆಚರಣೆಗಳಿಗೆ ಕಾನೂನು ಅನುಮತಿ ನೀಡುವುದಿಲ್ಲವಾದ್ದರಿಂದ ಇನ್ಮುಂದೆ ಇಂತಹ ಪದ್ಧತಿಗಳನ್ನು ಅನುಸರಿಸದಂತೆ ಸೂಚನೆ ನೀಡಿದರು. ತಾತ್ಕಾಲಿಕವಾಗಿ ನಿರ್ಮಿಸಿದ್ದ ಗುಡಿಸಲನ್ನು ಕೂಡ ಕೆಡವಲಾಗಿದೆ.
ಇದನ್ನೂ ಓದಿ: ತುಮಕೂರು: ಸೂತಕದ ಸಂಪ್ರದಾಯಕ್ಕೆ ಮಗು ಬಲಿ; ಚಳಿಯಲ್ಲಿ ನಡುಗಿ ನಡುಗಿ ಪ್ರಾಣಬಿಟ್ಟ ಹಸುಗೂಸು!
ಇದೇ ವೇಳೆ, ಬೆಳ್ಳಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಾರ್ಡ್ಗಳು, ಔಷಧ ಸಂಗ್ರಹಣಾ ಕೊಠಡಿ, ಶೌಚಾಲಯಕ್ಕೆ ನ್ಯಾಯಾಧೀಶರು ಭೇಟಿ ನೀಡಿ, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ತಾಕೀತು ಮಾಡಿದರು.