ಬೆಂಗಳೂರು: ಕರ್ನಾಟಕದ ಕೈಗಾರಿಕೋದ್ಯಮಿಗಳ ನಿಯೋಗ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ವಿದ್ಯುತ್ ದರ ಏರಿಕೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಕೈಗಾರಿಕೋದ್ಯಮಿಗಳ ನಿಯೋಗವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಕೆಎಫ್ಸಿಸಿಐ) ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ ನೇತೃತ್ವ ವಹಿಸಿದ್ದರು. ಗೃಹಜ್ಯೋತಿ ಯೋಜನೆ ರಾಜ್ಯ ಸರ್ಕಾರಕ್ಕೆ ಹೊರೆ ಎಂದು ಹೇಳುವುದು ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿದ್ಯುತ್ ಶುಲ್ಕ ಹೆಚ್ಚಿಸುವ ಬಗ್ಗೆ ನಮ್ಮ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್ ಸಿ) ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಿತ್ತು ಎಂದು ಭೇಟಿ ನೀಡಿದ ನಿಯೋಗಕ್ಕೆ ತಿಳಿಸಿದರು. ಅಂತೆಯೇ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮತ್ತು ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಇತರ ಸಮಸ್ಯೆಗಳನ್ನು ಪರಿಹರಿಸಲು ಸಿದ್ದರಾಮಯ್ಯ ಭರವಸೆ ನೀಡಿದರು.
ನಿಯೋಗ ಸಲ್ಲಿಸಿದ ಬೇಡಿಕೆಗಳ ಬಗ್ಗೆ ಚರ್ಚಿಸಲು ಹಣಕಾಸು ಇಲಾಖೆ, ಇಂಧನ ಇಲಾಖೆ, ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ (ಕಾಸ್ಸಿಯಾ) ಮತ್ತು ಕೆಎಫ್ಸಿಸಿಐ ನಡುವೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ನಿಯೋಗಕ್ಕೆ ಭರವಸೆ ನೀಡಿದರು.
ಕೈಗಾರಿಕಾ ವಲಯಕ್ಕೆ ಕೆಇಆರ್ಸಿ ವಿದ್ಯುತ್ ದರವನ್ನು ಹೆಚ್ಚಿಸಿದ ನಂತರ, ರಾಜ್ಯದ ಕೈಗಾರಿಕೋದ್ಯಮಿಗಳು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಎಚ್ಟಿ ಕೈಗಾರಿಕೆಗಳ ಮೇಲೆ ವಿಧಿಸುವ ವಿದ್ಯುತ್ ತೆರಿಗೆಯನ್ನು ಶೇಕಡಾ 9 ರಿಂದ 3 ಕ್ಕೆ ಇಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.
"ಇಂಧನ ಹೆಚ್ಚಳದ ಶುಲ್ಕಗಳಲ್ಲಿ ರಿಯಾಯಿತಿ ನೀಡಲು ಮತ್ತು ಇತರ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಎಂಎಸ್ಎಂಇ ನೀತಿಯನ್ನು ರೂಪಿಸಲು ನಾವು ವಿನಂತಿಸಿದ್ದೇವೆ" ಎಂದು ನಿಯೋಗ ಒತ್ತಾಯಿಸಿದೆ.
Advertisement