
ದೊರೆಸ್ವಾಮಿ
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಸರ್ಕಾರ ರದ್ದುಗೊಳಿಸಬಾರದು ಎಂದು ಸರ್ಕಾರದ ಶಿಕ್ಷಣ ಸುಧಾರಣೆಗಳ ಮಾಜಿ ಸಲಹೆಗಾರ ದೊರೆಸ್ವಾಮಿ ಅವರು ಗುರುವಾರ ಒತ್ತಾಯಿಸಿದ್ದಾರೆ.
ಎನ್ಇಪಿ ಸಂಬಂಧ ನಿನ್ನೆಯಷ್ಟೇ ದೊರೆಸ್ವಾಮಿಯವರು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದರು. ಈ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಭಾಗವಾಗಿ ಮಾಡಿದ ಯಾವುದೇ ಬದಲಾವಣೆಗಳನ್ನು ಸರ್ಕಾರ ತಿರಸ್ಕರಿಸಬಾರದು ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಮರು ಪರಿಶೀಲಿಸಿ ಹೊಸ ನೀತಿ ಜಾರಿ, ಹಲವು ಜನ ವಿರೋಧಿ ಕಾಯ್ದೆ ರದ್ದುಪಡಿಸಲು ಕ್ರಮ- ಸಿಎಂ ಸಿದ್ದರಾಮಯ್ಯ
ಚುನಾವಣೆ ವೇಳೆ ಎನ್ಇಪಿ ತಿರಸ್ಕರಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ ಅಭಿವೃದ್ಧಿ, ಸಂಸ್ಥೆಗಳಿಗೆ ಸ್ವಾಯತ್ತತೆ ಮತ್ತು ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿರುವ ಕಾರಣ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಬಾರದು ಎಂದು ಒತ್ತಾಯಿಸಿದರು.
ಎನ್ ಇಪಿಯಿಂದ ಹಲವು ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಒಟ್ಟಾರೆ ನೀತಿಯನ್ನು ತಿರಸ್ಕರಿಸುವುದು ಸರಿಯಲ್ಲ. ಶಿಕ್ಷಣ ನೀತಿಗಳನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಶಿಕ್ಷಣದ ನೀತಿಯಾಗಿ ಎನ್ಇಪಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಬರುತ್ತದೆ ಎಂದು ಹೇಳಿದರು.